ಶ್ರೀಲಂಕಾದ ಕ್ರೀಡಾ ಸಚಿವರಿಗೆ ಲಂಚ ನೀಡಲು ಯತ್ನಿಸಿದ ಆರೋಪದಲ್ಲಿ ಶ್ರೀಲಂಕಾದ ಮಾಜಿ ಪ್ರದರ್ಶನ ವಿಶ್ಲೇಷಕನಿಗೆ ಕ್ರಿಕೆಟ್ನಿಂದ 7 ವರ್ಷಗಳ ನಿಷೇಧವನ್ನು ಹೇರಲಾಗಿದೆ. ಅಂತಾರಾಷ್ಟ್ರೀಯ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಲು ಅಥವಾ ಅದಕ್ಕೆ ಯೋಜನೆ ರೂಪಿಸಲು, ಅಂತಾರಾಷ್ಟ್ರೀಯ ಪಂದ್ಯದ ಮೇಲೆ ಯಾವುದೇ ರೀತಿಯಿಂದಾದರೂ ಪ್ರಭಾವ ಬೀರಲು ಪ್ರಯತ್ನಿಸಿದ ಪ್ರಕರಣವನ್ನು ದಾಖಲಿಸಲಾಗಿತ್ತು.
2019ರಲ್ಲಿ ಸನತ್ ಜಯಸುಂದರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಕೂಡ ನಿಧಾನಗೊಳಿಸುವ ಪ್ರಯತ್ನವನ್ನು ಈತ ನಡೆಸಿದ್ದ ಎನ್ನಲಾಗಿದೆ. ಇಂಟರ್ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್ನ ಇಂಟಗ್ರಿಟಿ ಯುನಿಟ್ ಈಗ ನಿಷೇಧವನ್ನು ವಿಧಿಸಿದೆ.
ಇಂಟರ್ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್ನ ಇಂಟಗ್ರಿಟಿ ಯುನಿಟ್ನ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಶಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಸಚಿವರೊಬ್ಬರಿಗೆ ಲಂಚ ನೀಡಲು ಜಯಸುಂದರ ನಡೆಸಿದ ಪ್ರಯತ್ನ ಗಂಭೀರ ಉಲ್ಲಂಘನೆಯಾಗಿದೆ. ಈ ಅಪರಾಧವನ್ನು ಮುಚ್ಚಿಹಾಕಲು ಅವರು ನಡೆಸಿದ ಪ್ರಯತ್ನ ಹಾಗೂ ಈ ಬಗ್ಗೆ ಅವರಲ್ಲಿ ಯಾವುದೇ ಪಶ್ಚಾತ್ತಾಪ ಇಲ್ಲದಿರುವುದು ನಮಗೆ ತುಂಬಾ ಬೇಸರ ಮೂಡಿಸಿದೆ" ಎಂದಿದ್ದಾರೆ.
"ನಮ್ಮ ಕ್ರೀಡೆಯಲ್ಲಿ ಭ್ರಷ್ಟಾಚಾರದ ನಡವಳಿಕೆಯನ್ನು ನಾವು ಸಹಿಸುವುದಿಲ್ಲ ಮತ್ತು ಅಂತಹ ನಡವಳಿಕೆಯನ್ನು ತಡೆಯುವಲ್ಲಿ ನಮ್ಮ ತಂಡ ಪಟ್ಟುಹಿಡಿದಿರುತ್ತದೆ. ಈ ನಿಷೇಧವು ಕೆಟ್ಟ ಹಾದಿಯಲ್ಲಿ ಪ್ರೇರಣೆಗೆ ಒಳಗಾಗುವ ಯಾರಿಗಾದರೂ ತಡೆಯವಂತೆ ಮಾಡಬೇಕು" ಅಲೆಕ್ಸ್ ಮಾರ್ಶಲ್ ಹೇಳಿದ್ದಾರೆ.