ಬೆಂಗಳೂರು, ನ.18: ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕರ್ ಅವರನ್ನು ಕರ್ನಲ್ ಸಿಕೆ ನಾಯ್ಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕ್ರಿಕೆಟ್ ಕ್ಷೇತ್ರ ತೋರಿರುವ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2013-14ನೇ ಸಾಲಿನ ಬಿಸಿಸಿಐ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ,ಭುವನೇಶ್ವರ್ ಕುಮಾರ್ ಅವರಿಗೆ ಪಾಲಿ ಉಮ್ರಿಗಾರ್ ಪ್ರಶಸ್ತಿ ಲಭಿಸಿದರೆ, ವಿನಯ ಕುಮಾರ್ ಗೆ ಲಾಲಾ ಅಮರ್ ನಾಥ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಲ್ ಸಿ.ಕೆ ನಾಯ್ಡು ಪ್ರಶಸ್ತಿಗೆ ಆಯ್ಕೆಯಾಗಿರುವುದರ ಬಗ್ಗೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವೆಂಗ್ಸರ್ಕರ್ ಅವರು, ಭಾರತೀಯ ಕ್ರಿಕೆಟ್ ರಂಗದ ಅತ್ಯುನ್ನತ ಪ್ರಶಸ್ತಿ ಎಂದೇ ಬಿಂಬಿತವಾಗಿರುವ ಸಿಕೆ ನಾಯ್ಡು ಪ್ರಶಸ್ತಿ ತಮಗೆ ಬಂದಿರುವುದು ಸಂತಸವಾಗಿದೆ ಎಂದು ಹೇಳಿದ್ದಾರೆ.
ನವೆಂಬರ್ 21 ಶುಕ್ರವಾರ ಸಂಜೆ 6.30ರ ವೇಳೆಗೆ ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ನಲ್ಲಿ ನಯಲಿರುವ 8ನೇ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವೆಂಗ್ಸರ್ಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಒಂದು ಸ್ಮರಣಿಕೆ ಮತ್ತು 25 ಲಕ್ಷ ರು.ಚೆಕ್ ಅನ್ನು ಒಳಗೊಂಡಿದೆ.
ವೆಂಗ್ಸರ್ಕರ್ ಅವರು ಒಟ್ಟು 116 ಟೆಸ್ಟ್ ಪಂದ್ಯಗಳನ್ನು ಆಡಿ 6868 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 35 ಅರ್ಧಶತಕಗಳು
ದಾಖಲಾಗಿವೆ. ಇನ್ನು 129 ಏಕದಿನ ಪಂದ್ಯಗಳನ್ನಾಡಿರುವ ಅವರು ಒಟ್ಟು 3508 ರನ್ ಗಳಿಸಿದ್ದು, 1 ಶತಕ 23 ಅರ್ಧಶತಕಗಳನ್ನು ಗಳಿಸಿದ್ದಾರೆ.ಭಾರತ ತಂಡದ ನಾಯಕ ಮತ್ತು ತಂಡದ ಆಯ್ಕೆದಾರರ ಮಂಡಳಿ ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.