1. ಅಂಪೈರ್ ಗಮನಿಸದ ನೋ ಬಾಲ್
ಮಾರ್ಚ್ 28ರಂದು ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವಿದು. ಟೀವ್ರ ಕುತೂಹಲ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ಕೊನೆಗೆ ಮುಂಬೈ 6 ರನ್ಗಳಿಂದ ಗೆದ್ದಿತ್ತು. ಆರ್ಸಿಬಿ ಇನ್ನಿಂಗ್ಸ್ನಲ್ಲಿ ಎಂಐ ವೇಗಿ ಲಸಿತ್ ಮಾಲಿಂಗ ಎಸೆದ ಅಂತಿಮ ಎಸೆತ ಅಸಲಿಗೆ ನೋಬಾಲ್ ಆಗಿತ್ತು. ಆದರೆ ಅಂಪೈರ್ ಇದನ್ನು ಗಮನಿಸದೆ ಮುಂಬೈ ಗೆಲುವನ್ನಾಚರಿಸಿತ್ತು. ಈ ಸೋಲಿನ ಬಗ್ಗೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದರು
2. ಮಂಕಡ್ ರನ್ಔಟ್ ಮತ್ತು ಆರ್ ಅಶ್ವಿನ್
ಈ ಸಾರಿಯ ಐಪಿಎಲ್ನಲ್ಲಿ ಮಂಕಡ್ ಔಟ್ ಆಗಾಗ ಗಮನ ಸೆಳೆದಿತ್ತು. ಇದಕ್ಕೆ ಕಾರಣ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂದ್ಯಗಳ ನಡುವಿನ ವಿವಾದ. ರಾಜಸ್ಥಾನ್ ಇನ್ನಿಂಗ್ಸ್ ನಲ್ಲಿ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರನ್ನು ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ರೀತಿಯಲ್ಲಿ ಔಟ್ ಮಾಡಿದ್ದರು. ಚೆಂಡು ಎಸೆಯುವ ಆ್ಯಕ್ಷನ್ ಮಾಡಿದ ಅಶ್ವಿನ್ ಮರುಕ್ಷಣವೇ ಬಟ್ಲರ್ ಅವರನ್ನು ಔಟ್ ಮಾಡಿದ್ದರು. ಅಶ್ವಿನ್ ಎಚ್ಚರಿಕೆ ನೀಡದೆಯೇ ಔಟ್ ಮಾಡಿದ್ದು ಟೂರ್ನಿಯಲ್ಲಿ ದೊಡ್ಡ ವಿವಾದವಾಗಿ ಕಾಣಿಸಿಕೊಂಡಿತ್ತು.
3. ಕ್ಯಾಪ್ಟನ್ ಕೂಲ್ (ಅಲ್ಲ!)
ಎಲ್ಲೆ ಮೀರಿ ವರ್ತಿಸಿದಕ್ಕಾಗಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿಗೆ ಪಂದ್ಯ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಿದ ವಿವಾದವಿದು. ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ನೋಬಾಲ್ ವಿಚಾರಕ್ಕೆ ವಿವಾದ ಸೃಷ್ಠಿಯಾಗಿತ್ತು. ಪಂದ್ಯದ ವೇಳೆ ಎಂಎಸ್ ಧೋನಿ ಮೈದಾನಕ್ಕೆ ಪ್ರವೇಶಿಸಿ ಅಂಪೈರ್ ತೀರ್ಮಾನ ಪ್ರಶ್ನಿಸಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
4. ಎರಡು ದಿನಗಳ ಟಿ20 ಪಂದ್ಯ
ಈ ಬಾರಿಯ ಐಪಿಎಲ್ನಲ್ಲಿ ಒಂದಷ್ಟು ಪಂದ್ಯಗಳು ಸ್ಲೋ ಓವರ್ಗಾಗಿ ಕೆಂಗಣ್ಣಿಗೆ ಗುರಿಯಾಗಿದ್ದವು. 8 ಗಂಟೆಗೆ ಪ್ರಾರಂಭಗೊಳ್ಳುತ್ತಿದ್ದ ರಾತ್ರಿಯ ಪಂದ್ಯಗಳು ತಡರಾತ್ರಿಯವರೆಗೂ ನಡೆದು ಮರುದಿನಕ್ಕೂ ಮುಂದುವರೆದಿದ್ದ ಸಂಗತಿಗಳು ಘಟಿಸಿದ್ದವು. ಪ್ಲೇ ಆಫ್ ಪಂದ್ಯಗಳ ಸಮಯವನ್ನು ರಾತ್ರಿ 7.30 pmಗೆ ಆರಂಭಿಸಲು ಐಪಿಎಲ್ ಆಯೋಜನಾ ಸಮಿತಿ ನಿರ್ಧರಿಸಿದ್ದು ಇದೇ ಕಾರಣಕ್ಕೆ ಎಂಬ ಮಾತುಗಳು ಕೇಳಿಬಂದಿವೆ.
5. ಕೆಕೆಆರ್ನಲ್ಲಿ ನನ್ನ ಸ್ಥಿತಿ ಚೆನ್ನಾಗಿಲ್ಲ
ಬಿರುಸಿನ ಬ್ಯಾಟಿಂಗ್ಗಾಗಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದ ಆ್ಯಂಡ್ರೆ ರಸೆಲ್ ಬರಬರುತ್ತ ಆ್ಯಂಗ್ರಿ ರಸೆಲ್ ಆಗಿ ಬದಲಾಗುತ್ತ ಬಂದಿದ್ದರು. ಇದಕ್ಕೆ ಕಾರಣವೂ ಇದೆ. ಆರಂಭಿಕ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಪ್ರದರ್ಶನದೊಂದಿಗೆ ವಿಜಯದ ಹಾದಿಯಲ್ಲಿತ್ತು. ಆದರೆ ಮತ್ತೆ ಸೋಲಿನ ದಾರಿ ಹಿಡಿದಿದ್ದ ಕೋಲ್ಕತ್ತಾ ಐಪಿಎಲ್ ಅಂಕಪಟ್ಟಿಯಲ್ಲಿ ಕುಸಿಯತೊಡಗಿತ್ತು. ತನ್ನನ್ನು ಆರಂಭಿಕ ಬ್ಯಾಟಿಂಗ್ ಆರ್ಡರ್ ನಲ್ಲಿ ಕಳಿಸದೆ 6ನೇ ಕ್ರಮಾಂಕದಲ್ಲಿ ಕಳುಹಿಸುತ್ತಿದ್ದಾರೆ. ತಂಡದ ಸೋಲಿಗೆ ಇದೂ ಕಾರಣ ಎಂಬಂತೆ ರಸೆಲ್ ತಂಡದ ಮೇಲೆ ಅಸಮಾಧಾನ ತೋರಿಕೊಂಡಿದ್ದರು.