ಹೊಸದಿಲ್ಲಿ, ಜೂನ್ 11: ಟೀಮ್ ಇಂಡಿಯಾ ಕಂಡ ಸಾರ್ವ ಕಾಲಿಕ ಶ್ರೇಷ್ಠ ಒಡಿಐ ಆಟಗಾರ ಯುವರಾಜ್ ಸಿಂಗ್ ಸೋಮವಾರ ತಮ್ಮ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದರು. ಈ ಸಂದರ್ಭದಲ್ಲಿ ಹಾಲಿ, ಮಾಜಿ ಕ್ರಿಕೆಟಿಗರಿಂದ ಸ್ಟಾರ್ ಆಲ್ರೌಂಡರ್ಗೆ ಶುಭಾಶಯಗಳ ಮಹಾ ಪೂರವೇ ಹರಿದುಬಂದಿತ್ತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಅಂದಹಾಗೆ ಕೇವಲ ಭಾರತದಿಂದಷ್ಟೇ ಅಲ್ಲ ವಿದೇಶಿ ಕ್ರಿಕೆಟಿಗರು ಕೂಡ 2011ರ ವಿಶ್ವಕಪ್ ಗೆದ್ದ ಚಾಂಪಿಯನ್ ಆಟಗಾರನ ವಿದಾಯಕ್ಕೆ ಶುಭ ಹಾರೈಸಿದ್ದರು. ಇದರಲ್ಲಿ ಪಾಕಿಸ್ತಾನ ತಂಡದ ವೇಗದ ಬೌಲರ್ ಶೊಯೇಬ್ ಅಖ್ತರ್ ಕೂಡ ಒಬ್ಬರು.
ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ಗೆ ಬಿಸಿಸಿಐನಿಂದಲೇ ಮೋಸ!
ಶೊಯೇಬ್ ವಿಶ್ವ ಕಂಡ ಅತ್ಯಂತ ವೇಗದ ಬೌಲರ್ಗಳಲ್ಲಿ ಅಗ್ರಮಾನ್ಯರು. ಏಕೆಂದರೆ ಗಂಟೆಗೆ 160 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದ ಬೆರಳೆಣಿಕೆಯ ಬೌಲರ್ಗಳಲ್ಲಿ ಅಖ್ತರ್ ಕೂಡ ಒಬ್ಬರು. ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಅಖ್ತರ್ ಬೌಂಡರಿ ಗೆರೆ ಸಮೀಪದಿಂದ ರನ್ಅಪ್ ತೆಗೆದುಕೊಂಡು ಓಡಿ ಬರುತ್ತಿದ್ದರೆ, ಎದುರಿರುವ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು ಎಂದೇ ಹೇಳಬಹದು.
ಒಡಿಐ ಕ್ರಿಕೆಟ್ನಲ್ಲಿ ಯುವರಾಜ್ಗೆ ಕೀರ್ತಿ ತಂದ 5 ಪಂದ್ಯಗಳಿವು!
ಈ ಸಂಗತಿಯನ್ನು ಖುದ್ದಾಗಿ ಯುವರಾಜ್ ಸಿಂಗ್ ಕೂಡ ಒಪ್ಪಿಕೊಂಡಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಪ್ರತಿ ಬಾರಿ ಶೊಯೇಬ್ ಅಖ್ತರ್ ಅವರನ್ನು ಎದುರಿಸಿದಾಗಲೆಲ್ಲಾ ದಿಗುಲು ಹುಟ್ಟುತ್ತಿತ್ತು ಎಂಬುದನ್ನು ಯುವಿ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
ವಿಶ್ವಕಪ್: ಶಿಖರ್ ಧವನ್ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?
ನಿವೃತ್ತಿ ಪ್ರಕಟಿಸಿದ ಯುವರಾಜ್ ಸಿಂಗ್ಗೆ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಶೊಯೇಬ್ ಅಖ್ತರ್ "ನೀನೊಬ್ಬ ರಾಕ್ ಸ್ಟಾರ್. ಮ್ಯಾಚ್ ವಿನ್ನರ್. ಅದ್ಭುತ ಜೂನಿಯರ್ ಹಾಗೂ ಅಷ್ಟೇ ಅತ್ಯುತ್ತಮ ಗೆಳೆಯ. ಯುವರಾಜ್ ಸಿಂಗ್ ಅವರಂತಹ ಅದ್ಭುತ ಎಡಗೈ ಬ್ಯಾಟ್ಸ್ಮನ್ ಭಾರತದಲ್ಲಿ ಹಿಂದೆಂದೂ ಹುಟ್ಟಿಲ್ಲ. ಸರಾಗವಾಗಿ ಬ್ಯಾಟ್ ಬೀಸಬಲ್ಲ ಆಟಗಾರ ಅವರು,'' ಎಂದು ಸಂದೇಶ ರವಾನಿಸಿದ್ದರು.
ಟೀಮ್ ಇಂಡಿಯಾಗೆ ಉಪಯುಕ್ತ ಸಲಹೆ ನೀಡಿದ ಕೆವಿನ್ ಪೀಟರ್ಸನ್!
ಇದಕ್ಕೆ ಪ್ರತಿಯಾಗಿ ಟ್ವೀಟ್ ಮೂಲಕ ಉತ್ತರ ನೀಡಿದ ಯುವಿ, "ನನ್ನನ್ನು ನಂಬಿ. ನಿಮ್ಮನ್ನ ಪ್ರತಿ ಬಾರಿ ಎದುರಿಸುವಾಗಲೆಲ್ಲಾ ನನ್ನಲ್ಲಿ ಭಯ ಆವರಿಸುತ್ತಿತ್ತು. ನನ್ನೊಳಗಿನ ಎಲ್ಲಾ ಧೈರ್ಯವನ್ನು ಒಗ್ಗೂಡಿಸಿ ನಿಮ್ಮೆದುರು ಬ್ಯಾಟಿಂಗ್ ಮಾಡುತ್ತಿದ್ದೆ. ನಮ್ಮಿಬ್ಬರ ನಡುವೆ ಕ್ರಿಕೆಟ್ ಅಂಗಣದಲ್ಲಿ ಹಲವು ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದೆ. ಇವೆಲ್ಲವನ್ನೂ ನೆನೆಯುತ್ತೇನೆ. ಶೊಯೇಬ್ ಅಖ್ತರ್, ಬೆಚ್ಚನೆಯ ಅನುಭವ ತಂದ ನಿಮ್ಮ ಸಂದೇಶಕ್ಕೆ ನನ್ನ ಧನ್ಯವಾದಗಳು,'' ಎಂದು ಯುವಿ ಟ್ವೀಟ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದು, 304 ಒಡಿಐ ಮತ್ತು 58 ಟಿ20 ಇಂಟರ್ನ್ಯಾಷನಲ್ ಪಂದ್ಯಗಳಲ್ಲೂ ಸೇವೆ ಸಲ್ಲಿಸಿದ್ದಾರೆ.