ನವದೆಹಲಿ, ಜ, 13: ಭಾರತದ ವಿಶ್ವಕಪ್ ತಂಡಕ್ಕೆ ಸ್ಟುವರ್ಟ್ ಬಿನ್ನಿ ಆಯ್ಕೆಯಾದಾಗ ಟೀಕೆಗಳ ಸುರಿಮಳೆಯೇ ಕೇಳಿಬಂದಿತ್ತು. ಆದರೆ ಕರ್ನಾಟಕ ಕೋಚ್ ಗಳು ಬಿನ್ನಿ ಈ ಎಲ್ಲ ಟೀಕೆಗಳಿಗೆ ತಮ್ಮ ಆಟದ ಮೂಲಕವೇ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಬಿನ್ನಿ ವೇಗದ ಬೌಲರ್ ಆಗಿ ಮತ್ತು ಕೆಳಕ್ರಮಾಂಕದ ಪ್ರಮುಖ ಬ್ಯಾಟ್ಸ್ ಮನ್ ಆಗಿ ಕೊಡುಗೆ ನೀಡಲಿದ್ದಾರೆ, ತಂಡಕ್ಕೆ ಇಂಥ ಆಲ್ ರೌಂಡರ್ ಅಗತ್ಯವಿತ್ತು. ನ್ಯೂಜಿಲೆಂಡ್ ಪಿಚ್ ಗಳಲ್ಲಿ ಬಿನ್ನಿ ಎದುರಾಳಿ ತಂಡಕ್ಕೆ ಮಾರಕವಾಗಲಿದ್ದಾರೆ ಎಂದು ಕರ್ನಾಟಕ ಬೌಲಿಂಗ್ ಕೋಚ್ ಮನ್ಸೂರ್ ಅಲಿ ಖಾನ್ ತಿಳಿಸಿದ್ದಾರೆ.[ಬಿನ್ನಿ ಆಯ್ಕೆ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ]
ಇಂಗ್ಲೆಂಡ್ ನಲ್ಲಿ ಹೇಳಿಕೊಳ್ಳುವಂತ ಆಟ ಪ್ರದರ್ಶಿಸದ ಬಿನ್ನಿ ಬಾಂಗ್ಲಾ ವಿರುದ್ಧ 4 ರನ್ ಗೆ 6 ವಿಕೆಟ್ ಕಿತ್ತು ಸಾಧನೆ ಮಾಡಿದ್ದರು. ಸಂಭಾವ್ಯ 30 ಜನರ ತಂಡದಲ್ಲಿದ್ದ ವೇಗದ ಬೌಲರ್ ಮತ್ತು ಬಾಟ್ಸ್ ಮನ್ ಬಿನ್ನಿ ಒಬ್ಬರೇ ಆಗಿದ್ದರು. ಚೆಂಡನ್ನು ಸ್ವಿಂಗ್ ಮಾಡುವುದು ಬಿನ್ನಿಗೆ ಕರಗತವಾಗಿದೆ, ಅಲ್ಲದೇ 6 ಅಥವಾ 7 ನೇ ಕ್ರಮಾಂಕದಲ್ಲಿ ಬಿನ್ನಿ ಉತ್ತಮ ಆಟ ಆಡಬಲ್ಲರು ಎಂದು ಬ್ಯಾಟಿಂಗ್ ಕೋಚ್ ಜೆ. ಅರುಣ್ ಕುಮಾರ್ ಹೇಳಿದ್ದಾರೆ.
ಕಳೆದ ಸಾರಿ ಇಂಗ್ಲೆಂಡ್ ಗೆ ತೆರಳಿದ್ದಾಗಿನ ಬಿನ್ನಿ ಬೇರೆ, ಈಗ ನೋಡುತ್ತಿರುವ ಬಿನ್ನಿಯೇ ಬೇರೆ. ಅವರ ಬ್ಯಾಟಿಂಗ್ ನಲ್ಲಿ ತುಂಬಾ ಬದಲಾವಣೆಗಳಾಗಿವೆ. ಬಿನ್ನಿ ಒಬ್ಬ ಬೌಲರ್ ಅನ್ನುವುದಕ್ಕಿಂತ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿ ಪ್ರಯೋಜನಕ್ಕೆ ಬರಲಿದ್ದಾರೆ ಎಂದು ಇಬ್ಬರು ಕೋಚ್ ಗಳು ತಿಳಿಸಿದ್ದಾರೆ.[ವಿಶ್ವಕಪ್ ಗೆ 15 ಸದಸ್ಯರ ತಂಡ ಪ್ರಕಟ, ಸ್ಟುವರ್ಟ್ ಬಿನ್ನಿಗೆ ಸ್ಥಾನ]
ವಿರಾಟ್ ಒಬ್ಬ ಪ್ರೋತ್ಸಾಹದಾಯಕ ನಾಯಕ
ವಿರಾಟ್ ಕೊಹ್ಲಿ ಒಬ್ಬ ಪ್ರೋತ್ಸಾಹದಾಯಕ ನಾಯಕ. ಐಸಿಎಲ್(ಇಂಡಿಯನ್ ಕ್ರಿಕೆಟ್ ಲೀಗ್) ನಲ್ಲಿ ಬಿನ್ನಿ ತೋರಿಸಿದ ಆಟ ಮರೆಯುವಂತಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಬಿನ್ನಿ ಅನೇಕ ಸಂಗತಿಗಳನ್ನು ಕಲಿತುಕೊಂಡಿದ್ದಾರೆ. ವಿರಾಟ್ ತಂಡದಲ್ಲಿದ್ದಾಗ ಉದಯೋನ್ಮುಖ ಆಟಗಾರರಿಗೆ ತೊಂದರೆಯಾಗಲ್ಲ ಎಂದು ಹೇಳಿದ್ದಾರೆ.
ರಾಬಿನ್ ಉತ್ತಪ್ಪ ತಂಡಕ್ಕೆ ಆಯ್ಕೆಯಾಗದಿರುವುದು ವೈಯಕ್ತಿಕವಾಗಿ ಬೇಸರ ತಂದಿದೆ. ಐಪಿಎಲ್ ಮತ್ತು ರಣಜಿ ಟ್ರೋಫಿಯಲ್ಲಿ ಆತ ಉತ್ತಮ ಪ್ರದರ್ಶನ ನೀಡದ್ದರೂ ಆಯ್ಕೆಯಾಗದ್ದು ನೋವು ತಂದಿದೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ಕ್ರಿಕೆಟ್ ಕೇವಲ ಒಬ್ಬನ ಕ್ರೀಡೆಯಲ್ಲ. ತಂಡ ಉತ್ತಮ ಪ್ರದರ್ಶನ ನೀಡಿದರೆ ಗೆಲುವು ಸಾಧ್ಯ. ಟೆಸ್ಟ್ ತಂಡದಲ್ಲಿ ಲೋಕೇಶ್ ರಾಹುಲ್ ಉತ್ತಮ ಆಟ ಸಂತಸ ತಂದಿದೆ. ರಾಜ್ಯವನ್ನು ಕೇವಲ ಒಬ್ಬರು ಪ್ರತಿನಿಧಿಸುತ್ತಿರುವುದು ಸ್ವಲ್ಪ ಬೇಸರಕ್ಕೆ ಕಾರಣವಾಗಿದ್ದರೂ ದೇಶ ಗೆಲ್ಲುವುದು ಮುಖ್ಯ ಎಂದು ಇಬ್ಬರು ಅಭಿಪ್ರಾಯ ಪಟ್ಟಿದ್ದಾರೆ.