ಮುರುಕಲು ಮನೆಯ ಅಂತಾರಾಷ್ಟ್ರೀಯ ಸಾಧಕನಿಗೆ ಬೆನ್ನು ತಟ್ಟೋರು ಬೇಕು

ದಾವಣಗೆರೆ, ಸೆಪ್ಟೆಂಬರ್ 28: 'ನಾನೇನಾದರೂ ಸಾಧಿಸಬೇಕಪ್ಪ' ಅಂತ ಮನಸ್ಸಿನಲ್ಲೊಂದು ವಿಚಾರ ಬಂದು ಬಿಟ್ಟರೆ ಸಾಕು ಹಠಕ್ಕೆ ಬಿದ್ದವರ ಹಾಗೆ ಸಾಧಿಸಿಯೇ ತೀರುತ್ತಾರಲ್ಲ? ಅಂಥವರ ಸಾಲಿನಲ್ಲಿ ಇಲ್ಲೊಬ್ಬ ಸಾಧಕರಿದ್ದಾರೆ. ಹೊಟ್ಟೆಪಾಡಿಗಾಗಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಹುಡುಗನೀಗ ದೇಶವೇ ಹೆಮ್ಮೆ ಪಡುವ ಕ್ರೀಡಾಸಾಧಕ. ಹೆಸರು ಹಾಲೇಶ್ ಕೆ.
ಒಮ್ಮೆ ಮೇಲಿನ ಚಿತ್ರವನ್ನೇ ಅರೆಕ್ಷಣ ನಿಟ್ಟಿಸಿ ನೋಡಿ. ಹಾಲೇಶ್ನ ಬದುಕು, ಅದರೊಳಗೆ ಒಕ್ಕರಿಸಿರೋ ಬಡತನದ ಚಿತ್ರಣವನ್ನು ಮೇಲಿನ ಆ ಚಿತ್ರವೇ ಬಿಚ್ಚಿಡುತ್ತೆ. ಹಾಲೇಶ್ನ ಮನೆಯಲ್ಲಿ ಕಡು ಬಡತನವಿದೆ. ಆದರೆ ಪ್ರತಿಭೆ ವಿಚಾರದಲ್ಲಿ ಮಾತ್ರ ಹಾಲೇಶ್ ಅಪ್ಪಟ ಸಿರಿವಂತ. ಕ್ರೀಡಾ ಪ್ರತಿಭೆಯ ಆತನಲ್ಲಿರುವ ಬಲು ದೊಡ್ಡ ಆಸ್ತಿ.
ಅನಾಯಾಸವಾಗಿ ಅಡಿಡಾಸೋ, ನೈಕೋ ಶೂ ಕೊಳ್ಳೋ ಶಕ್ತಿಯಿರುವವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪದಕ ಗೆದ್ದರೆ ಅಲ್ಲಿ ಅಂಥ ವಿಶೇಷತೆ ಇರಲಾರದು. ಆದರೆ ಬರಿಗಾಲಿನ ಬಡ ಹುಡುಗ ಓಡಿ ಮೆಡಲ್ಲು ಗೆಲ್ಲುತ್ತಾನೆ ನೋಡಿ; ಅಂಥವರನ್ನು ನಾವು ಬೆನ್ನುತಟ್ಟಿ ಪ್ರೋತ್ಸಾಹಿಸಲೇಬೇಕು.

ಕುರಿ ಕಾಯೋ ಕಾಯಕ
ಹಾಲೇಶ್ ಹುಟ್ಟು ಪ್ರತಿಭಾವಂತನಾದರೂ ಬಡತನ ಆತನನ್ನು ಹಿಂದಕ್ಕೆ ಜಗ್ಗುತ್ತಲೇಯಿದೆ. ಬದುಕು ಆತನಿಗೆ ಕುರಿ ಕಾಯುವ ಕೆಲಸಕ್ಕೆ ಒಗ್ಗಿಕೊಳ್ಳಲೇಬೇಕಾದ ಅನಿವಾರ್ಯತೆ ತಂದೊಡ್ಡಿದೆ. ಆದರೇನಂತೆ ಕುರಿ ಕಾಯುತ್ತ, ಅವ್ವನಿಗೆ ಆಸರೆಯಾಗುತ್ತ ಹಾಲೇಶ್ ದೇಶವೇ ಹೆಮ್ಮೆ ಪಡುವಂತ ಸಾಧನೆಯನ್ನೂ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಹಾಲೇಶ್ ಪದಕ ಗೆಲ್ಲುತ್ತಿದ್ದಾರೆ. ತಾನು ದೇಶಕ್ಕಾಗಿ ಪದಕ ಗೆದ್ದಾಗ ತನ್ನ ಬಡತನದ ನೋವನ್ನು ಅದರಲ್ಲೇ ಮರೆಯುತ್ತಿದ್ದಾರೆ.

ಗುಡಿಸಲಿನಲ್ಲಿ ವಾಸ
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮ ಹಾಲೇಶನ ಊರು. ಮಳೆಗಾಲದಲ್ಲಿ ಮನೆಯೊಳಗೆ ನೀರಿಳಿದು ತೋಯಿಸುವುದನ್ನು ತಪ್ಪಿಸಲು ಮನೆಗೆ ಹಂಚು ಹಾಕಲಾಗಿದೆ ಬಿಟ್ಟರೆ ಇವರದ್ದು ಅಕ್ಷರಶಃ ಗುಡಿಸಲೆ. ಅಡಿಕೆ ಹಾಳೆ, ತೆಂಗಿನ ಗರಿಯೇ ಇಲ್ಲಿ ಮನೆಯ ಅಡ್ಡಗೋಡೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಹಾಲೇಶ್ ತಾಯಿಯ ನೆರಳಲ್ಲೇ ಬೆಳೆದವರು. ಬಡತನದಿಂದಾಗಿ 4ನೇ ಕ್ಲಾಸಿನಲ್ಲಿದ್ದಾಗ ಶಾಲೆಗೆ ನಮಸ್ಕಾರ ಹೊಡೆದಿದ್ದ ಹಾಲೇಶ್ ಮತ್ತೆ ವಿದ್ಯಾಭ್ಯಾಸ ಮುಂದುವರೆಸಿ ಸದ್ಯಚಿತ್ರದುರ್ಗದ ಸರಸ್ವತೀ ಲಾ ಕಾಲೇಜುನಲ್ಲಿ ಪ್ರಥಮ ವರ್ಷದ ಕಾನೂನು ಪದವಿ ಅಧ್ಯಯನ ಮಾಡುತ್ತಿದ್ದಾರೆ.

ಭಾರತಕ್ಕೆ ಬೆಳ್ಳಿ ಪದಕ
ಒಬ್ಬ ಕ್ರೀಡಾಪಟುವಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಶೂ ಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದರೆ ಬದುಕು ಆತನನ್ನು ಅಷ್ಟರಮಟ್ಟಿಗೆ ಕಟ್ಟಿಹಾಕಲು ಯತ್ನಿಸುತ್ತಿದೆ ಎಂದರ್ಥ. ಅದರಲ್ಲೂ ದೂರದ ಓಟಗಳಾದ ಗುಡ್ಡಗಾಡು ಓಟ, 5 ಕಿ.ಮೀ., 10 ಕಿ.ಮೀ., ಮ್ಯಾರಥಾನ್ ಸ್ಪರ್ಧೆಗಳಲ್ಲಿ ಬರಿಗಾಲಲ್ಲಿ ಓಡೋದು ಖಂಡಿತಾ ಸುಲಭವಿಲ್ಲ. ಕಾಲಡಿ ರಕ್ತ ಹೆಪ್ಪುಗಟ್ಟುತ್ತದೆ, ಓಡುತ್ತಿರುವಾಗಲೇ ಕಾಲಿನ ಚರ್ಮ ಕಿತ್ತುಬರುತ್ತದೆ, ಸಹಿಸಲಾರದು ನೋವು ಕೊಡುವ ಬೊಬ್ಬೆಗಳು ಕಾಲಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅಷ್ಟಾಗಿಯೂ ಹಾಲೇಶ್ ಬರಿಗಾಲಲ್ಲೇ ಓಡಿ ಬೆಳೆದು ನಿಂತಿದ್ದಾರೆ. ಕಳೆದ ಆಗಸ್ಟ್ 26ರಿಂದ 29ರ ವರೆಗೆ ನೇಪಾಳದ ಪೋಕರ್ ಸ್ಟೇಡಿಯಂನಲ್ಲಿ ನಡೆದ ಯುನೈಟೆಡ್ ಇಂಟರ್ ನ್ಯಾಷನಲ್ ಗೇಮ್ಸ್ 2019ರಲ್ಲಿ 5,000 ಮೀ. ಓಟದಲ್ಲಿ ಭಾರತ ಪ್ರತಿನಿಧಿಸಿ 15 ನಿಮಿಷ 26 ಸೆಕೆಂಡ್ ಕಾಲಾವಧಿಯೊಂದಿಗೆಹಾಲೇಶ್ ಬೆಳ್ಳಿ ಪದಕ ಗೆದ್ದಿದ್ದರು.

ಸಾಲು ಸಾಲು ಸಾಧನೆ
ಮ್ಯಾರಥಾನ್ ಓಟಗಳ ಸಾಲಿನಲ್ಲಿ ಬರುವ ದೂರದ ಓಟದ ಅನೇಕ ಸ್ಪರ್ಧೆಗಳಲ್ಲಿ ಹಾಲೇಶ್ ಪಾಲ್ಗೊಳ್ಳುತ್ತಿದ್ದಾರೆ. ಹಾಲೇಶ್, ಪ್ರಮುಖ ಸ್ಪರ್ಧೆಗಳಲ್ಲಿ ಒಂದೇ ವರ್ಷದಲ್ಲಿ ಸುಮಾರು 30ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಿದೆ. ಕಳೆದ ಮಾರ್ಚ್ನಲ್ಲಿ ಪಂಜಾಬ್ನಲ್ಲಿ ನಡೆದಿದ್ದ ವರ್ಲ್ಡ್ ಚಾಂಪಿಯನ್ಷಿಪ್ನಲ್ಲಿ ಹಾಲೇಶ್ ಪಾಲ್ಗೊಂಡಿದ್ದರು. ಜೂನ್ 9-11ರ ವರೆಗೆ ಗೋವಾದಲ್ಲಿ ನಡೆದಿದ್ದ 6ನೇ ನ್ಯಾಷನಲ್ ಗೇಮ್ಸ್ನ 5000 ಮೀ. ಓಟದಲ್ಲಿ ಕರ್ನಾಟಕಕ್ಕೆ ಚಿನ್ನದ ಪದಕ ಗೆದ್ದಿದ್ದರು. ಇದಲ್ಲದೆ ಹಿಂದೆಯೂ ಹಾಲೇಶ್ ರಾಜ್ಯಕ್ಕೆ, ದೇಶಕ್ಕೆ ಅನೇಕ ಪದಕಗಳನ್ನು ತಂದಿದ್ದಿದೆ.

ಹಾಲೇಶನಿಗೆ ನೆರವಿನ ಕೈಗಳು ಬೇಕು
ರಾಜ್ಯಕ್ಕೆ, ದೇಶಕ್ಕೆ ಪದಕ ಗೆದ್ದು ತವರಿಗೆ ಆಗಮಿಸುವ ಹಾಲೇಶನ್ನನ್ನು ಹೆಗಲ ಮೇಲೆ ಹೊತ್ತು, ಮೆರವಣಿಗೆ ಮಾಡಿ ಸಂಭ್ರಮಿಸುವರಿದ್ದಾರೆ. ಆದರೆ ಹಾಲೇಶನ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವವರ ಅವಶ್ಯಕತೆಯಿದೆ. ದಾವಣಗೆರೆ, ಜಗಳೂರು, ಸೊಕ್ಕೆ ಗ್ರಾಮದ ಕ್ರೀಡಾಭಿಮಾನಿಗಳು, ಸಹೃದಯರು, ಜನ ಪ್ರತಿನಿಧಿಗಳು, ಕ್ರೀಡಾ ಇಲಾಖಾಧಿಕರು ಹಾಲೇಶನಿಗೆ ಆರ್ಧಿಕ ನೆರವಿತ್ತು ಪ್ರೋತ್ಸಾಹಿಸಿದರೆ ಮುಂದಿನ ದಿನಗಳಲ್ಲಿ ಹಾಲೇಶ ರಾಜ್ಯಕ್ಕೆ, ದೇಶಕ್ಕೆ ಪದಕ ಗೆಲ್ಲಲು ಅಂಥ ಪ್ರೋತ್ಸಾಹಗಳು ಆತನಿಗೆ ಟಾನಿಕ್ಕಾಗಲಿದೆ. ಬಡ, ಪ್ರತಿಭಾವಂತ ಕ್ರೀಡಾಪಟು ಹಾಲೇಶ ನಿಮ್ಮದೇ ನೆರವಿಗೆ ಎದುರು ನೋಡುತ್ತಿದ್ದಾನೆ. ಸಹೃದಯರಿದ್ದರೆ ನೆರವು ನೀಡಿ. ನಾಳೆ ಆತ ಪದಕ ಗೆದ್ದರೆ ಆ ಖುಷಿಯಲ್ಲಿ ನಿಮ್ಮದೂ ಒಂದು ಪಾಲಿರಲಿ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications