
ಕೊಲಂಬೊ, ಏಪ್ರಿಲ್ 21: ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಭಾನುವಾರ ಕರಾಳ ದಿನ, ಈಸ್ಟರ್ ಸಂಭ್ರಮದಲ್ಲಿ ತೇಲಬೇಕಿದ್ದ ಲಂಕನ್ನರು ಸರಣಿ ಬಾಂಬ್ ಸ್ಫೋಟದಿಂದ ಬೆಚ್ಚಿಬಿದಿದ್ದರು. ಈ ಹೇಯ ಮತ್ತು ಅಮಾನವೀಯ ಕೃತ್ಯವನ್ನು ಟೀಕಿಸಿರುವ ಜಾಗತಿಕ ಕ್ರೀಡಾ ತಾರೆಯರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಭಾನುವಾರ ಬೆಳಗ್ಗೆ ವಿವಿದೆಡೆ ಸಂಭವಿಸಿದ 8 ಸರಣಿ ಬಾಂಬ್ ಸ್ಫೋಟಗಳಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಗಾಯಗೊಂಡವರ ಸಂಖ್ಯೆ 400ರ ಗಡಿ ದಾಟಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್, ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಮೊದಲಾದ ಕ್ರೀಡಾ ತಾರೆಯರು ಈ ಸಂದರ್ಭದಲ್ಲಿ ಟ್ವೀಟ್ ಮೂಲಕ ಸಂತಾಪ ಹೊರಹಾಕಿದ್ದಾರೆ.
ಘಟನೆ ಕುರಿತಾಗಿ ದಿಗ್ಭ್ರಮೆ ವ್ಯಕ್ತ ಪಡಿಸಿರುವ ವಿರಾಟ್ ಕೊಹ್ಲಿ, "ಶ್ರೀಲಂಕಾದಿಂದ ಕೇಳಿಬಂದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಘಟನೆಯಿಂದಾಗಿ ಹಾನಿ ಎದುರಿಸಿರುವ ಎಲ್ಲರ ಹಿತಕ್ಕಾಗಿ ಪ್ರಾರ್ಥಿಸುತ್ತೇನೆ,'' ಎಂದು ಟ್ವೀಟ್ ಮಾಡಿದ್ದಾರೆ.
ಇದಲ್ಲದೆ ಮಾಜಿ ಕ್ರಿಕೆಟಿಗರಾದ ಮೈಕಲ್ ವಾನ್ ಮತ್ತು ಕೆವಿನ್ ಪೀಟರ್ಸನ್ ಸೇರಿದಂತೆ ಹಲವರು ಕೂಡ ದಿಗ್ಭ್ರಮೆ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.
ಹೀನ ಕೃತ್ಯ ಖಂಡಿಸಿದ ಸಂಗಕ್ಕಾರ
ಈಸ್ಟರ್ ಸಂಭ್ರಮಾಚರಣೆಯಂದು ಬಾಂಬ್ ಸ್ಪೋಟಿಸಿ ನೂರಾರು ಜನರನ್ನು ಕೊಂದಿರುವ ಹೇಯ ಕೃತ್ವನ್ನು ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಖಂಡಿಸಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸಂಗಕ್ಕಾರ ಮರುಕ ವ್ಯಕ್ತ ಪಡಿಸಿದ್ದು, "ಆಘಾತ ಎದುರಾಗಿದೆ. ಘಟನೆಯಲ್ಲಿ ಮಡಿದವರಿಗೆ ನನ್ನ ಹೃದಯ ತುಂಬಿ ಬರುತ್ತಿದೆ. ಮೃತ ಪಟ್ಟವರು ಮತ್ತು ಅವರ ಕುಟುಂಬದವರಿಗೆ ಸಂತಾಪ ಹೇಳಲು ಬಯಸುತ್ತೇನೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಸದ್ಯ ನಮ್ಮಲ್ಲಿ ಭಾವನಾತ್ಮಕತೆ ತುಂಬಿದೆ. ಆದರೂ ಈ ಸಂದರ್ಭದಲ್ಲಿ ತರ್ಕಬದ್ದವಾಗಿ ಮತ್ತು ಬುದ್ದಿವಂತಿಕೆಯಿಂದ ನಡೆದುಕೊಳ್ಳೋಣ. ನೈಜ ಕಾರಣವನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳೋಣ. ನಮ್ಮ ಪ್ರೀತಿಪಾತ್ರರು ಸತ್ತಿದ್ದಾರೆ. ಶ್ರೀಲಂಕಾದ ದೇಶಬಾಂಧವರು ಸತ್ತಿದ್ದಾರೆ. ನಮ್ಮದೇಶಕ್ಕೆ ಅತಿಥಿಗಳಾಗಿ ಬಂದವರು ಸತ್ತಿದ್ದಾರೆ. ಇದು ಆಟವಲ್ಲ. ಮುಂದೆದ್ದೂ ಇಂಥದ್ದೊಂದು ಘಟನೆ ನಡೆಯದಂತೆ ನೋಡಿಕೊಳ್ಳಲು ಒಟ್ಟಾಗಿ ಶ್ರಮಿಸೋಣ,'' ಎಂದು ಸಂಗಕ್ಕಾರ ತಮ್ಮ ಖಾತೆಯಲ್ಲಿ ಬರೆದಿದ್ದಾರೆ.