
ಹೈದರಾಬಾದ್, ನವೆಂಬರ್ 02: 44ನೇ ಹುಟ್ಟುಹಬ್ಬದ ಸಂಭ್ರಮದ ಮರುದಿನವೇ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಅವರು ಬಹುನಿರೀಕ್ಷಿತ ತಮ್ಮ ಜೀವನ ಚರಿತ್ರೆಯ ಮುಖಪುಟವನ್ನು ಇಂದು ಅನಾವರಣಗೊಳಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಸಹಯೋಗದೊಂದಿಗೆ ಶುಕ್ರವಾರದಂದು ಫೇಸ್ ಬುಕ್ ನಲ್ಲಿ ಫೇಸ್ ಬುಕ್ ಲೈ ಸ್ಟ್ರೀಮ್ ಮೂಲಕ ತಮ್ಮ ಪುಸ್ತಕ '281 ಅಂಡ್ ಬಿಯಾಂಡ್' ಅನಾವರಣಗೊಳಿಸಿದರು.
ಸ್ಟಾರ್ ನೆಟ್ವರ್ಕ್ ನ ನಿರೂಪಕಿ ಮಾಯಾಂತಿ ಲ್ಯಾಂಗರ್ ಅವರ ಜತೆ ಸಂವಾದ ನಡೆಸುತ್ತಾ, ತಮ್ಮ ಪುಸ್ತಕದ ಬಗ್ಗೆ ಹೇಳಿಕೊಂಡರು. ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ ಪ್ರೈ ಲಿಮಿಟೆಡ್ ಹೊರ ತಂದಿರುವ ಈ ಪುಸ್ತಕವನ್ನು ಪತ್ರಕರ್ತ ಆರ್ ಕೌಶಿಕ್ ಅವರ ಸಹಯೋಗದೊಂದಿಗೆ ಲಕ್ಷ್ಮಣ್ ಅವರು ರಚಿಸಿದ್ದಾರೆ.
ತಮ್ಮ ಕೃತಿಯ ಆರಂಭದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಮೊಹಮ್ಮದ್ ಅಜರುದ್ದೀನ್,ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಜತೆಗಿನ ಒಡನಾಟ, ಗೆಳೆತನದ ಬಗ್ಗೆ ಬರೆದಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ ಜತೆಗಿನ ಬಾಂಧವ್ಯದ ಬಗ್ಗೆ ಹೆಚ್ಚು ಒತ್ತು ನೀಡಿದ್ದಾರೆ.
ನಾನು ನಿವೃತ್ತನಾದ ಬಳಿಕವೇ ನನ್ನ ಅನುಭವಗಳನ್ನು ಹಂಚಿಕೊಳ್ಳಬೇಕು ಎಂದುಕೊಂಡಿದ್ದೆ. 281ರನ್ ಗಳಿಸಿದ್ದು ನನ್ನ ವೃತ್ತಿ ಬದುಕಿಗೆ ತಿರುವು ನೀಡಿತು. ಹೀಗಾಗಿ, ಪುಸ್ತಕ ಹೆಸರನ್ನು ಅದರಿಂದಲೇ ಆರಂಭಿಸಿದೆ. 4ನೇ ದಿನದಂದು ರಾಹುಲ್ ದ್ರಾವಿಡ್ ಜತೆ ಬ್ಯಾಟಿಂಗ್ ಮಾಡಿದ್ದು, ಟೆಸ್ಟ್ ಸರಣಿಗಳು ಕಲಿಸಿದ ಪಾಠ ಎಲ್ಲವನ್ನು ಹೇಳಿಕೊಂಡಿದ್ದೇನೆ.
ಗ್ರೆಗ್ ಚಾಪೆಲ್, ಜಾನ್ ರೈಟ್ ರಂಥ ಕೋಚ್ ಗಳಿಂದ ಕಲಿತ್ತಿದ್ದು, ಡ್ರೆಸಿಂಗ್ ರೂಮ್ ಕಥೆಗಳು, ವಿವಿಧ ಮಾದರಿಯಲ್ಲಿ ಆಡಬೇಕಾದ ಬಗೆ ಹೀಗೆ ಎಲ್ಲವನ್ನು ಚೊಕ್ಕವಾಗಿ, ಸುಂದರವಾಗಿ ಕಥೆ ರೂಪದಲ್ಲಿ ಲಕ್ಷ್ಮಣ್ ಮುಂದಿಟ್ಟಿದ್ದಾರೆ.