
ಟಿ20 ವಿಶ್ವಕಪ್ಗೆ ಆಸ್ಟ್ರೇಲಿಯಾದಲ್ಲಿ ಈಗಾಗಲೇ ಚಾಲನೆ ದೊರೆತಿದ್ದು ಅರ್ಹತಾ ಸುತ್ತಿನ ಪಂದ್ಯಗಳು ಈಗಾಗಲೇ ನಡೆಯುತ್ತಿದೆ. ಇತ್ತ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿರುವ ತಂಡಗಳು ಅಭ್ದಯಾಸ ಪಂದ್ಯದಲ್ಲಿ ನಿರತವಾಗಿದ್ದು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಭಾರತ ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಿದ್ದು ಈ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಸಂದರ್ಭದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಗಾಯಾಳುವಾಗಿ ಟೂರ್ನಿಯಿಂದ ಹೊರಗುಳಿದಿರುವ ಜಸ್ಪ್ರೀತ್ ಬೂಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಾದ ನಿರ್ಧಾರ ಎಂದಿರುವ ಸಚಿನ್ ತೆಂಡೂಲ್ಕರ್ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಪಿಟಿಐಗೆ ನೀಡಿದ ವಿಶೇಷ ಸಂದರ್ಶನದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಜಸ್ಪ್ರೀತ್ ಬೂಮ್ರಾ ಗಾಯಾಳುವಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ನಿಜ. ಆದರೆ ಮೊಹಮ್ಮದ್ ಶಮಿ ಅವರಿಗೆ ಬದಲಿ ಆಟಗಾರನಾಗಿ ಸೇರ್ಪಡೆಯಾಗಿರುವುದು ಸೂಕ್ತವಾದ ನಿರ್ಧಾರ ಎನಿಸುತ್ತದೆ ಎಂದಿದ್ದಾರೆ.
"ಬೂಮ್ರಾ ಲಭ್ಯವಿಲ್ಲದೆ ಇರುವುದು ಖಮಡಿತವಾಗಿಯೂ ದೊಡ್ಡ ನಷ್ಟವಾಗಿದೆ. ಖಂಡಿತವಾಗಿಯೂ ಆತನಂಥಾ ಬೌಛಲರ್ನ ಅಗತ್ಯ ತಂಡಕ್ಕಿತ್ತು. ಆತನೋರ್ವ ಪ್ರಬಲವಾದ ವೇಗದ ಬೌಲರ್ ಆಗಿದ್ದಾರೆ. ಬೌಲಿಂಗ್ ದಾಳಿ ಹಾಗೂ ವಿಕೆಟ್ ಪಡೆಯುವ ಮೂಲಕ ದಾಳಿ ಸಂಘಟಿಸುವ ಆಟಗಾರ ಆತ. ಶಮಿ ಅವರಿಗೆ ಸೂಕ್ತವಾದ ಬದಲಿ ಆಟಗಾರ ಎಂದು ಸಾಬೀತುಪಡಿಸಿದ್ದಾರೆ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.
ಇನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಯುವ ಆಟಗಾರ ಅರ್ಷದೀಪ್ ಸಾಮರ್ಥ್ಯದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಅರ್ಶದೀಪ್ ಸಿಂಗ್ ಸಾಕಷ್ಟು ಭರವಸೆಯನ್ನು ಮೂಡಿಸಿರುವ ಆಟಗಾರ. ಆತ ಸಮತೋಲಿತವಾದ ಕ್ರಿಕಟಿಗನಾಗಿದ್ದಾರೆ. ನಾನು ಯಾವಾಗೆಲ್ಲಾ ಆತನನ್ನು ನೋಡುತ್ತೇನೋ ಆತನಲ್ಲಿನ ಬದ್ಧತೆ ನನಗೆ ಎದ್ದು ಕಾಣಿಸುತ್ತದೆ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.
ಭಾರತ ಸೋಮವಾರ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಅಂತಿಮ ಒಂದು ಓವರ್ ಬೌಲಿಂಗ್ ಮಾತ್ರವೇ ಮಾಡಿದರು. ಆದರೆ ಈ ಓವರ್ನಲ್ಲಿ ಶಮಿ ಅಮೋಘ ದಾಳಿ ಸಂಘಟಿಸಿದ್ದು ಮೂರು ವಿಕೆಟ್ ಸಂಪಾದಿಸಿದರು. ಈ ಓವರ್ನಿಂದಾಗಿ ಈ ಪಂದ್ಯದಲ್ಲಿ ಭಾರತ ರೋಮಾಂಚಕಾರಿ ಗೆಲುವು ಸಾಧಿಸಿದೆ.