
'ನೀವು ಒಬ್ಬನನ್ನು ಕೆಣಕಿದರೆ ನಾವು ಹನ್ನೊಂದು ಜನ ನಿಲ್ಲುತ್ತೇವೆ'
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಎರಡೂ ತಂಡಗಳ ನಡುವಿನ ಆಟಗಾರರ ಮಧ್ಯೆ ನಡೆದ ಮಾತಿನ ಚಕಮಕಿಯ ಕುರಿತು ಮಾತನಾಡಿರುವ ಕೆ ಎಲ್ ರಾಹುಲ್ 'ನಮ್ಮ ತಂಡದ ಆಟಗಾರರನ್ನು ಕೆಣಕಬೇಡಿ. ನೀವು ಒಬ್ಬನನ್ನು ಕೆಣಕಿದರೆ ನಮ್ಮ ತಂಡದ ಎಲ್ಲಾ 11 ಆಟಗಾರರು ನಿಮ್ಮ ವಿರುದ್ಧ ತಿರುಗಿ ಬೀಳುತ್ತೇವೆ' ಎಂದು ಆಂಗ್ಲರಿಗೆ ಎಚ್ಚರಿಕೆ ನೀಡಿದರು.

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಾಹುಲ್
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರ ಆರಂಭಿಕ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಅಥವಾ ಶುಬ್ ಮನ್ ಗಿಲ್ ಕಣಕ್ಕಿಳಿಯಬೇಕಿತ್ತು. ಆದರೆ ಇವರಿಬ್ಬರೂ ಸಹ ಗಾಯಕ್ಕೊಳಗಾದ ಕಾರಣ ಕೆಎಲ್ ರಾಹುಲ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡರು. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಾಹುಲ್ ಮೊದಲನೇ ಪಂದ್ಯದಲ್ಲಿ 84 ಮತ್ತು ಎರಡನೇ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ಭರ್ಜರಿ 129 ರನ್ ಬಾರಿಸಿ ಮಿಂಚಿದರು. ಹಾಗೂ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಸಹ ಕೆಎಲ್ ರಾಹುಲ್ ಭಾಜನರಾದರು. ಹೀಗೆ ಮೊದಲೆರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಇದೀಗ ಭಾರತ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಆಂಗ್ಲರಿಗೆ ಮೈಕಲ್ ವಾನ್ ಕೂಡ ಎಚ್ಚರಿಕೆ ನೀಡಿದರು
ಹೀಗೆ ಭಾರತ ತಂಡದ ಆಟಗಾರರನ್ನು ಕೆಣಕಿದ ಇಂಗ್ಲೆಂಡ್ ಆಟಗಾರರಿಗೆ ಕೆಎಲ್ ರಾಹುಲ್ ಮಾತ್ರವಲ್ಲದೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಕೂಡ ಎಚ್ಚರಿಕೆ ನೀಡಿದ್ದಾರೆ. ಭಾರತೀಯರು ಬಲಿಷ್ಠವಾಗಿದ್ದರೆ, ಬೆಂಕಿಯಂತಿರುವ ಅವರನ್ನು ಕೆಣಕುವುದು ಬೇಡ ಎಂದು ಆಂಗ್ಲ ಕ್ರಿಕೆಟಿಗರಿಗೆ ಮೈಕಲ್ ವಾನ್ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications












