ಬೆಂಗಳೂರು, ಸೆ.1: ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಹಾಗೂ ಭಾರತಕ್ಕೆ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕ್ರಿಕೆಟಿಗ ಯುವರಾಜ್ ಸಿಂಗ್ ಬೆಂಗಳೂರಿನಲ್ಲಿ ಮಂಗಳವಾರ ಪ್ರದರ್ಶನ ಕ್ರಿಕೆಟ್ ಪಂದ್ಯವಾಡಲಿದ್ದಾರೆ. ತಲಾ ಏಳು ಜನ ಆಟಗಾರರಿರುವ ತಂಡವನ್ನು ಬೋಲ್ಟ್ ಹಾಗೂ ಯುವರಾಜ್ ಮುನ್ನಡೆಸಲಿದ್ದಾರೆ.
ಉದ್ಯಾನ ನಗರಿಯಲ್ಲಿ ನಡೆಯಲಿರುವ ಎಂಟು ಓವರ್ಗಳ ಪ್ರದರ್ಶನ ಕ್ರಿಕೆಟ್ ಪಂದ್ಯ ಪ್ಯೂಮಾ ಕ್ರೀಡಾ ಚಟುವಟಿಕೆ ಪ್ರೋತ್ಸಾಹಕ್ಕಾಗಿ ನಡೆಸಲಾಗುತ್ತಿದೆ. ಮಂಗಳವಾರ ನಗರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 4 ರಿಂದ 5 ರ ನಡುವೆ ಪ್ರತಿ ತಂಡ ನಾಲ್ಕು ಓವರ್ಗಳ ಕ್ರಿಕೆಟ್ ಪಂದ್ಯವನ್ನು ಆಡಲಿದೆ ಎಂದು ಮೂಲಗಳು ತಿಳಿಸಿವೆ.
ಬೋಲ್ಟ್ ನೇತೃತ್ವದ ಕ್ರಿಕೆಟ್ ತಂಡದಲ್ಲಿ ಬೋಲ್ಟ್ ಸ್ನೇಹಿತ ನ್ಯೂಜೆಂಟ್ ವಾಲ್ಕರ್ ಜೂನಿಯರ್ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ಇದ್ದಾರೆ. ಯುವರಾಜ್ ಸಿಂಗ್ ಟೀಮ್ನಲ್ಲಿ ವೇಗದ ಬೌಲರ್ ಜಹೀರ್ಖಾನ್ ಇದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರನ್ನು ಇಷ್ಟಪಡುವ ಉಸೇನ್ ಬೋಲ್ಟ್ ತನ್ನ ಸಹ ಓಟಗಾರ ಯೋಹನ್ ಬ್ಲೇಕ್ ರಂತೆ ಕ್ರಿಕೆಟ್ ಆಡುವ ಇಚ್ಛೆ ವ್ಯಕ್ತಪಡಿಸಿದ್ದರು. ಜಮೈಕಾ ಶ್ರೇಷ್ಠ ಕ್ರೀಡಾಪಟುಗಳ ನಾಡು ಮೈಕಲ್ ಹೋಲ್ಡಿಂಗ್, ಫ್ರಾಂಕ್ ವೋರೆಲ್, ಕರ್ಟ್ನಿ ವಾಲ್ಶ್, ಕ್ರೀಸ್ ಗೇಲ್ ರಂಥ ದೈತ್ಯ ಪ್ರತಿಭೆಗಳನ್ನು ಪ್ರಪಂಚಕ್ಕೆ ಪರಿಚಯಿಸಿದೆ. ಈಗ ಬೋಲ್ಟ್ ಹಾಗೂ ಬ್ಲೇಕ್ ಕೂಡಾ ಅವಕಾಶ ಸಿಕ್ಕರೆ ಬ್ಯಾಟ್ ಹಿಡಿದು ಕ್ರಿಕೆಟ್ ಅಂಗಳಕ್ಕೆ ಇಳಿಯುತ್ತಾರಂತೆ.