ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಹೆಚ್ಚಾಗಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ನ ಪಂದ್ಯಗಳನ್ನು ಚೆನ್ನೈನಿಂದ ಬೇರೆಡೆಗೆ ವರ್ಗಾಯಿಸಲು ಚಿಂತನೆ ನಡೆಯುತ್ತಿದೆ.
ನಿನ್ನೆ ನಡೆದ ಪಂದ್ಯಕ್ಕೂ ಪ್ರತಿಭಟನೆಗಳು ವ್ಯಕ್ತವಾಗಿದ್ದವು, ಚಿದಂಬರಂ ಕ್ರೀಡಾಂಗಣದ ಹೊರಗೆ ಹಲವರು ಪಂದ್ಯ ನಡೆಸದಂತೆ ಪ್ರತಿಭಟನೆ ಮಾಡಿದರು. ಇದರಿಂದಾಗಿ ಆಟಗಾರರು ಕ್ರೀಡಾಂಗಣ ತಲುಪಲು ತಡವಾಗಿ ಪಂದ್ಯವು ನಿಗದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಪ್ರಾರಂಭವಾಯಿತು. ಪಂದ್ಯ ನಡೆಯುತ್ತಿರುವಾಗಲೂ ಕೂಡ ಕೆಲವರು ಕ್ರೀಡಾಂಗಣದೊಳಕ್ಕೆ ಚಪ್ಪಲಿ, ಬಾಟಲಿಗಳನ್ನು ಎಸೆದಿದ್ದರು.
ಸರ್ಕಾರವು ಆಟಗಾರರ ಭದ್ರತೆ ಬಗ್ಗೆ ಚಿಂತಿತಗೊಂಡಿದ್ದು, ಹೀಗಾಗಿ ಪಂದ್ಯಾವಳಿಯನ್ನು ಬೇರೆಡೆ ವರ್ಗಾಯಿಸಲು ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸಿದೆ.
ಕಡಿಮೆ ಸಮಯದಲ್ಲಿ ಪಂದ್ಯಗಳನ್ನು ಬೇರೆಡೆ ಸ್ಥಳಾಂತರ ಮಾಡುವುದು ಸುಲಭದ ಕಾರ್ಯವಲ್ಲ, ಅದಕ್ಕೆ ಬೇರೆ ತಂಡಗಳ ವೇಳಾಪಟ್ಟಿಯನ್ನೂ ಬದಲಾಯಿಸಬೇಕಾಗುತ್ತದೆ. ಹಾಗೂ ಸ್ಥಳಾಂತರಕ್ಕೆ ಹಿಡಿಯುವ ಖರ್ಚೂ ಹೆಚ್ಚಿಗಿರುತ್ತದೆ ಎನ್ನಲಾಗಿದೆ.
ಚೆನ್ನೈನಲ್ಲಿ ನಡೆಯಬೇಕಿದ್ದ ಎಲ್ಲಾ ಪಂದ್ಯಗಳನ್ನು ಪುಣೆ ಅಥವಾ ತಿರುವನಂತಪುರಂನಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದ್ದು, ಮುಂದಿನ ಪಂದ್ಯ ಏಪ್ರಿಲ್ 20ಕ್ಕೆ ರಾಜಸ್ಥಾನ ರಾಯಲ್ಸ್ ವಿರುದ್ಧ ಇದೆ.
ಪಂದ್ಯವು ಚೆನ್ನೈನಿಂದ ಬೇರೆಡೆಗೆ ವರ್ಗಾವಣೆ ಆದರೆ ತವರಿನ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗುವ ಜೊತೆಗೆ ಚೆನ್ನೈ ಆಡಳಿತ ಮಂಡಳಿಗೂ ಭಾರಿ ನಷ್ಟವುಂಟಾಗುತ್ತದೆ. ಜೊತೆಗೆ ಒಂದು ಅಂತರರಾಷ್ಟ್ರೀಯ ಮಟ್ಟದ ಪಂದ್ಯವನ್ನು ಶಕ್ತವಾಗಿ ಆಯೋಜಿಸಲಾಗದೇ ಹೋದ ಕಪ್ಪುಚುಕ್ಕೆ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಮೇಲೆ ಉಳಿಯಲಿದೆ.