
ನವದೆಹಲಿ, ಜುಲೈ 31: ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಮತ್ತು ಹಾಕಿ ದಂತಕತೆ ಸರ್ದಾರ್ ಸಿಂಗ್ ಅವರು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿಜೇತರನ್ನು ಆಯ್ಕೆ ನಡೆಸಲಿರುವ 12 ಮಂದಿಯ ಆಯ್ಕೆ ಸಮಿತಿಯಲ್ಲಿ ಸೇರಿಕೊಂಡಿದ್ದಾರೆ.
ಕಳೆದ ವರ್ಷದಂತೆಯೇ ಈ ವರ್ಷ ಕೂಡ ರಾಷ್ಟ್ರೀಯ ಪುರಸ್ಕಾರಕ್ಕಾಗಿ ಆರಿಸಲು ಒಂದೇ ಸಮಿತಿಯನ್ನು ರಚಿಸಲಾಗಿದೆ. ಕ್ರೀಡಾಪಟುಗಳ ಮತ್ತು ಕೋಚ್ಗಳಿಗನುಸಾರ ನೀಡಲಾಗುವ ಪ್ರಶಸ್ತಿಗಳಿಗೆ ಅರ್ಹರನ್ನು ಈ ಸಮಿತಿಯೇ ಆರಿಸಲಿದೆ.
ಇದೇ ಆಯ್ಕೆ ಸಮಿತಿಯಲ್ಲಿ ಪ್ಯಾರಾಲಂಬಿಕ್ನಲ್ಲಿ ಬೆಳ್ಳಿ ಪದಕ ವಿಜೇತ ಅಥ್ಲೀಟ್ ದೀಪಾ ಮಲಿಕ್ ಕೂಡ ಇದ್ದಾರೆ. 'ವಿವಾದಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನಾವು ಈ ವರ್ಷ ಕೂಡ ಒಂದೇ ಆಯ್ಕೆ ಸಮಿತಿಯ ಮೂಲಕ ವಿಜೇತರನ್ನು ಆರಿಸಲಿದ್ದೇವೆ,' ಎಂದು ಕ್ರೀಡಾ ಸಚಿವಾಲಯ ಪಿಟಿಐಗೆ ತಿಳಿಸಿದೆ.
ಆಯ್ಕೆ ಸಮಿತಿಯಲ್ಲಿರುವ ಇತರ ಸದಸ್ಯರೆಂದರೆ, ಟೇಬಲ್ ಟೆನಿಸ್ ಪ್ಲೇಯರ್ ಮೊನಾಲಿಸಾ ಬರುವಾ ಮೆಹ್ತಾ, ಬಾಕ್ಸರ್ ವೆಂಕಟೇಶನ್ ದೇವರಾಜನ್, ಕ್ರೀಡಾ ಕಾಮೆಂಟೇಟರ್ ಮನೀಶ್ ಬಟಾವಿಯಾ ಮತ್ತು ಪತ್ರಕರ್ತ ಅಶೋಕ್ ಸಿಂಹ, ನೀರು ಭಾಟಿಯಾ. ಪ್ರತೀ ವರ್ಷ ಆಗಸ್ಟ್ 29ರಂದು ಹಾಕಿ ದಿಗ್ಗಜ ಧ್ಯಾನ್ ಚಂದ್ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳನ್ನು ನೀಡಲಾಗುತ್ತದೆ.