ಕೊಹ್ಲಿ ಕೂಡ ಬೌಲಿಂಗ್ ಮಾಡಬಹುದು
ಬೌಲಿಂಗ್ ಮಾಡುತ್ತಾರೆ ಎನ್ನುವ ಕಾರಣದಿಂದ ದಿನೇಶ್ ಕಾರ್ತಿಕ್ ಬದಲಿಗೆ ದೀಪಕ್ ಹೂಡಾಗೆ ಅವಕಾಶ ನೀಡಿರಬಹುದು. ಒಂದು ಅಥವಾ ಎರಡು ಓವರ್ ಬೌಲಿಂಗ್ ಮಾಡುತ್ತಾರೆ ಎಂದು ನೀವು ಅವಕಾಶ ನೀಡುವುದಾದರೆ, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಸಹ ಬೌಲಿಂಗ್ ಮಾಡಬಹುದು.
ಆದರೆ ಟೀಂ ಇಂಡಿಯಾಗೆ ಉತ್ತಮ ಫಿನಿಶರ್ ಬೇಕು, ನಾಲ್ಕು ಎಸೆತಗಳನ್ನು ಆಡಿದರೆ ಕನಿಷ್ಠ ಎರಡು ಬೌಂಡರಿ ಗಳಿಸುವ ಆಟಗಾರ ಬೇಕು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಂದ್ಯ ಗೆಲ್ಲಿಸಲು ಆಗಲ್ಲ
ದೀಪಕ್ ಹೂಡಾ ಆಯ್ಕೆ ಹಿಂದಿನ ತರ್ಕವೇ ನನಗೆ ಅರ್ಥವಾಗುತ್ತಿಲ್ಲ. ಟೀಂ ಇಂಡಿಯಾಗೆ ಫಿನಿಷರ್ ಬೇಕು ಎನ್ನುವ ಕಾರಣಕ್ಕೆ ದಿನೇಶ್ ಕಾರ್ತಿಕ್ರನ್ನು 37ನೇ ವಯಸ್ಸಿನಲ್ಲಿ ಆಯ್ಕೆ ಮಾಡಿದ್ದೀರಿ. ಆದರೆ ಅವರಿಗೆ ಆಡಲು ಅವಕಾಶ ನೀಡುತ್ತಿಲ್ಲ, ಇದು ಯಾವ ಅರ್ಥವನ್ನು ಕೊಡುತ್ತದೆ?, ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತು ಆಟಗಳನ್ನು ಮುಗಿಸಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
ನಮ್ಮ ಬ್ಯಾಟರ್ಗಳು ನಮ್ಮ ಬೌಲರ್ಗಳಿಗೆ 15-20 ರನ್ಗಳ ಹೆಚ್ಚುವರಿ ಕುಶನ್ ನೀಡಬೇಕಾಗಿತ್ತು. ನಾವು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 190 ರನ್ ಗಳಿಸುವ ಸ್ಥಿತಿಯಲ್ಲಿದ್ದೆವು, ಆದರೆ ಕೇವಲ 170 ಗಳಿಸಿದೆವು. ಹೂಡಾ ಬದಲಿಗೆ ದಿನೇಶ್ ಕಾರ್ತಿಕ್ ಇದ್ದಿದ್ದರೆ ಭಾರತ ಇನ್ನು ಹೆಚ್ಚಿನ ರನ್ ಗಳಿಸುತ್ತಿತ್ತು ಎಂದು ಹೇಳಿದ್ದಾರೆ.
ಎರಡೂ ಪಂದ್ಯಗಳಲ್ಲಿ ದೀಪಕ್ ಹೂಡಾ ವಿಫಲ
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದೀಪಕ್ ಹೂಡಾ ಪಾಕಿಸ್ತಾನದ ವಿರದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 3 ರನ್ ಗಳಿಸಿ ಔಟಾದರು.
ಆಲ್ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಏಷ್ಯಾಕಪ್ನಿಂದ ಹೊರಗುಳಿದ ನಂತರ ಸ್ಥಾನ ಪಡೆದ ದೀಪಕ್ ಹೂಡಾಗೆ ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಅವಕಾಶವನ್ನೇ ನೀಡಿಲ್ಲ. ಬೌಲಿಂಗ್ ಮಾಡಲು ಅವಕಾಶ ಕೊಡದಿದ್ದ ಮೇಲೆ, ಹೂಡಾರನ್ನು ಆಯ್ಕೆ ಮಾಡಿದ್ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ವಿಶ್ವಕಪ್ ಆಡಬೇಕು ಅಂತಿದ್ರೆ ಉಳಿದ ಪಂದ್ಯಗಳಿಗೆ ಆಯ್ಕೆ ಮಾಡಿ
ದಿನೇಶ್ ಕಾರ್ತಿಕ್ ವಿಶ್ವಕಪ್ ಆಡಬೇಕೆಂದು ನೀವು ಬಯಸಿದರೆ, ಉಳಿದ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಿ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಟಿ20 ವಿಶ್ವಕಪ್ಗಾಗಿ ತಂಡದ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೆಹ್ವಾಗ್ ಒತ್ತಾಯಿಸಿದ್ದಾರೆ.
ಏಷ್ಯಾಕಪ್ ಮುಂದಿನ ಪಂದ್ಯದಲ್ಲಿ ದೀಪಕ್ ಹೂಡಾಗೆ ವಿರಾಮ ನೀಡಿ ಅಕ್ಸರ್ ಪಟೇಲ್ ಅಥವಾ ದಿನೇಶ್ ಕಾರ್ತಿಕ್ಗೆ ಅವಕಾಶ ನೀಡಿ ಎಂದು ಹೇಳಿದ್ದಾರೆ. ದಿನೇಶ್ ಕಾರ್ತಿಕ್ ವಿಶ್ವಕಪ್ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರಿಂದ, ಮೂರು ವರ್ಷಗಳ ನಂತರ ಟೀಂ ಇಂಡಿಯಾಗೆ ವಾಪಸ್ ಆಗಿದ್ದರು.