
ನವದೆಹಲಿ, ಆಗಸ್ಟ್ 18: ಅನೀರೀಕ್ಷಿತ ಮಳೆಯ ಅಬ್ಬರ, ನೆರೆ ಹಾವಳಿಯಿಂದ ಕೇರಳಾ ರಾಜ್ಯ ಕಂಗೆಟ್ಟಿದೆ. ಪ್ರವಾಹದಿಂದಾಗಿ ಸಾವು-ನೋವು ಅನುಭವಿಸುತ್ತಿರುವ ಕೇರಳ ಜನತೆಗ ನೆರವು ನೀಡಿ ಎಂದು ವಿರಾಟ್ ಕೊಹ್ಲಿ, ಸುನಿಲ್ ಛೆಟ್ರಿ ಸೇರಿದಂತೆ ಕ್ರೀಡಾ ಬಳಗವೇ ಕೋರಿಕೊಂಡಿದೆ.
ಕೇರಳದಲ್ಲಿ ಬಿಡದೆ ಸುರಿಯುತ್ತಿರುವ ಭೀಕರ ಮಳೆಗೆ 324ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಇನ್ನು ಮನೆ-ಜಾನುವಾರುಗಳನ್ನು ಕಳೆದುಕೊಂಡವರ ಸಂಖ್ಯೆ ಸಾವಿರ ದಾಟಿದೆ. ಸಂಕಷ್ಟದಲ್ಲಿರುವ ಕೇರಳಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ಕೋ.ರೂ. ಪರಿಹಾರ ನಿಧಿ ಘೋಷಿಸಿದ್ದಾರೆ.
ಎನ್ಡಿಆರ್ಎಫ್, ಭಾರತೀಯ ಸೇನೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಕೇರಳದಲ್ಲಿ ನಜರ ನೆರವಿಗೆ ಧಾವಿಸಿದ್ದಾರೆ. ಈಗಾಗಲೇ ಸುಮಾರು 82,000 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಲಾಗಿದೆ. ಸಂತ್ರಸ್ಥರು ಕ್ಯಾಂಪ್ ಗಳಲ್ಲಿ ಬದುಕುವಂತಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ಜನರಿಗೆ ಇನ್ನೂ ನಿಮ್ಮ ನೆರವು ಬೇಕಿದೆ ಎಂದು ಅನೇಕ ಕ್ರೀಡಾ ತಾರೆಯರು ವಿನಂತಿಸಿಕೊಂಡಿದ್ದಾರೆ. ಈಗಾಗಲೇ ನೆರವಿಗೆ ಧಾವಿಸಿದವರಿಗೂ ಧನ್ಯವಾದ ತಿಳಿಸಿದ್ದಾರೆ.
ನೆರೆ ಹಾವಳಿಯಿಂದ ಕೇರಳ ಜನತೆ ಸಮಸ್ಯೆಗೀಡಾಗುವಂತಾಗಿದೆ. ಸಮಸ್ಯೆ ನಿವಾರಣೆಯಾಗಲಿದೆ; ಧೈರ್ಯವಾಗಿರಿ. ರಕ್ಷಣೆ ಸಂಬಂಧಿಸಿ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಿ. ಸಾಧ್ಯವಾದಷ್ಟು ಮನೆಯೊಳಗೇ ಇರಲು ಪ್ರಯತ್ನಿಸಿ. ನೆರವಿಗೆ ಧಾವಿಸಿದ ಎನ್ಡಿಆರ್ಎಫ್, ಭಾರತೀಯ ಸೇನೆಗೆ ಧನ್ಯವಾದಗಳು ಎಂದು ಕೊಹ್ಲಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಕೇರಳಕ್ಕೆ ನೆರವು ಬೇಕು. ನಮ್ಮಿಂದಾದಷ್ಟು ನೆರವಾಗೋಣ ಎಂದು ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಟ್ವಿಟರ್ ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.
ಪ್ರವಾಹಕ್ಕೆ ಸಿಲುಕಿರುವ ಕೇರಳದ ನೆರವಿಗೆ ಧಾವಿಸಿರುವ ಭಾರತೀಯ ಸೇನೆ, ಸಂಘ-ಸಂಸ್ಥೆಗಳಿಗೆ ಕೈ ಮುಗಿದು ಗೌರವಿಸಬೇಕು ಎಂದು ಕೋರಿಕೊಂಡ ಕ್ರಿಕೆಟ್ ದಿಗ್ಗಜ ಸಚಿನ್.
ತ್ರಿವೆಂಡ್ರಮ್ ನಲ್ಲಿರುವ ಸ್ನೇಹಿತರೆ, ದಯವಿಟ್ಟು ನಿಮ್ಮ ವಾಹನದ ಪೆಟ್ರೋಲ್ ಟ್ಯಾಂಕ್ ಗೆ ಸಾಧ್ಯವಾದಷ್ಟು ಕಡಿಮೆ ಪೆಟ್ರೋಲ್ ಬಳಸಿ. ಪೆಟ್ರೋಲ್ ಮಿತವಾಗಿ ಉಪಯೋಗಿಸಿ. ಯಾಕೆಂದರೆ ನೆರೆ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಲು ಸುಮಾರು 1000 ಲೀಟರ್ ಪೆಟ್ರೋಲ್ ನ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ವಿನಂತಿಸಿಕೊಂಡಿದ್ದಾರೆ.
ಸಾನಿಯಾ ಮಿರ್ಜಾ, ರೋಹಿತ್ ಶರ್ಮಾ, ಹರ್ಭಜನ್ ಸಿಂಗ್, ಗೌತಮ್ ಗಂಭಿರ್ ಕೂಡ ಈ ನೆಲೆಯಲ್ಲಿ ವಿನಂತಿಸಿಕೊಂಡಿದ್ದಾರೆ.