ಸ್ಲ್ಯಾಪ್ಗೇಟ್ (ಕಪಾಳಮೋಕ್ಷ)
ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಣ ಪಂದ್ಯದ ಸಮಯದಲ್ಲಿ ಶ್ರೀಶಾಂತ್ ಕಣ್ಣಲ್ಲಿ ನೀರು ಜಿನುಗುತ್ತಿರುವ ದೃಶ್ಯಗಳನ್ನು ಕ್ಯಾಮೆರಾಗಳು ತೋರಿಸಿದವು. ಹರ್ಭಜನ್ ಸಿಂಗ್ ಅವರು ಕಪಾಳಮೋಕ್ಷ ಮಾಡಿದ್ದರಿಂದಲೇ ಶ್ರೀಶಾಂತ್ ಅಳುತ್ತಿದ್ದರು ಎಂಬ ವಿಷಯ ನಂತರ ಬಹಿರಂಗವಾಯಿತು. ಆದರೆ ಇದಾಗಿ ಕೆಲ ದಿನಗಳ ನಂತರ ನಡೆದ ಸಮಾರಂಭವೊಂದರಲ್ಲಿ ಇಬ್ಬರೂ ಕ್ರಿಕೆಟರುಗಳು ಕೈಯಲ್ಲಿ ಕೈ ಹಿಡಿದು ಥ್ಯಾಂಕ್ಸ್ ಹೇಳಿಕೊಂಡು ನಮ್ಮಿಬ್ಬರ ಮಧ್ಯೆ ಎಲ್ಲವೂ ಸರಿಯಾಗಿದೆ ಎಂಬ ಸಂದೇಶವನ್ನು ರವಾನಿಸಿದರು. ಅದೇನೆ ಇರಲಿ... ಹರ್ಭಜನ್ ಸಿಂಗ್ ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ್ಯಾಕೆ ಎಂಬುದು ಗುಟ್ಟಾಗಿಯೇ ಉಳಿದಿದೆ.
ಲಲಿತ್ ಮೋದಿಗೆ ನಿಷೇಧ
ಮೂಲತಃ ಐಪಿಎಲ್ ಟೂರ್ನಮೆಂಟ್ ಲಲಿತ್ ಮೋದಿಯ ಕನಸಿನ ಕೂಸಾಗಿತ್ತು. ಆ ಸಮಯದಲ್ಲಿ ಆಗಿನ ಬಿಸಿಸಿಐ ಕಾರ್ಯದರ್ಶಿ ಎನ್. ಶ್ರೀನಿವಾಸನ್ ಅವರೂ ಕೂಡ ಲಲಿತ್ ಮೋದಿಯ ಪರವಾಗಿಯೇ ಇದ್ದರು. 2008 ರಿಂದ 2010 ರ ಅವಧಿಯ ಮೂರು ವರ್ಷಗಳಲ್ಲಿ ಐಪಿಎಲ್ ಭರ್ಜರಿ ಜನಪ್ರಿಯತೆ ಗಳಿಸಿ, ಟಿವಿಯ ಪ್ರೈಮ್ ಟೈಮ್ ಕಾರ್ಯಕ್ರಮಗಳನ್ನು ಮೀರಿಸಿ ಮುನ್ನಡೆಯತೊಡಗಿತು. ಇದೇ ಸಂದರ್ಭದಲ್ಲಿ ಹಣಕಾಸು ಅವ್ಯವಹಾರಗಳ ಆರೋಪದಲ್ಲಿ ಲಲಿತ್ ಮೋದಿ ಅವರನ್ನು ಆಡಳಿತ ಮಂಡಳಿಯಿಂದ ಹೊರಹಾಕಲಾಯಿತು. ಇಷ್ಟೇ ಅಲ್ಲದೆ ಲಲಿತ್ ಮೋದಿ ತನ್ನ ಜೀವಮಾನದಲ್ಲಿ ಮತ್ತೆ ಯಾವತ್ತೂ ಬಿಸಿಸಿಐ ವ್ಯವಹಾರದಲ್ಲಿ ತಲೆ ಹಾಕದಂತೆ ನಿಷೇಧ ಹೇರಲಾಯಿತು. ಇದೆಲ್ಲ ಆದ ನಂತರ ಲಲಿತ್ ಮೋದಿ ಲಂಡನ್ನಲ್ಲಿ ನೆಲೆಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್
2013ರ ಐಪಿಎಲ್ ಟೂರ್ನಮೆಂಟ್ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡದ ಶ್ರೀಶಾಂತ್, ಅಜಿತ್ ಚಂದೇಲಾ ಹಾಗೂ ಅಂಕಿತ ಚವಾಣ್ ಅವರನ್ನು ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಆರೋಪದಲ್ಲಿ ಜೀವಮಾನ ನಿಷೇಧ ಹೇರಲಾಯಿತು. ರಾಯಲ್ಸ್ ತಂಡ ಮಾಲೀಕ ರಾಜ್ ಕುಂದ್ರಾ ಸಹ ನಿಷೇಧಕ್ಕೊಳಗಾದರು. ಇದರ ನಂತರ ಕುಂದ್ರಾ ತಂಡವನ್ನು ಬೇರೊಬ್ಬರಿಗೆ ಮಾರಾಟ ಮಾಡಿದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಮೇಯಪ್ಪನ್ ಅವರ ಮೇಲೆ ಸಹ ಎರಡು ವರ್ಷದ ನಿಷೇಧ ಹೇರಲಾಯಿತು.
ತಂಡಗಳ ವಿಸರ್ಜನೆ
ಹಣಕಾಸು ಅವ್ಯವಹಾರಗಳ ಆರೋಪ ಹಾಗೂ ನಿಗದಿತ ಬಾಂಡ್ ಹಣವನ್ನು ಬಿಸಿಸಿಐಗೆ ಪಾವತಿ ಮಾಡಲು ವಿಫಲವಾದ ಡೆಕ್ಕನ್ ಚಾರ್ಜರ್ಸ್, ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ತಂಡಗಳನ್ನು ರದ್ದುಗೊಳಿಸಲಾಯಿತು. ಚಾರ್ಜರ್ಸ್ ತಂಡವು 2009ರ ಚಾಂಪಿಯನ್ ಆಗಿತ್ತು. ಟಸ್ಕರ್ಸ್ ಕೇವಲ ಒಂದು ಸೀಸನ್ ಆಡಿದ್ದರೆ, ವಾರಿಯರ್ಸ್ ವಿಫಲತೆ ಅನುಭವಿಸಿತ್ತು.
ಶಾರುಕ್ಖಾನ್ ಮೇಲೆ ನಿಷೇಧ
ಮುಂಬೈನ ವಾಂಖೆಡೆ ಸ್ಟೇಡಿಯಂನೊಳಗೆ 5 ವರ್ಷಗಳ ಕಾಲ ಪ್ರವೇಶಿಸದಂತೆ ಬಾಲಿವುಡ್ ಸ್ಟಾರ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಕ್ ಖಾನ್ ಮೇಲೆ 2012 ರಲ್ಲಿ ನಿಷೇಧ ಹೇರಲಾಗಿತ್ತು. ನಿಗದಿತ ಸಮಯಕ್ಕೂ ಮುಂಚಿತವಾಗಿಯೇ ಮೈದಾನಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಯಾವುದೋ ಹೊಂದಾಣಿಕೆಯ ಮಾತುಕತೆ ನಡೆಸಿದ ಆರೋಪ ಶಾರುಕ್ ಖಾನ್ ಮೇಲೆ ಕೇಳಿ ಬಂದಿತ್ತು. ಆದಾಗ್ಯೂ 2015 ರಲ್ಲಿ ನಿಷೇಧವನ್ನು ಹಿಂಪಡೆಯಲಾಯಿತು.
ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದರು
ಮುಂಬೈನಲ್ಲಿ 2012 ರಲ್ಲಿ ನಡೆದ ರೇವ್ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪುಣೆ ವಾರಿಯರ್ಸ್ ಆಟಗಾರರಾದ ರಾಹುಲ್ ಶರ್ಮಾ ಹಾಗೂ ವೇನ್ ಪಾರ್ನೆಲ್ ಇಬ್ಬರೂ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಇವರ ಮೇಲೆ ಯಾವುದೇ ನಿಷೇಧ ಹೇರದಿದ್ದರೂ, ನಂತರದ ದಿನಗಳಲ್ಲಿ ಇವರು ಯಾವುದೇ ಐಪಿಎಲ್ ಪಂದ್ಯ ಆಡಲೇ ಇಲ್ಲ.