ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖಲಿಸ್ತಾನದ ಉಗ್ರರನ್ನು ಹುತಾತ್ಮರೆಂದು ಪೋಸ್ಟ್ ಹಾಕಿ ಗೌರವ ಸಲ್ಲಿಸುವುದರ ಮೂಲಕ ವಿವಾದವೊಂದನ್ನು ಸೃಷ್ಟಿಸಿದ್ದಾರೆ. 1984ರ 'ಆಪರೇಷನ್ ಬ್ಲೂಸ್ಟಾರ್' ಎಂಬ ಸೇನಾ ಕಾರ್ಯಾಚರಣೆಯಲ್ಲಿ ಪಂಜಾಬ್ನ ಪ್ರಖ್ಯಾತ ಸ್ವರ್ಣಮಂದಿರದಲ್ಲಿ ಅಡಗಿ ಕುಳಿತಿದ್ದ ಖಲಿಸ್ತಾನದ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಕಳೆದ ಭಾನುವಾರ (ಜೂನ್ 6) ಈ ಕಾರ್ಯಾಚರಣೆಗೆ 37 ವರ್ಷಗಳು ತುಂಬಿದ ಕಾರಣ ವರ್ಷಾಚರಣೆಯನ್ನು ಆಚರಿಸಲಾಗಿದೆ.
ನ್ಯೂಜಿಲೆಂಡ್ನ ಈ ಬೌಲರ್ಗೆ ಕೊಹ್ಲಿ ಹೆದರುತ್ತಾರೆ; ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್!
ಆದರೆ ಹರ್ಭಜನ್ ಸಿಂಗ್ ಆಪರೇಷನ್ ಬ್ಲೂಸ್ಟಾರ್ ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆಯಾದವರನ್ನು ಹುತಾತ್ಮರೆಂದು ಬಿಂಬಿಸಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಹರ್ಭಜನ್ ಮಾಡಿದ ಈ ಪೋಸ್ಟ್ಗೆ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾದವು. ಖಲಿಸ್ತಾನದ ಉಗ್ರರನ್ನು ಹುತಾತ್ಮರೆಂದು ಕರೆಯುತ್ತಿರುವ ಹರ್ಭಜನ್ ದೇಶದ್ರೋಹಿ ಎಂದೆಲ್ಲಾ ಜನರು ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದ್ದರು.
My heartfelt apology to my people..🙏🙏 pic.twitter.com/S44cszY7lh
— Harbhajan Turbanator (@harbhajan_singh) June 7, 2021
ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಹರ್ಭಜನ್ ಸಿಂಗ್ 'ನನಗೆ ಈ ವಿಷಯದ ಬಗ್ಗೆ ನಿಜವಾಗಿಯೂ ಗೊತ್ತಿರಲಿಲ್ಲ ವಾಟ್ಸಾಪ್ನಲ್ಲಿ ಬಂದಿದ್ದ ಸಂದೇಶವನ್ನು ಸರಿಯಾಗಿ ಗಮನಿಸದೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ನನ್ನ ತಪ್ಪು, ಈ ಫೋಟೋದಲ್ಲಿರುವ ವ್ಯಕ್ತಿ ಖಲಿಸ್ತಾನದ ಉಗ್ರ ಭಿಂದ್ರನ್ ವಾಲೆ ಎಂಬುದು ನನಗೆ ತಿಳಿದಿರಲಿಲ್ಲ, ಈ ತಪ್ಪಿಗಾಗಿ ನಾನು ದೇಶದ ಜನತೆಯ ಕ್ಷಮೆ ಕೇಳುತ್ತಿದ್ದೇನೆ' ಎಂದು ಟ್ವಿಟ್ಟರ್ ಮೂಲಕ ಹರ್ಭಜನ್ ಸಿಂಗ್ ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.