ಬೆಂಗಳೂರು, ಮಾರ್ಚ್ 26: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11 ನೇ ಆವೃತ್ತಿಯ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಟೀಂ ಇಂಡಿಯಾದ ಆಟಗಾರ ಅಜಿಂಕ್ಯ ರಹಾನೆ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ಈ ಬದಲಾವಣೆಯನ್ನು ಸೋಮವಾರ(ಮಾರ್ಚ್ 26) ದಂದು ಪ್ರಕಟಿಸಿದೆ. ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತು ಎರಡು ವರ್ಷಗಳ ನಿಷೇಧ ಅನುಭವಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿ ಐಪಿಎಲ್ ನಲ್ಲಿ ಕಮ್ ಬ್ಯಾಕ್ ಮಾಡುತ್ತಿದೆ.
ಸ್ಮಿತ್ ಅವರು 2014 ಹಾಗೂ 2015ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. 2018ರಲ್ಲಿ ಸ್ಮಿತ್ ಅವರೊಬ್ಬರನ್ನು ಮಾತ್ರ ಫ್ರಾಂಚೈಸಿ ಉಳಿಸಿಕೊಂಡಿತ್ತು. 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು.
ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಬ್ಯಾನ್ ಕ್ರಾಫ್ಟ್ ಅವರು ಚೆಂಡು ವಿರೂಪಗೊಳಿಸುವುದು ಕಂಡು ಬಂದ ಹಿನ್ನಲೆಯಲ್ಲಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ಅವರ ತಲೆ ದಂಡವಾಗಿತ್ತು. ಸ್ಮಿತ್ ಅವರಿಗೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹಾಗೂ ಪಂದ್ಯದ ಶೇ 100ರಷ್ಟು ದಂಡ ವಿಧಿಸಲಾಗಿದೆ.
ಆಸ್ಟ್ರೇಲಿಯಾ ತಂಡದ ನಾಯಕ, ಉಪ ನಾಯಕನ ತಲೆದಂಡವಾಗಿದೆ.ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಬ್ಯಾನ್ಕ್ರೋಫ್ಟ್ ಚೆಂಡು ವಿರೂಪಗೊಳಿಸಿರುವುದು ದೃಢಪಟ್ಟಿತ್ತು, ಸ್ಮಿತ್ ಕೂಡಾ ಈ ಘಟನೆ ನಡೆದಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಈಗ ಕ್ರಿಕೆಟ್ ಆಸ್ಟ್ರೇಲಿಯಾದ ಸೂಚನೆ ಮೇರೆಗೆ ಆಸ್ಟ್ರೇಲಿಯಾ ಸರ್ಕಾರದ ಕ್ರೀಡಾ ಸಮಿತಿ(ಎಎಸ್ ಸಿ) ನಿರ್ದೇಶನದಂತೆ ಇಬ್ಬರು ಆಟಾಗರರು ತಮ್ಮ ಸ್ಥಾನವನ್ನು ತೊರೆದಿದ್ದಾರೆ.