ನವದೆಹಲಿ, ಜೂ.16: ಐಪಿಎಲ್ ಹಗರಣದ ಆರೋಪಿಯಾಗಿರುವ ಲಲಿತ್ ಮೋದಿ ಅವರ ವಿರುದ್ಧ ಮನಿ ಲಾಂಡ್ರಿಂಗ್ ಕೇಸಿಗೆ ಸಂಬಂಧಿಸಿದಂತೆ ರೆಡ್ ಕಾರ್ನರ್ ನೋಟಿಸ್ ನೀಡಲು ಜಾರಿ ನಿರ್ದೇಶನಾಲಯ ಸಜ್ಜಾಗಿದೆ ಎಂಬ ಸುದ್ದಿ ಬಂದಿದೆ.
ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಸಜ್ಜಾಗುತ್ತಿದೆ. ಲಲಿತ್ ಮೋದಿ ಅವರನ್ನು ಭಾರತಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಲು ಮುಂದಾಗಿದೆ. [ಮೋದಿ-ಸುಷ್ಮಾ ವಿವಾದದ ಸಂಪೂರ್ಣ ಚಿತ್ರಣ]
ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಲಲಿತ್ ಮೋದಿ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಲಲಿತ್ ಮೋದಿ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿದ ದೂರಿನ ಮೇರೆಗೆ 2010ರಲ್ಲಿ ಮುಂಬೈ ವಿಭಾಗದ ಜಾರಿ ನಿರ್ದೇಶನಾಲಯ ಈ ನೋಟಿಸ್ ಜಾರಿಗೊಳಿಸಿದೆ.
ಅದರೆ, ಲಲಿತ್ ಮೋದಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವಷ್ಟರಲ್ಲಿ ಭಾರತದಿಂದ ಹೊರಕ್ಕೆ ಹಾರಿದ್ದರು.

ಬ್ಲೂ ಕಾರ್ನರ್ ನೋಟಿಸ್ ಎಂದರೇನು?
ಅದರೆ, ನನ್ನ ಕಕ್ಷಿದಾರ ಲಲಿತ್ ಮೋದಿ ಅವರಿಗೆ ಜಾರಿ ನಿರ್ದೇಶನಾಲಯದಿಂದ ಯಾವುದೇ ಬ್ಲೂ ಕಾರ್ನರ್ ನೋಟಿಸ್ ಬಂದಿಲ್ಲ ಎಂದು ಮೋದಿ ಪರ ವಕೀಲ ಹೇಳಿದ್ದಾರೆ. [ಸ್ಪಾಟ್ ಫಿಕ್ಸಿಂಗ್, 4 ಚೆನ್ನೈ ಕ್ರಿಕೆಟರ್ಸ್ ಶಾಮೀಲು: ಮೋದಿ]
ಬ್ಲೂ ಕಾರ್ನರ್ ನೋಟಿಸ್ ಸಾಮಾನ್ಯವಾಗಿ ವಿಚಾರಣೆಗಾಗಿ ನೀಡಲಾಗುತ್ತದೆ. ಆರೋಪಿಯ ಎಲ್ಲಿದ್ದಾನೆ? ಆರೋಪಿ ಗುರುತು ಪತ್ತೆಗಾಗಿ ಈ ನೋಟಿಸ್ ನೀಡಲಾಗುತ್ತದೆ. ಈ ನೋಟಿಸ್ ಇಂಟರ್ ಪೋಲ್ ಮುಖಾಂತರ ತಲುಪಿಸಲಾಗುತ್ತದೆ. ದೇಶ ಬಿಟ್ಟು ವಿದೇಶಕ್ಕೆ ಹಾರಿದ ಆರೋಪಿಗಳನ್ನು ಕರೆಸಿಕೊಳ್ಳಲು ಇದು ಸಾಕೆನಿಸಿತ್ತದೆ.[ಲಲಿತ್ ಮೋದಿ ವೀಸಾ ವಿವಾದದಲ್ಲಿ ಸುಷ್ಮಾ, ಟ್ವಿಟ್ಟರ್ ಪ್ರತಿಕ್ರಿಯೆ]
ಆದರೆ, ರೆಡ್ ಕಾರ್ನರ್ ನೋಟಿಸ್ ಇದಕ್ಕಿಂತ ಕಠಿಣವಾಗಿದ್ದು, ಜಾರಿ ನಿರ್ದೇಶನಾಲಯ ಈ ನೋಟಿಸ್ ಜಾರಿಗೊಳಿಸಿದರೆ ಆರೋಪಿ ಇದ್ದ ಕಡೆಯಲ್ಲೇ ಆತನನ್ನು ಬಂಧಿಸಿ ಕರೆ ತರಬಹುದಾಗಿದೆ.
ಜೀವ ಭಯದಿಂದ ಲಂಡನ್ ಗೆ ಹಾರಿದ್ದ ಮೋದಿ
2010ರಲ್ಲಿ ಜೀವಭಯದಿಂದ ಲಂಡನ್ ಗೆ ಮೋದಿ ಹಾರಿದ್ದರು. ಲಲಿತ್ ಮೋದಿ ಜೀವಕ್ಕೆ ಭೂಗತ ಜಗತ್ತಿನಿಂದ ಅಪಾಯವಿದೆ ಎಂದು ಮಹಾರಾಷ್ಟ್ರದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.
ಅದರೆ, ಮೋದಿ ಹಾಗೂ ಅವರ ಕುಟುಂಬಕ್ಕೆ ಈಗ ಯಾವುದೇ ಬೆದರಿಕೆ ಇಲ್ಲ ಎಂದು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಒಣನ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಹೀಗಾಗಿ ಲಲಿತ್ ಅವರಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಕರೆಸಿಕೊಳ್ಳಬಹುದಾಗಿದೆ.