ಯುವರಾಜ್ ಸಿಂಗ್
ಈ ಎಡಗೈ ಬ್ಯಾಟಿಂಗ್ ದೈತ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಾಖಲೆಯ 14 ಕೋಟಿ ರುಪಾಯಿಗೆ ಮಾರಾಟವಾಗಿದ್ದರು. ನಂದರ ದೆಹಲಿ ಅವರನ್ನು 16 ಕೋಟಿ ನೀಡಿ ಹರಾಜಿನಲ್ಲಿ ಪಡೆದಿತ್ತು. ಆದರೆ, ಅವರು ಈಗ ಹಿಂದಿನ ಹುಲಿಯಂತಿಲ್ಲ. ಕಳೆದ ಆವೃತ್ತಿಯಲ್ಲಿ ಸನ್ ರೈಸರ್ಸ್ ಪರವಾಗಿ ಅವರು 12 ಪಂದ್ಯಗಳಲ್ಲಿ ಕೇವಲ 2 ಅರ್ಧ ಶತಕಗಳಿಂದ ಕೂಡಿದ 252 ರನ್ ಮಾತ್ರ ಗಳಿಸಿದ್ದರು. ಈಗ ಅವರು ಭಾರತ ತಂಡದಲ್ಲಿ ಕೂಡ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಹರಭಜನ್ ಸಿಂಗ್
ತಮ್ಮ ಮಾಂತ್ರಿಕ ಸ್ಪಿನ್ ದಾಳಿಯಿಂದ ಒಂದಾನೊಂದು ಕಾಲದಲ್ಲಿ ಸಿಂಹಸ್ವಪ್ನವಾಗಿದ್ದ ಹರಭಜನ್ ಮಂಬೈ ಇಂಡಿಯನ್ ತಂಡದ ಆಧಾರ ಸ್ತಂಭವಾಗಿದ್ದರು. 2011ರಲ್ಲಿ ಆ ತಂಡದ ನಾಯಕರೂ ಆಗಿದ್ದ ಅವರು ಕಳೆದೆರಡು ಸೀಸನ್ ನಲ್ಲಿ ಕೇವಲ 9 ಮತ್ತು 8 ವಿಕೆಟ್ ಗಳಿಸಲು ಯಶಸ್ವಿಯಾಗಿದ್ದಾರೆ. ಬಹುಶಃ ಈ ಬಾರಿ ಅವರು ಬೇರೊಂದು ಜವಾಬ್ದಾರಿ ಹೊರಲು ತಯಾರಾಗಿರುವುದು ಒಳಿತು.
ಅಮಿತ್ ಮಿಶ್ರಾ
ನೈಪುಣ್ಯತೆಯ ಬೌಲಿಂಗ್ ದಾಳಿ ಮತ್ತು ವೈವಿಧ್ಯತೆಯಿಂದ ಸಾಕಷ್ಟು ವಿಕೆಟ್ ಕಬಳಿಸಿದ್ದ ಅಮಿತ್ ಮಿಶ್ರಾ ಅವರ ಲೆಗ್ ಸ್ಪಿನ್ನರ್ ಮತ್ತು ಫ್ಲಿಪ್ಪರ್ ಗಳು ಮೊದಲಿನ ಮೊನಚು ಉಳಿಸಿಕೊಂಡಿಲ್ಲ. ಅವರು ಮೂರು ಬಾರಿ ಹ್ಯಾಟ್ರಿಕ್ ಪಡೆದ ಸಾಧನೆ ಹೊಂದಿದ್ದಾರೆ. ಆದರೆ, 2015ರಿಂದೀಚೆಗೆ ಅವರ ಸಾಮರ್ಥ್ಯ ಕುಂದುತ್ತ ಬಂದಿದೆ, ಅವರು ಭಾರತ ತಂಡದಲ್ಲಿಯೂ ಸ್ಥಾನ ಪಡೆದಿಲ್ಲ. ಕಳೆದ ಬಾರಿ ಕೇವಲ 1.5 ಕೋಟಿ ರುಪಾಯಿಗೆ ಅವರು ಬಿಕರಿಯಾಗಿದ್ದರು.
ಯುಸೂಫ ಪಠಾಣ್
ರಾಜಸ್ತಾನ ರಾಯಲ್ಸ್ ನಿಂದ ತಮ್ಮ ಅಭಿಯಾನ ಆರಂಭಿಸಿದ್ದ ಯುಸೂಫ್ ಪಠಾಣ್ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಭದ್ರ ಸ್ಥಾನ ಪಡೆದಿದ್ದರು. ದೈತ್ಯ ಹೊಡೆತಗಳಿಂದ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಎರಡೆರಡು ಫ್ರಾಂಚೈಸಿ ಪರ ಆಡಿದಾಗಲೂ ಟ್ರೋಫಿ ಗೆದ್ದಿರುವ ಹೆಗ್ಗಳಿಕೆ ಅವರದು. ಆದರೆ, 2017ರಲ್ಲಿ 15 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 143 ರನ್ ಮಾತ್ರ. ಅವರನ್ನು ಹಿಂದಿನ ಬೆಂಚಿನಲ್ಲಿ ಈಬಾರಿ ಕೂಡಿಸಲು ಇಷ್ಟು ಸಾಕು.