ನವದೆಹಲಿ, ಡಿಸೆಂಬರ್ 01 : ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಕರ ಸ್ಥಾನಕ್ಕೆ 5 ಬಾರಿಯ ವೀಶ್ವ ಬಾಕ್ಸಿಂಗ್ ಚಾಂಪಿಯಮ್ ಮೇರಿ ಕೋಮ್ ಅವರು ರಾಜಿನಾಮೆ ನೀಡಿದ್ದಾರೆ.
ಮೇರಿ ಕೋಮ್ ಗೆ ಐದನೇ ಬಾರಿಗೆ ಏಷ್ಯನ್ ಚಾಂಪಿಯನ್ ಶಿಪ್ ಕಿರೀಟ
ಕ್ರೀಡಾ ಸಚಿವರಾದ ರಾಜವರ್ಧನ್ ಸಿಂಗ್ ಅವರು "ಸಕ್ರಿಯ ಕ್ರೀಡಾಪಟುಗಳು ಸಮಿತಿಯಲ್ಲಿ ಇರುವಂತಿಲ್ಲ' ಎಂದು ಹೇಳಿಕೆ ನೀಡಿರುವ ಕಾರಣ ಮೇರಿಕೋಮ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜಿನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇರಿ ಕೋಮ್ ಅವರು "ನಾನು ಹುದ್ದೆಯನ್ನು ಬಯಸಿರಲಿಲ್ಲ ಅವರೇ ಬಲವಂತ ಪಡಿಸಿ ಹುದ್ದೆ ನೀಡಿದ್ದರು, ಆದರೆ ಈಗ ಸಚಿವರ ಹೇಳಿಕೆಯ ನಂತರವೂ ಸ್ಥಾನದಲ್ಲಿ ಮುಂದುವರೆದು ವಿನಾ ಕಾರಣ ವಿವಾದ ಮೈಮೇಲೆ ಎಳೆದುಕೊಳ್ಳುವ ಇಷ್ಟವಿಲ್ಲದೆ ರಾಜಿನಾಮೆ ನೀಡುತ್ತಿದ್ದೇನೆ' ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಮೇರಿ ಕೋಮ್ ಅವರ ಜೊತೆಗೆ ಸಮಿತಿಯಲ್ಲಿ ಅಭಿನವ್ ಬಿಂದ್ರಾ, ಸುಶೀಲ್ ಕುಮಾರ್, ಅಖಿಲ್ ಕುಮಾರ್ ಮುಂತಾದ ಹೆಸರಾಂತ ಕ್ರೀಡಾಪಟುಗಳಿದ್ದಾರೆ. ಇದರಲ್ಲಿ ಮೇರಿ ಕೋಮ್ ಮತ್ತು ಸುಶೀಲ್ ಕುಮಾರ್ ಇಬ್ಬರೂ ಸಕ್ರಿಯ ಕ್ರೀಡಾಪಟುಗಳಾಗಿದ್ದಾರೆ.
"ಸಮಿತಿಗೆ ಆಯ್ಕೆ ಮಾಡಿದಾಗಲೇ ಈ ಬಗ್ಗೆ ಕ್ರೀಡಾ ಕಾರ್ಯದರ್ಶಿಯ ಬಳಿ ಸಕ್ರಿಯ ಕ್ರೀಡಾಪಟುಗಳು ಸದಸ್ಯರಾಗಬಹುದೇ? ಎಂಬ ಬಗ್ಗೆ ವಿಚಾರಿಸಿದ್ದೆ, ಆಗ ಅವರು ಒಪ್ಪಿಗೆ ಸೂಚಿಸಿದ್ದರು, ಈಗ ಸಚಿವರು ಏಕೆ ಹೀಗೆ ಹೇಳಿದ್ದಾರೊ ತಿಳಿಯದು' ಎಂದಿದ್ದಾರೆ. ಮೇರಿಕೋಮ್ ಅವರ ಈ ಹೇಳಿಕೆ ಕ್ರೀಡಾ ಸಚಿವಾಲಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ.
ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಕರ ಸಮಿತಿಯ 12 ಮಂದಿ ಸದಸ್ಯರೂ ಈ ಹಿಂದಿನ ಕ್ರೀಡಾ ಮಂತ್ರಿ ವಿಜಯ್ ಘೋಯಲ್ ಅವರು ನೇಮಿಸಿದ್ದವರು ಹಾಗಾಗಿ ರಾಜವರ್ಧನ್ ಸಿಂಗ್ ಅವರು ಸಮಿತಿಯ ಸದಸ್ಯರ ಸ್ಥಾನ ತೆರವುಗೊಳಿಸಲು ಈ ರೀತಿಯ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಕರ ಸ್ಥಾನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಸಿದ್ದ ಮೇರಿ ಕೋಮ್ ಅವರು ಉತ್ತಮ ಗುಣಮಟ್ಟದ ಬಾಕ್ಸ್ರ್ಗಳನ್ನು ಗುರುತಿಸಿದ್ದರು. ಯುವತಿಯರು ಹೆಚ್ಚಿ ಸಂಖ್ಯೆಯಲ್ಲಿ ಬಾಕ್ಸಿಂಗ್ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಅವರು ಪ್ರೇರಣೆ ಒದಗಿಸಿದ್ದರು.