ಇಂಗ್ಲೆಂಡ್ ತಂಡದ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್ವಾಶ್ ಅವಮಾನಕ್ಕೀಡಾದ ಶ್ರೀಲಂಕಾ ತಂಡಕ್ಕೆ ಏಕದಿನ ಸರಣಿಯ ಆರಂಭಕ್ಕೂ ಮುನ್ನ ಮತ್ತೊಂದು ದೊಡ್ಡ ಆಘಾತ ಕಾದಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಮೂವರು ಕ್ರಿಕೆಟಿಗರು ಬಯೋಬಬಲ್ ಉಲ್ಲಂಘಿಸಿದ ಕಾರಣಕ್ಕೆ ಅಮಾನತುಗೊಂಡಿದ್ದಾರೆ.
ಶ್ರೀಲಂಕಾ ಕ್ರಿಕೆಟರ್ಗಳಾದ ಕುಸಾಲ್ ಮೆಂಡಿಸ್, ದನುಷ್ಕಾ ಗುಣತಿಲಕ ಮತ್ತು ನಿರೋಶನ್ ಡಿಕ್ವೆಲ್ಲಾ ಅವರನ್ನು ಬಯೋಬಬಲ್ ಉಲ್ಲಂಘಿಸಿದ ಪ್ರಕರಣದಲ್ಲಿ ತಪ್ಪಿತಸ್ಥರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತವರಿಗೆ ವಾಪಾಸ್ ಕಳುಹಿಸಲು ಲಂಕಾ ಮಂಡಳಿ ನಿರ್ಧರಿಸಿದೆ. ಶ್ರೀಲಂಕಾ ಕ್ರಿಕೆಟ್ನ ಕಾರ್ಯದರ್ಶಿ ಮೋಹನ್ ಡಿ ಸಿಲ್ವ ತಮ್ಮ ಹೇಳಿಕೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬಯೋಬಬಲ್ ಉಲ್ಲಂಘಿಸಿ ಎಡವಟ್ಟು ಮಾಡಿಕೊಂಡರಾ ಲಂಕಾ ಕ್ರಿಕೆಟಿಗರು?
"ಬಯೋಬಬಲ್ ಉಲ್ಲಂಗಿಸಿದ ಕಾರಣಕ್ಕಾಗಿ ಶ್ರೀಲಂಕಾ ಕ್ರಿಕೆಟ್ನ ಕಾರ್ಯಕಾರಿ ಸಮಿತಿ ಕುಸಲ್ ಮೆಂಡಿಸ್, ದನುಷ್ಕಾ ಗುಣತಿಲಕ ಮತ್ತು ನಿರೋಷನ್ ಡಿಕ್ವೆಲ್ಲಾ ಅವರನ್ನು ಅಮಾನತುಗೊಳಿಸಿದೆ. ತಕ್ಷಣವೇ ಅವರನ್ನು ಶ್ರೀಲಂಕಾಗೆ ವಾಪಾಸ್ ಕರೆಸಿಕೊಳ್ಳಲಾಗುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಶ್ರಿಲಂಕಾ ಭಾನುವಾರ 3ನೇ ಪಂದ್ಯದಲ್ಲಿ ಸೋಲು ಕಂಡಿತ್ತು. ಈ ಸೋಲಿನ ನಂತರ ರಾಥ್ರಿ ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್ ಡಿಕ್ವೆಲ್ಲಾ ಹಾಗೂ ಕುಸಾಲ್ ಮೆಂಡಿಸ್ ನೈಟ್ಔಟ್ ಹೋಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ಆಟಗಾರರು ಈ ಬಯೋಬಬಲ್ ಆರೋಪ ಉಲ್ಲಂಘನೆ ಮಾಡಿರುವುದು ಖಚಿತವಾದರೆ ಕ್ರಮಕೈಗೊಳ್ಳುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿತ್ತು. ಈಗ ಮೂವರು ಕ್ರಿಕೆಟಿಗರನ್ನು ಅಮಾನತುಗೊಳಿಸಲಾಗಿದೆ.
ಒಂದೆಡೆ ಕಳಪೆ ಪ್ರದರ್ಶನದಿಂದಾಗಿ ಶ್ರೀಲಂಕಾ ಕ್ರಿಕೆಟ್ ತಂಡ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ಮಧ್ಯೆ ಶ್ರೀಲಂಕಾ ಕ್ರಿಕೆಟಿಗರು ತಾವಾಗಿಯೇ ಮಾಡಿಕೊಂಡ ಎಡವಟ್ಟಿಗೆ ಈಗ ಅಮಾನತುಗೊಳ್ಳುವ ಮೂಲಕ ಲಂಕಾ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು ಜೂನ್ 29ರಿಂದ ಏಕದಿನ ಸರಣಿ ಆರಂಭವಾಗಲಿದೆ.