
ಆರ್ಸಿಬಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಒಂದು ರನ್ಗಳ ಅಂತರದಿಂದ ಸೋಲು ಕಂಡಿದೆ. ಈ ಬಾರಿಯ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಆರು ಪಂದ್ಯಗಳಲ್ಲಿ ಅನುಭವಿಸಿದ ಎರಡನೇ ಸೋಲಿದು. ಈ ಮಧ್ಯೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ಗೆ ರಿಷಭ್ ಪಂತ್ ನಾಯಕತ್ವಕ್ಕೆ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ರಿಷಭ್ ಪಂತ್ ತಮ್ಮಲ್ಲಿರುವ ಬೌಲರ್ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಹೇಳಿಕೆಯನ್ನು ನೀಡಿದ್ದಾರೆ. "ನಾನು ರಿಷಭ್ ಪಂತ್ ನಾಯಕತ್ವಕ್ಕೆ ಐದು ಅಂಕಗಳನ್ನು ಕೂಡ ನೀಡುವುದಿಲ್ಲ. ಮೂರು ಅಂಕಗಳನ್ನಷ್ಟೇ ನೀಡುತ್ತೇನೆ. ಯಾಕೆಂದರೆ ನೀವು ಅಂತಾ ತಪ್ಪುಗಳನ್ನು ಮಾಡಲೇಬಾರದು. ನಿಮ್ಮ ಮುಖ್ಯ ಬೌಲರ್ಗಳು ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನಾಯಕತ್ವ ಮುಖ್ಯವಾಗುವುದೇ ಈ ಕಾರಣಕ್ಕೆ" ಎಂದಿದ್ದಾರೆ ಸೆಹ್ವಾಗ್.
"ಆತ ಇದನ್ನು ಕಲಿತುಕೊಳ್ಳಬೇಕಿದೆ. ಇಲ್ಲವಾದರೆ ನೀವು ನಿಮಗಿಷ್ಟ ಬಂದವರ ಕೈಗೆ ಚೆಂಡನ್ನು ನೀಡಬಹುದು. ನಾಯಕನಾದವನ ಸಾಮರ್ಥ್ಯ ಪಂದ್ಯವನ್ನು ಹೇಗೆ ತಮ್ಮತ್ತ ತಿರುಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಸಂದರ್ಭಕ್ಕೆ ತಕ್ಕನಾಗಿ ಬೌಲಿಂಗ್ನಲ್ಲಿ ಹಾಗೂ ಫಿಲ್ಡಿಂಗ್ನಲ್ಲಿ ಆತ ಬದಲಾವಣೆಗಳನ್ನು ಮಾಡಬೇಕಿದೆ" ಎಂದು ಸೆಹ್ವಾಗ್ ಕ್ರಿಕ್ಬಝ್ಗೆ ನಿಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
"ರಿಷಭ್ ಪಂತ್ ಉತ್ತಮ ನಾಯಕ ಎನಿಸಿಕೊಳ್ಳಬೇಕು ಎಂದಿದ್ದರೆ ಈ ಎಲ್ಲಾ ಸಣ್ಣ ವಿಚಾರಗಳ ಬಗ್ಗೆ ಗಮನಹರಿಸಬೇಕು. ಚಾಣಾಕ್ಷ ಆಟವನ್ನು ಪ್ರದರ್ಶಿಸಿದರೆ ನಂತರ ಚಾಣಾಕ್ಷ ನಾಯಕನಾಗಲು ಸಾಧ್ಯವಿದೆ" ಎಂದು ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ.