
ಅಂತಾರಾಷ್ಟ್ರೀಯ ಕುಸ್ತಿಪಟುವಾಗಿ ಬೆಳೆಯಬೇಕೆನ್ನುವ ಛಲ
ಅದೇ ರೀತಿ ಕುಸ್ತಿ ಅಖಾಡಾದಲ್ಲಿ ತಂದೆಯ ಜೊತೆ ಆಗಾಗ ಪಟ್ಟು ಹಾಕುತ್ತಿದ್ದ ಹುಡುಗಿಯೊಬ್ಬಳು ಇಂದು ರಾಷ್ಟ್ರಮಟ್ಟದ ಕುಸ್ತಿಪಟುವಾಗಿ ಬೆಳೆದು ನಿಂತಿದ್ದಾಳೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ಸಾತ್ನಳ್ಳಿ ಗ್ರಾಮದ ತುಕಾರಾಮ್ ಪಾಟೀಲ್ ಹಾಗೂ ಜೀಜಾಬಾಯಿ ದಂಪತಿಯ ಪುತ್ರಿ ಸುಜಾತಾ ಪಾಟೀಲ್ ಕುಸ್ತಿ ಅಖಾಡದಲ್ಲಿ 'ಕರ್ನಾಟಕದ ಕಿಶೋರಿ' ಎಂಬ ಬಿರುದಿಗೂ ಪಾತ್ರಳಾಗಿದ್ದಾಳೆ.
ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿ ಬೆಳೆಯಬೇಕು ಎನ್ನುವ ಛಲ ಹೊಂದಿರುವ ಸುಜಾತಾ, ಹಳಿಯಾಳ ತಾಲ್ಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿ 10ನೇ ತರಗತಿ ವ್ಯಾಸಂಗ ಪೂರ್ಣಗೊಳಿಸಿ, ಇದೀಗ ದಾವಣಗೆರೆಯ ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.

ಕಿರಿಯ ವಯಸ್ಸಿನಲ್ಲಿಯೇ ಕುಸ್ತಿ ಆಖಾಡಕ್ಕೆ
ಸುಜಾತಾ ಐದನೇ ತರಗತಿಯಲ್ಲಿರುವಾಗಲೇ ಕುಸ್ತಿ ಅಖಾಡಕ್ಕೆ ಇಳಿದಿದ್ದಳು. ತಂದೆ ತುಕಾರಾಮ್ ಪಾಟೀಲ್ ಈಕೆಗೆ ಪ್ರೋತ್ಸಾಹ ನೀಡಿದರು. ಹೀಗಾಗಿ ಅಲ್ಲಿಂದ ಕುಸ್ತಿಯಲ್ಲಿ ಸೆಣಸಾಟ ಪ್ರಾರಂಭಿಸಿ, ಕ್ರೀಡಾ ಶಾಲೆಗೆ ಸೇರಿ ಕುಸ್ತಿಯಲ್ಲಿ ಮತ್ತಷ್ಟು ಬಲಿಷ್ಠವಾದಳು. ವಸತಿ ನಿಲಯದ ಕುಸ್ತಿ ತರಬೇತುದಾರರಾದ ಕಾಡೇಶ ನ್ಯಾಮಗೌಡ ಹಾಗೂ ಬಾಳಕೃಷ್ಣ ದಡ್ಡಿ ಕುಸ್ತಿಯಲ್ಲಿನ ವಿವಿಧ ಕೌಶಲಗಳನ್ನು ಹೇಳಿಕೊಟ್ಟರು. ಅವುಗಳನ್ನೆಲ್ಲ ಸುಜಾತಾ ಚಾಚೂ ತಪ್ಪದೇ ಮೈಗೂಡಿಸಿಕೊಂಡಳು.
ನಮ್ಮೂರ ಪ್ರತಿಭೆ: ಕುಂದಾಪುರದ ಬಲಭೀಮ ವಿಶ್ವನಾಥ್ ಭಾಸ್ಕರ್ ಗಾಣಿಗ
ಸುಜಾತಾ ಪಾಟೀಲ್, ಒಟ್ಟು ನಾಲ್ಕು ಬಾರಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾಳೆ. 2017-18ನೇ ಸಾಲಿನಲ್ಲಿ ಮಹಾರಾಷ್ಟ್ರ, 2018- 19ನೇ ಸಾಲಿನಲ್ಲಿ ಒಡಿಶಾ, ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಹರಿಯಾಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.

ಸಾತ್ನಳ್ಳಿಯ ಪಾಟೀಲ್ ಕುಸ್ತಿ ಕುಟುಂಬ
ಹಳಿಯಾಳ ತಾಲ್ಲೂಕಿನ ಸಾತ್ನಳ್ಳಿಯ ತುಕಾರಾಮ್ ಪಾಟೀಲ್ ಅವರದ್ದು 'ಕುಸ್ತಿ ಕುಟುಂಬ' ಎಂದೇ ಪ್ರಸಿದ್ಧವಾಗಿದೆ. ಸ್ವತಃ ಅವರು ಕೂಡ ಈ ಮೊದಲು ಕುಸ್ತಿ ಆಡುತ್ತಿದ್ದರು. ನಂತರ ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ಹಾಗೂ ಒಬ್ಬ ಮಗನಿಗೂ ಕುಸ್ತಿ ತರಬೇತಿ ನೀಡಿ, ಮೂವರನ್ನೂ 'ಪೈಲ್ವಾನ್'ಗಳನ್ನಾಗಿ ಮಾಡಿದ್ದಾರೆ.
ಸುಜಾತಾ ಈಗ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಮಿಂಚುತ್ತಿದ್ದರೆ, ಈಕೆಯ ಅಕ್ಕ ಸುವರ್ಣ ಕೂಡ ರಾಷ್ಟ್ರೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುವರ್ಣ ಕೊಲ್ಲಾಪುರದಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇತ್ತ ಅಣ್ಣ ಸಹದೇವ ಕೂಡ ಕುಸ್ತಿಪಟುವಾಗಿದ್ದು, ಸದ್ಯ ಅಷ್ಟಾಗಿ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿಲ್ಲ. ಇನ್ನೊಬ್ಬ ಅಕ್ಕ ಕುಮಾರಿ ಅಥ್ಲೆಟಿಕ್ಸ್ನಲ್ಲಿ ಮಿಂಚುತ್ತಿದ್ದಾರೆ.
""ನನ್ನಂತೆಯೇ ಹೆಣ್ಣುಮಕ್ಕಳನ್ನು ಕುಸ್ತಿಪಟುಗಳನ್ನಾಗಿ ತಯಾರು ಮಾಡಿದ್ದೇನೆ. ಗಂಡು ಮಕ್ಕಳಂತೆ ಅವರೂ ಅಖಾಡದಲ್ಲಿ ಕುಸ್ತಿ ಆಡುತ್ತಾರೆ. ಇದು ಹೆಮ್ಮೆ ಎನಿಸುತ್ತದೆ,'' ಎಂದು ತಂದೆ ತುಕಾರಾಮ್ ಪಾಟೀಲ್ ಸಂತೋಷ ಹಂಚಿಕೊಂಡಿದ್ದಾರೆ.

ಕುಸ್ತಿಯಲ್ಲಿ ಸುಜಾತಾಗೆ ಒಲಿದುಬಂದ ಪ್ರಶಸ್ತಿಗಳು
* ಹಳಿಯಾಳದಲ್ಲಿ 2014ರಿಂದ 2018ರವರೆಗೆ ನಡೆದ ರಾಜ್ಯ ಮತ್ತು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ನಾಲ್ಕು ಬಾರಿ ಪ್ರಥಮ ಸ್ಥಾನ.
* 2018-19ರಲ್ಲಿ ಹಳಿಯಾಳದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ.
* ಆಳ್ವಾಸ್ನಲ್ಲಿ 2017-18ರಲ್ಲಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ.
* 2019-20ರಲ್ಲಿ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಪ್ರಥಮ ಸ್ಥಾನ.
* 2016-17 ಹಾಗೂ 2018-19ರಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.

ಹಳಿಯಾಳದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ ಪ್ರಥಮ
* ವಿಜಯಪುರದಲ್ಲಿ 2017-18ರಲ್ಲಿ ನಡೆದ ರಾಜ್ಯಮಟ್ಟದ ಟೂರ್ನಿಯಲ್ಲಿ ದ್ವಿತೀಯ ಸ್ಥಾನ.
* ಜಮಖಂಡಿಯಲ್ಲಿ 2016-17ರಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
* ಮೈಸೂರಿನಲ್ಲಿ 2018-19ರಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ದಸರಾ ಕುಸ್ತಿಯಲ್ಲಿ ದ್ವಿತೀಯ ಸ್ಥಾನ.
* 2015-16ರಲ್ಲಿ ಗದಗದಲ್ಲಿ ನಡೆದ ರಾಜ್ಯ ಮಟ್ಟದ ಸೆಣಸಾಟದಲ್ಲಿ ತೃತೀಯ
* 2017-18ರಲ್ಲಿ ಕುಂಬಾರಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಪೈಪೋಟಿಯಲ್ಲಿ ತೃತೀಯ
* 2018-19ರಲ್ಲಿ ಹಳಿಯಾಳದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ ಪ್ರಥಮ
"ನಮ್ಮೂರ ಪ್ರತಿಭೆ' ಕುಸ್ತಿ ಪೈಲ್ವಾನ್ ಸುಜಾತಾ ಪಾಟೀಲ್ ಇನ್ನಷ್ಟು ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಬೇಕು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮತ್ತಷ್ಟು ಪದಕ ಗೆಲ್ಲಲಿ ಎಂಬುದೇ ನಮ್ಮ ಆಶಯ.


Click it and Unblock the Notifications












