
ಆರ್ಸಿಬಿಗೆ ಕೈಕೊಟ್ಟಿದ್ದ ವ್ಯಾಟ್ಟೊ
2017ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದ ಶೇನ್ ವಾಟ್ಸನ್ 11.16ರ ಸರಾಸರಿಯಲ್ಲಿ ಗಳಿಸಿದ್ದು ಕೇವಲ 67 ರನ್. ಅಲ್ಲದೆ, ಬೌಲಿಂಗ್ನಲ್ಲಿಯೂ ದುಬಾರಿಯಾಗಿದ್ದ ಅವರು 10.02 ಎಕಾನಮಿಯಲ್ಲಿ ರನ್ ನೀಡಿ 4 ಮಾತ್ರ ಪಡೆದುಕೊಂಡಿದ್ದರು.

ನನ್ನ ಪಾಲಿಗೆ ವಿಶೇಷ ಆವೃತ್ತಿ
ಇದು ನನಗೆ ವಿಶೇಷ ಆವೃತ್ತಿ. ಕಳೆದ ವರ್ಷದ ಬಳಿಕ ಒಂದು ಒಳ್ಳೆಯ ಅವಕಾಶ ಸಿಕ್ಕಿತ್ತು. ಸನ್ನಿವೇಶವೂ ನನ್ನ ಪಾಲಿಗೆ ವರವಾಗಿ ಪರಿಣಮಿಸಿತ್ತು. ಆದರೆ, ಇಂತಹ ಒಂದು ಮಹತ್ವದ ಪಂದ್ಯದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿರುವುದು ಬಹು ವಿಶಿಷ್ಟ ಎನಿಸುತ್ತಿದೆ. ಮೊದಲ ಹತ್ತು ಎಸೆತಗಳ ಬಳಿಕ ನಾನು ಲಯ ಪಡೆದುಕೊಳ್ಳುವ ಭರವಸೆ ಹೊಂದಿದ್ದೆ ಎಂದು ವಾಟ್ಸನ್ ಹೇಳಿದ್ದಾರೆ.
ಔಟಾಗುವ ಮುನ್ನ ಆಡಿದ ಎಸೆತಕ್ಕೆ ಸಮನಾಗಿ ರನ್ ಗಳಿಸಬೇಕೆಂದುಕೊಂಡಿದ್ದೆ. ಭುವನೇಶ್ವರ್ ಕುಮಾರ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರಿಂದ ಮೊದಲ ಆರು ಓವರ್ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು.
ಬಾಲ್ ಸ್ವಿಂಗ್ ಆಗುವುದು ನಿಲ್ಲುತ್ತಿದ್ದಂತೆಯೇ ಎಲ್ಲವೂ ಸುಲಭವಾಯಿತು. ಇನ್ನು ಕೆಲವು ತಿಂಗಳು ನಾನು ಆಡುವುದಿಲ್ಲವಾದ್ದರಿಂದ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಸಿಗಲಿದೆ. ಎಂ.ಎಸ್. ಧೋನಿ, ಫ್ಲೆಮಿಂಗ್ ಮತ್ತು ಸಿಮ್ಸೆಕ್ ಅವರ ಬೆಂಬಲ ಅದ್ಭುತವಾಗಿತ್ತು ಎಂದು ಅವರು ಹೇಳಿದ್ದಾರೆ.

ಅನುಭವವೇ ನಮ್ಮ ಶಕ್ತಿ
ಹರಾಜಿನಲ್ಲಿ ನಾವು ಅನುಭವಿ ಆಟಗಾರರನ್ನು ಖರೀದಿಸುವ ನಿರ್ಧಾನ ಮಾಡಿದಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಈಗ ಟ್ರೋಫಿ ಗೆದ್ದ ಬಳಿಕ ನಮ್ಮ ನಿರ್ಧಾರದ ಕುರಿತ ಟೀಕೆಗಳಿಗೆ ಉತ್ತರ ಸಿಕ್ಕಿದೆ ಎಂದು ಚೆನ್ನೈ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ತಿಳಿಸಿದ್ದಾರೆ.
ಹರಾಜಿನಲ್ಲಿ ಅನುಭವದ ಮಾನದಂಡಕ್ಕೆ ಅಂಟಿಕೊಂಡಿದ್ದೆವು. ಈ ವರ್ಷ 'ಅನುಭವ'ವೇ ನಮ್ಮ ಫಾರ್ಮಲಾ ಆಗಿತ್ತು. ನಾವು ಆಟಗಾರರ ವಯಸ್ಸನ್ನು ನೋಡಿದೆವು. ಮಾತ್ರವಲ್ಲ, ವೃತ್ತಿಪರತೆಯೂ ಮುಖ್ಯವಾಗಿತ್ತು. ಶೇನ್ ವಾಟ್ಸನ್ ಅವರಂತಹ ಆಟಗಾರರು ಅದರಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಬದಲಾಗದ ತಂಡ
ಪ್ರತಿ ವರ್ಷವೂ ವಿಭಿನ್ನವಾಗಿರುತ್ತದೆ. ಫ್ರಾಂಚೈಸಿ ಉತ್ತಮ ಆಟಗಾರರನ್ನು ಖರೀದಿಸಿದೆ. ಅದರಲ್ಲಿ ನಾವು ಕೌಶಲವುಳ್ಳ ಆಟಗಾರರ ತಂಡವನ್ನು ಸಿದ್ಧಪಡಿಸಿಕೊಂಡಿದ್ದೇವೆ. ಬೇರೆ ತಂಡಗಳು ಛಿದ್ರಗೊಂಡಿವೆ ಮತ್ತು ಬದಲಾಗಿವೆ. ಆದರೆ, ನಾವು ಆಗಿನಿಂದಲೂ ಒಂದೇ ತಂಡಕ್ಕೆ ಸೀಮಿತವಾಗಿದ್ದೇವೆ.
ನಮ್ಮ ಫೀಲ್ಡಿಂಗ್ ಗುಣಮಟ್ಟ ಕುಸಿದಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಉತ್ತಮ ವಾತಾವರಣ, ಮನೋಭಾವ ಇರುವಂತೆ ನೋಡಿಕೊಳ್ಳಲು ನಾನು ಪ್ರಯತ್ನಿಸಿದೆ. ಉಳಿದಂತೆ ಮೈದಾನದಲ್ಲಿ ತಾವು ಬಯಸಿದ್ದನ್ನು ಧೋನಿ ಮಾಡಬಲ್ಲರು. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ ಎಂದಿದ್ದಾರೆ.

ಅದೃಷ್ಟ ಮಾಡಿದ್ದೆ: ರಾಯುಡು
ಇಂತಹ ಅದ್ಭುತ ಆವೃತ್ತಿಯಲ್ಲಿ ಆಡಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ. ತುಂಬಾ ಕಠಿಣ ಶ್ರಮಪಟ್ಟಿದ್ದೆ. ಕೊನೆಯಲ್ಲಿ ಗೆಲುವಿನ ರನ್ ಬಾರಿಸಿದ್ದು ಖುಷಿ ನೀಡಿತು. ಆರಂಭದಲ್ಲಿ ವಿಕೆಟ್ ನಿಧಾನವಾಗಿತ್ತು. ತೇವ ಇದೆ ಎಂದು ಭಾವಿಸಿದ್ದೆ. ಬಳಿಕ ಅದು ಬದಲಾದಂತೆ ನಾವು ಚೇಸ್ ಮಾಡಬಲ್ಲೆವು ಎಂಬ ವಿಶ್ವಾಸ ಮೂಡಿತು ಎಂಬುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಅಂಬಾಟಿ ರಾಯುಡು ಹೇಳಿದರು.


Click it and Unblock the Notifications











