
ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೊದಲನೇ ಏಕದಿನ ಪಂದ್ಯವನ್ನಾಡುತ್ತಿವೆ. ಈ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಅಸ್ಟ್ರೇಲಿಯಾದ ಮಾಜಿ ನಾಯಕ ಆ್ಯಡಂ ಗಿಲ್ಕ್ರಿಸ್ಟ್ ಭಾರತೀಯರ ಕ್ಷಮೆ ಕೋರಿದ್ದಾರೆ. ಕಾಮೆಂಟರಿ ವೇಳೆಯ ಪ್ರಮಾದಕ್ಕಾಗಿ ಗಿಲ್ಲಿ ಕ್ಷಮೆ ಕೇಳಿದ್ದಾರೆ.
ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದು, ಭಾರತದ ವೇಗಿ ನವದೀಪ್ ಸೈನಿ ಬೌಲಿಂಗ್ ವೇಳೆ ಕಾಮೆಂಟರಿ ಬಾಕ್ಸ್ನಲ್ಲಿದ್ದ ಶೇನ್ ವಾರ್ನ್ ಮತ್ತು ಆ್ಯಡಮ್ ಗಿಲ್ಕ್ರಿಸ್ಟ್ ಸೈನಿ ಬಗ್ಗೆ ಮಾತನಾಡಿದರು. ತನ್ನ ತಂದೆ ಸಾವನ್ನಪ್ಪಿದರೂ ದೇಶಕ್ಕಾಗಿ ಆಸ್ಟ್ರೇಲಿಯಾ ಸರಣಿ ಆಡಲುದ್ದೇಶಿಸಿದ್ದಾಗಿ ಸೈನಿಯನ್ನು ಇಬ್ಬರೂ ಶ್ಲಾಘಿಸಿದರು.
ಭಾರತ vs ಆಸ್ಟ್ರೇಲಿಯಾ, 1ನೇ ಏಕದಿನ ಪಂದ್ಯ, Live ಸ್ಕೋರ್ಕಾರ್ಡ್
ಅಸಲಿಗೆ ತಂದೆ ನಿಧನರಾಗಿದ್ದು ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಅವರದ್ದು. ಕಳೆದ ವಾರ ಸಿರಾಜ್ ತಂದೆ ಮೊಹಮ್ಮದ್ ಗೌಸ್ ಸಾವನ್ನಪ್ಪಿದ್ದರು. ಆದರೆ ಗಿಲ್ಲಿ ಮತ್ತು ವಾರ್ನ್ ಸಿರಾಜ್ ಹೆಸರು ಹೇಳುವ ಬದಲು ಸೈನಿ ಹೆಸರು ಹೇಳಿದ್ದರು. ಇದಕ್ಕಾಗಿ ಗಿಲ್ಕ್ರಿಸ್ಟ್ ಕ್ಷಮೆ ಕೇಳಿ ಟ್ವೀಟ್ ಮಾಡಿದ್ದಾರೆ.
ಗಿಲ್ಕ್ರಿಸ್ಟ್ ತಪ್ಪಾಗಿ ಕಾಮೆಂಟ್ ಮಾಡುತ್ತಲೇ ಟ್ವಿಟರ್ ಮೂಲಕ ಕ್ರಿಕೆಟಿಗರು ಸತ್ಯ ಸಂಗತಿ ಮನವರಿಕೆ ಮಾಡುವ ಯತ್ನ ಮಾಡಿದ್ದಾರೆ. ಕೂಡಲೇ ಅಂಶು ನಯ್ಯರ್ ಎಂಬವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಗಿಲ್ಲಿ, 'ಹೆಸರು ಉಲ್ಲೇಖ ಮಾಡುವಾಗ ನಾನು ತಪ್ಪು ಮಾಡಿದ್ದೆ. ನನ್ನ ತಪ್ಪಿಗೆ ಸಿರಾಜ್ ಮತ್ತು ಸೈನಿ ಇಬ್ಬರಲ್ಲೂ ಕ್ಷಮೆ ಕೇಳುತ್ತೇನೆ' ಎಂದು ಬರೆದುಕೊಂಡಿದ್ದಾರೆ. ತಪ್ಪೋದು ಸಹಜ. ತಿದ್ದಿ ನಡೆಯೋನು ಮನುಜ. ತಪ್ಪೊಪ್ಪಿಕೊಂಡ ದಿಗ್ಗಜ ಗಿಲ್ಲಿ ನಡೆಗೂ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.