ದ್ವೀಪರಾಷ್ಟ್ರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಾ ಸಾಗುತ್ತಿದೆ. ಜನರ ತಾಳ್ಮೆಯ ಕಟ್ಟೆಯೊಡೆದಿದ್ದು ಸರ್ಕಾರದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಂಥಾ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಪ್ರತಿಕ್ರಿಯೆ ನೀಡಿದ್ದು ಭಾರತದಲ್ಲಿ ಐಪಿಎಲ್ನಲ್ಲಿ ಭಾಗವಹಿಸಿರುವ ಕ್ರಿಕೆಟ್ ಆಟಗಾರರ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾವೈರಸ್ನ ಬಳಿಕ ಶ್ರೀಲಂಕಾದಲ್ಲಿ ಸತತವಾಗಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಾ ಸಾಗಿದ್ದು ಪ್ರಸ್ತುತ ಶ್ರೀಲಂಕಾ ದಿವಾಳಿಯಾಗಿದೆ. ವಿದೇಶಿ ವಿನಿಮಯ ಮೀಸಲು ಹಣದ ಕೊರತೆ, ಹಣದುಬ್ಬರದ ಏರಿಕೆಯಿಂದಾಗಿ ದ್ವೀಪರಾಷ್ಟ್ರದಲ್ಲಿ ಅಗತ್ಯವಸ್ತುಗಳ ಕೊರತೆ ತೀವ್ರವಾಗಿದೆ. ಇಂಧನ, ನಿತ್ಯಬಳಕೆಯ ಸಾಮಾಗ್ತಿಗಳು ಹಾಗೂ ಔಷಧಿಯ ವಸ್ತುಗಳ ಕೊರತೆ ಕೂಡ ಹೆಚ್ಚಾಗಿದೆ. ಹೀಗಾಗಿ ದೇಶದೆಲ್ಲೆಡೆ ಜನರು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
IPL 2022: ಧೋನಿ, ಜಡೇಜಾ ಅಲ್ಲ, ಸಿಎಸ್ಕೆ ಸಾಲುಸಾಲು ಪಂದ್ಯ ಸೋಲುತ್ತಿರುವುದು ಈತನಿಂದ!
ಈ ಹಿನ್ನಲೆಯಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗಾ ಪ್ರತಿಕ್ರಿಯೆ ನೀಡಿದ್ದಾರೆ. "ಐಪಿಎಲ್ನಲ್ಲಿ ಯಾವೆಲ್ಲಾ ಆಟಗಾರರು ಆಡುತ್ತಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ನಾನು ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ. ಆದರೆ ಅವರು ಒಂದು ವಾರಗಳ ಕಾಲ ತಮ್ಮ ಕರ್ತವ್ಯವನ್ನು ಬಿಟ್ಟು ಇಲ್ಲಿಗೆ ಬಂದು ಪ್ರತಿಭಟನೆಗೆ ಬೆಂಬಲವನ್ನು ನೀಡಬೇಕು" ಎಂದು ಅರ್ಜುನ ರಣತುಂಗ ಮನವಿ ಮಾಡಿದ್ದಾರೆ. ಎಎನ್ಐ ರಣತುಂಗಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಪಂದ್ಯಗಳು ಮುಂಬೈ ಹಾಗೂ ಪುಣೆಯಲ್ಲಿ ನಡೆಯುತ್ತಿದ್ದು ಶ್ರೀಲಂಕಾದ ಕೆಲ ಆಟಗಾರರು ಮಾತ್ರವಲ್ಲದೆ ಮಹೇಲಾ ಜಯವರ್ಧನೆ, ಕುಮಾರ ಸಂಗಕ್ಕರ, ಲಿಸಿತ್ ಮಲಿಂಗಾ ಅವರಂತಾ ಮಾಜಿ ಕ್ರಿಕೆಟಿಗರು ಕೂಡ ಟೂರ್ನಿಯ ಭಾಗವಾಗಿದ್ದಾರೆ. ವನಿಂದು ಹಸರಂಗಾ, ಭಾನುಕಾ ರಾಜಪಕ್ಷ, ದುಶ್ಮಂತಾ ಚಮೀರಾ, ಚಮಿಕಾ ಕರುಣರತ್ನೆ ಮತ್ತು ಮಹೀಶಾ ತೀಕ್ಷಣ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಆಟಗಾರರಾಗಿದ್ದಾರೆ.
ಪಂಜಾಬ್ ಕಿಂಗ್ಸ್ ಪರವಾಗಿ ಆಡುತ್ತಿರುವ ರಾಜಪಕ್ಷ ಸಾಮಾಜಿಕ ಜಾಲತಾಣದಲ್ಲಿ ಏಪ್ರಿಲ್ 3ರಂದು ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿದ್ದರು. ಕುಮಾರ ಸಂಗಕ್ಕರ, ಜಯವರ್ಧನೆ ಕೂಡ ಸೇರಿದಂತೆ ಇತರ ಕ್ರಿಕೆಟಿಗರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
SRH vs GT: ಸೋಲನ್ನೇ ಕಾಣದಿದ್ದ ಗುಜರಾತ್ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಗೆಲುವು ಕಂಡ ಸನ್ ರೈಸರ್ಸ್
"ಕೆಲ ಕ್ರಿಕೆಟ್ ಆಟಗಾರರು ನಿಜಕ್ಕೂ ಕೂಡ ಐಪಿಎಲ್ನಲ್ಲಿ ಅದ್ಧೂರಿಯಾಗಿ ಭಾಗಿಯಾಗಿದ್ದು ಇನ್ನೂ ಕೂಡ ತಮ್ಮ ದೇಶದ ಬಗ್ಗೆ ಮಾತನಾಡಿಲ್ಲ. ದುರದೃಷ್ಟವಶಾತ್ ಜನರು ಸರ್ಕಾರದ ವಿರುದ್ಧ ಮಾತನಾಡಲು ಭಯಪಡುತ್ತಿದ್ದಾರೆ. ಕ್ರಿಕೆಟಿಗರು ಕೂಡ ಸಚಿವಾಲಯದ ಅಡಿಯಲ್ಲಿ ಬರುವ ಆಟಗಾರರಾಗಿದ್ದು ತಮ್ಮ ತಮ್ಮ ಕೆಲಸಗಳನ್ನು ಉಳಿಸಿಕೊಳ್ಳುವುದರಲ್ಲಿ ನಿರತವಾಗಿದ್ದಾರೆ. ಆದರೆ ಅವರು ಇಂಥಾ ಸಂದರ್ಭದಲ್ಲಿ ಮುಂದೆ ಬಂದು ನಿಲ್ಲುವ ಧೈರ್ಯಮಾಡಬೇಕಿದ್ದು ಪ್ರತಿಭಟನೆಗೆ ತಮ್ಮ ಬೆಂಬಲವನ್ನು ನೀಡಬೇಕಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗಾ.
"ತಪ್ಪುಗಳು ನಡೆಯುತ್ತಿರುವಾಗ ಅದರ ವಿರುದ್ಧ ಧ್ವನಿಯೆತ್ತುವ ಧೈರ್ಯ ನಿಮ್ಮಲ್ಲಿರಬೇಕು. ಇಂಥಾ ಸಂದರ್ಭದಲ್ಲಿ ತಮ್ಮ ಕೆಲಸಗಳ ಬಗ್ಗೆ ಯೋಚನೆ ಮಾಡಬಾರದು" ಎಂದಿದ್ದಾರೆ ಅರ್ಜುನ ರಣತುಂಗಾ. ಇನ್ನು ತಾನು ಈ ಪ್ರತಿಭಟನೆಯಲ್ಲಿ ಭಾಗಿಯಾಗದ ಬಗ್ಗೆ ಭಿನ್ನ ಪ್ರತಿಕ್ರಿಯೆ ನೀಡಿದ ರಣತುಂಗಾ ತನ್ನ ನಿಲುವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಜನರು ನನ್ನಲ್ಲಿ ನೀವು ಯಾಕೆ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಇದಕ್ಕೆ ಕಾರಣ ನಾನು ಕಳೆದ 19 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಇದು ರಾಜಕಾರಣದ ವಿಷಯವಲ್ಲ. ಈ ಪ್ರತಿಭಟನೆಗೆ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿ ಭಾಗಿಯಾಗಿಲ್ಲ. ಅದುವೇ ಈ ದೇಶದ ಜನರ ದೊಡ್ಡ ಸಾಮರ್ಥ್ಯವಾಗಿದೆ" ಎಂದಿದ್ದಾರೆ ಅರ್ಜುನ ರಣತುಂಗಾ.