ಬೆಂಗಳೂರು, ಏಪ್ರಿಲ್ 25: 'ಈ ಸಲ ಕಪ್ ನಮ್ದೆ'- ಇದು ಆರ್ಸಿಬಿ ಅಭಿಮಾನಿಗಳ ಭರವಸೆಯ ಮಂತ್ರ. ಸತತ ಸೋಲುಗಳನ್ನು ಕಂಡ ಬಳಿಕವೂ ಆರ್ಸಿಬಿ ಅಭಿಮಾನಿಗಳಲ್ಲಿ ಈ ಉತ್ಸಾಹ ಕಡಿಮೆ ಆಗಿಲ್ಲ. #escn ಈ ಸಲ ಕಪ್ ನಮ್ದೆ ಎನ್ನುವ ಮಂತ್ರವನ್ನು ಕೆಲವರು ಈಗಲೇ #mscn ಮುಂದಿನ ಸಲ ಕಪ್ ನಮ್ದೆ ಎಂದು ಬದಲಿಸಿದ್ದಾರೆ. ಆದರೆ, ಕ್ರಿಕೆಟ್ ಆಟದ ಅಭಿಮಾನದಾಚೆ ಬೇರೆ ವ್ಯವಹಾರಕ್ಕೆ ಇಳಿದರೆ 'ನೆಕ್ಸ್ಟ್ ವಿಕೆಟ್ ನಿಮ್ದೆ' ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಬೆಂಗಳೂರು ನಗರ ಪೊಲೀಸರು.
ಮಹತ್ವದ ಕ್ರಿಕೆಟ್ ಟೂರ್ನಿ ಶುರುವಾಯಿತೆಂದರೆ ಅಲ್ಲಿ ಬೆಟ್ಟಿಂಗ್ ಹಾವಳಿಯೂ ತಲೆ ಎತ್ತುತ್ತದೆ. ಅದರಲ್ಲಿಯೂ ಐಪಿಎಲ್ ಟೂರ್ನಿ ಬೆಟ್ಟಿಂಗ್ ಪ್ರಿಯರ ಪಾಲಿಗೆ ಹಬ್ಬವಿದ್ದಂತೆ. ಪಂದ್ಯ ಏನಾಗುವುದು, ಯಾರು ಎಷ್ಟು ರನ್ ಹೊಡೆಯುತ್ತಾರೆ, ಯಾರು ಹೆಚ್ಚು ಸಿಕ್ಸರ್ ಹೊಡೆಯುತ್ತಾರೆ, ಮುಂದಿನ ಓವರ್ನಲ್ಲಿ ಏನಾಗುತ್ತದೆ ಮುಂತಾದ ಊಹೆಗಳೇ ಹಣದ ವಹಿವಾಟನ್ನು ನಡೆಸುತ್ತವೆ. ಎಲ್ಲಿಯೋ ಕುಳಿತ ವ್ಯಕ್ತಿ ಫೋನ್ನಲ್ಲಿಯೇ ಲಕ್ಷಗಟ್ಟಲೆ ಸಂಪಾದಿಸುತ್ತಾನೆ. ಇನ್ನೊಬ್ಬ ಅದೇ ರೀತಿ ಹಣ ಕಳೆದುಕೊಳ್ಳುತ್ತಾನೆ.
ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ ಗೌತಮ್ ಗಂಭೀರ್: ನಾಯಕತ್ವಕ್ಕೆ ಗುಡ್ಬೈ
ಬೆಟ್ಟಿಂಗ್ ಕಾನೂನು ಪ್ರಕಾರ ಅಪರಾಧ. ಪ್ರತಿ ಬಾರಿ ಟೂರ್ನಿಗಳಲ್ಲಿಯೂ ಪೊಲೀಸರು ಬೆಟ್ಟಿಂಗ್ ಜಾಲದ ಬೆನ್ನತ್ತುತ್ತಾರೆ. ಸಾಮಾನ್ಯರಿಂದ ಹಿಡಿದು ಬಹುಪ್ರಭಾವಿ ವ್ಯಕ್ತಿಗಳವರೆಗೂ ಇದರಲ್ಲಿ ಹಣ ಚೆಲ್ಲಾಡುತ್ತಾರೆ. ಇದಕ್ಕೆ ಕಡಿವಾಣ ಹಾಕುವುದಾಗಿ ಬೆಂಗಳೂರು ನಗರ ಪೊಲೀಸರು ಸಂದೇಶ ರವಾನಿಸಿದ್ದಾರೆ.
Play cricket, Watch cricket but if you bet on cricket, you’ll be a stumped wicket.#EeSalaCupNamde ಅಂತಾ ಬೆಟ್ಟಿಂಗ್ ಆಡಿದ್ರೆ #NextWicketNimde#RCBvsCSK pic.twitter.com/PAqEKO9HfE
— BengaluruCityPolice (@BlrCityPolice) 25 April 2018
ಈ ಸಲ ಕಪ್ ನಮ್ದೆ ಎಂದು ಬೆಟ್ಟಿಂಗ್ ಆಡಿದರೆ ನೆಕ್ಸ್ಟ್ ವಿಕೆಟ್ ನಿಮ್ದೆ ಎಂದು ಟ್ವೀಟ್ ಮಾಡಿರುವ ಪೊಲೀಸರು, ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯಕ್ಕೂ ಮುನ್ನ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಬಂಧಿಸಿ 1.10 ಲಕ್ಷ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕ್ರಿಕೆಟ್ ನೋಡಿ, ಕ್ರಿಕೆಟ್ ಆಡಿ. ಆದರೆ, ಕ್ರಿಕೆಟ್ ಮೇಲೆ ಬೆಟ್ ಕಟ್ಟಿದರೆ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಪೊಲೀಸರ ಎಚ್ಚರಿಕೆ.