ನವದೆಹಲಿ, ಏಪ್ರಿಲ್, 25: ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ತಂಡದ ಹೀನಾಯ ಪ್ರದರ್ಶನದಿಂದ ಬೇಸೆತ್ತಿರುವ ಗೌತಮ್ ಗಂಭೀರ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಈ ಆವೃತ್ತಿಯ ಉಳಿದ ಪಂದ್ಯಗಳಿಗೆ ಮುಂಬೈ ಮೂಲದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.
ಇದು ಸಂಪೂರ್ಣ ಸ್ವಂತ ನಿರ್ಧಾರ ಎಂದು ಗಂಭೀರ್ ಹೇಳಿದ್ದಾರೆ. ಬುಧವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ನನ್ನಿಂದ ತಂಡಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಲು ನನ್ನ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಆಡಿದ ಆರು ಪಂದ್ಯಗಳಲ್ಲಿ ಕೇವಲ ಐದರಲ್ಲಿ ಸೋತಿರುವ ಡೆಲ್ಲಿ ತಂಡ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡ ಅವರಿಗಿಂತ ಒಂದು ಸ್ಥಾನ ಮೇಲಿದೆ. ಕಳೆದ ಆವೃತ್ತಿಯವರೆಗೂ ಸತತ ಏಳು ವರ್ಷ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿರುವ ಗಂಭೀರ್, ನಾಯಕರಾಗಿ ಎರಡು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರು ಎಂಬುದನ್ನು ಮರೆಯುವಂತಿಲ್ಲ. ಇಲ್ಲಿ ಬ್ಯಾಟ್ಸ್ಮನ್ ಆಗಿ ಕೂಡ ಗಂಭೀರ್ ಉತ್ತಮ ಕಾಣಿಕೆ ನೀಡಿದ್ದರು.
ಆವೃತ್ತಿಯ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅರ್ಧ ಶತಕ ಬಾರಿಸಿದ್ದ ಗಂಭೀರ್, ತಮ್ಮ ಹಳೆಯ ಫಾರ್ಮ್ನಲ್ಲಿ ಮುಂದುವರಿಯುವ ಸೂಚನೆ ನೀಡಿದ್ದರು. ಆದರೆ, ನಂತರದ ಪಂದ್ಯಗಳಲ್ಲಿ ಅವರು ರನ್ ಗಳಿಸಲು ಪರದಾಡುತ್ತಿದ್ದಾರೆ. 6 ಪಂದ್ಯಗಳಲ್ಲಿ 17ರ ಸರಾಸರಿಯಲ್ಲಿ ಕೇವಲ 85 ರನ್ ಗಳಿಸಿದ್ದಾರೆ.
ಆರಂಭಿಕರಾಗಿ ಗಂಭೀರ್ ವೈಫಲ್ಯ ಒಟ್ಟಾರೆ ತಂಡದ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರಿದೆ. ತಮ್ಮ ಬ್ಯಾಟಿಂಗ್ ಮೇಲೆ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯವೇ ಸಾಕ್ಷಿ. 6 ಓವರ್ಗಳಲ್ಲಿ 71 ರನ್ ಗುರಿ ಇದ್ದಾಗ ಅನನುಭವಿಗಳಾದ ರಿಶಬ್ ಪಂತ್, ಶ್ರೇಯಸ್ ಅಯ್ಯರ್, ವಿಜಯ್ ಶಂಕರ್ ಅವರನ್ನು ಬ್ಯಾಟಿಂಗ್ಗೆ ಕಳುಹಿಸಿದ್ದ ಗಂಭೀರ್, ಮೈದಾನಕ್ಕೆ ಇಳಿಯುವ ಧೈರ್ಯ ಮಾಡಿರಲಿಲ್ಲ.
ಅಲ್ಲದೆ, ನಾಯಕರಾಗಿಯೂ ಗಂಭೀರ್ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಬೌಲಿಂಗ್ ಬದಲಾವಣೆ, ತಂಡಗಳ ಆಯ್ಕೆ ವಿಚಾರದಲ್ಲಿ ಎಡವುತ್ತಿದ್ದಾರೆ.