
ನವದೆಹಲಿ, ಅಕ್ಟೋಬರ್ 1: ಇಂಗ್ಲೆಂಡ್ ಟೆಸ್ಟ್ ನಲ್ಲಿ ಆಡುವ 11 ಆಟಗಾರರಲ್ಲಿ ಅವಕಾಶ ಸಿಗದೆ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ನಿಂದಲೂ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕರ್ನಾಟಕದ ಕರುಣ್ ನಾಯರ್ ಜೊತೆ ವೈಯಕ್ತಿಯವಾಗಿ ಮಾತನಾಡಿದ್ದೇನೆ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಹೇಳಿದ್ದಾರೆ.
'ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ಭಾರತ ತಂಡವನ್ನು ಪ್ರಕಟಿಸಿದ ಕೂಡಲೇ ನಾನು ಕರುಣ್ ನಾಯರ್ ಜೊತೆ ಮಾತನಾಡಿದ್ದೇನೆ. ತಂಡಕ್ಕೆ ಸ್ಥಾನ ಗಿಟ್ಟಿಸಿಕೊಳ್ಳುವ ಬಗೆಯನ್ನೂ ಆ ವೇಳೆ ವಿವರಿಸಿದ್ದೇನೆ. ಸಂವಹನ ವಿಚಾರವಾಗಿ ಆಯ್ಕೆ ಸಮಿತಿ ತುಂಬಾ ಸ್ಪಷ್ಟವಾಗಿದೆ' ಎಂದು ಪ್ರಸಾದ್ ತಿಳಿಸಿದರು.
ಟೆಸ್ಟ್ ನಲ್ಲಿ ತ್ರಿಶತಕ ಸಾಧನೆ ಹೊಂಡಿರುವ ಕರುಣ್ ನಾಯರ್ ಅವರನ್ನು ಇಂಗ್ಲೆಂಡ್-ಭಾರತ ಕಡೆಯ ಎರಡು ಟೆಸ್ಟ್ ವೇಳೆ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದರೆ ನಾಯರ್ ಗೆ ಆಡುವ 11 ಆಟಗಾರರಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆ ಸಂದರ್ಭ ಹನುಮ ವಿಹಾರಿ ಅವರು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಪಂದ್ಯದಲ್ಲಿ ಅರ್ಧ ಶತಕ ಮತ್ತು ಬೌಲಿಂಗ್ ನಲ್ಲೂ ಮಿಂಚಿದ್ದರು. ಹೀಗಾಗಿ ವಿಂಡೀಸ್ ಟೆಸ್ಟ್ ನಲ್ಲೂ ವಿಹಾರಿಗೆ ಸ್ಥಾನ ದೊರೆತಿದೆ.
ತಂಡದ ಆಯ್ಕೆ ನಡೆಯುವಾಗ ತೆಗೆದುಕೊಳ್ಳಲಾಗುವ ನಿರ್ಧಾರದ ಬಗ್ಗೆ ಮಾತನಾಡಿದ ಪ್ರಸಾದ್, ಇಂಗ್ಲೆಂಡ್ ಟೆಸ್ಟ್ ವೇಳೆಯೂ ಕರುಣ್ ಅವರನ್ನು ತಂಡದಿಂದ ಹೊರಗಿಟ್ಟಾಗ ನಾಯರ್ ಜೊತೆ ಮಾತಾಡಿದ್ದೆವು. ನನ್ನ ಸಹೋದ್ಯೋಗಿ ದೇವಾಂಗ್ ಗಾಂಧಿ ಈ ಬಗ್ಗೆ ಕರುಣ್ ಗೆ ವಿಚಾರ ಸ್ಪಷ್ಟಪಡಿಸಿದ್ದರು ಎಂದಿದ್ದಾರೆ.
'ನನ್ನ ಸಹೋದ್ಯೋಗಿ ದೇವಾಂಗ್ ಗಾಂಧಿ ಅವರು ಇಂಗ್ಲೆಂಡ್ ಟೆಸ್ಟ್ ವೇಳೆ ಆಡಲು ಕರುಣ್ ಗೆ ಅವಕಾಶ ಸಿಗದಿದ್ದಾಗ ಕರುಣ್ ಒಟ್ಟಿಗೆ ಸುದೀರ್ಘವಾಗಿ ಮಾತನಾಡಿದ್ದರು. ಅವತ್ತಿನ ಸಂವಹನದ ಉದ್ದೇಶ ಕರುಣ್ ಅವರಲ್ಲಿನ ಉತ್ಸಾಹ ಕುಂದದಿರುವಂತೆ ಪ್ರೇರೇಪಿಸುವುದು ಮತ್ತು ಅವಕಾಶಕ್ಕಾಗಿ ಇನ್ನೂ ಕೊಂಚ ಕಾಯುವಂತೆ ತಿಳಿಸುವುದಾಗಿತ್ತು' ಎಂದು ಎಂಎಸ್ಕೆ ಪ್ರಸಾದ್ ತಿಳಿಸಿದರು.