ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳಲ್ಲಿ ನಡೆಯದೇ ಇದ್ದ ಜನಪ್ರಿಯ ದೇಸಿ ಕ್ರಿಕೆಟ್ ಟೂರ್ನಮೆಂಟ್ ರಣಜಿ ಟ್ರೋಫಿ ಇದೀಗ ಮರಳಿ ಬಂದಿದೆ. ಭಾರತದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಇದಾಗಿದ್ದು, ಟೀಮ್ ಇಂಡಿಯಾದಲ್ಲಿ ಕಳಪೆ ಪ್ರದರ್ಶನ ನೀಡಿ ಹೊರಬಿದ್ದಿರುವ ಹಿರಿಯ ಕ್ರಿಕೆಟಿಗರಿಗೂ ಕೂಡ ರಣಜಿ ಟ್ರೋಫಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಹೀಗೆ ಸಾಕಷ್ಟು ಮಹತ್ವವನ್ನು ಹೊಂದಿರುವ ರಣಜಿ ಟ್ರೋಫಿ 2022ನೇ ಸಾಲಿನ ಟೂರ್ನಿ ಫೆಬ್ರವರಿ 17ರಿಂದ ಆರಂಭವಾಗಿದ್ದು, ಮೊದಲ ದಿನವೇ 19 ಪಂದ್ಯಗಳು ಶುರುವಾಗಿವೆ.
ಹೀಗೆ ಉದ್ಘಾಟನಾ ದಿನದಂದು ಆರಂಭವಾದ ಪಂದ್ಯಗಳ ಪೈಕಿ ಮುಂಬೈ ಮತ್ತು ಸೌರಾಷ್ಟ್ರ ತಂಡಗಳ ನಡುವಿನ ಪಂದ್ಯ ಕೂಡ ಒಂದು. ಅಹಮದಾಬಾದ್ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಬ್ಯಾಟಿಂಗ್ ಆಯ್ದುಕೊಂಡು 157 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 544 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು. ಮುಂಬೈ ತಂಡದ ಪರ ಅಜಿಂಕ್ಯ ರಹಾನೆ 129 ರನ್ ಗಳಿಸಿ ಮಿಂಚಿದರೆ, ಸರ್ಫರಾಜ್ ಖಾನ್ ಬರೋಬ್ಬರಿ 275 ರನ್ ಕಲೆಹಾಕಿ ಅಬ್ಬರಿಸಿದರು ಹಾಗೂ ತನುಷ್ ಕೋಟಿಯನ್ ಅಜೇಯ 50 ರನ್ ಕಲೆ ಹಾಕಿ ಗಮನ ಸೆಳೆದರು. ಈ ಮೂವರು ಆಟಗಾರರನ್ನು ಹೊರತು ಪಡಿಸಿದರೆ ಮುಂಬೈ ತಂಡದ ಬೇರೆ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಕೊಹ್ಲಿ ಸೇರಿ ಮೂವರು ಪ್ರಮುಖರು ತಂಡದಿಂದ ಔಟ್!
ಈ ಮೂಲಕ ಮುಂಬೈ ತಂಡ ಮೊದಲನೇ ಇನ್ನಿಂಗ್ಸ್ನಲ್ಲಿ ಉತ್ತಮ ಮೊತ್ತ ಕಲೆ ಹಾಕಿದರೆ, ಅತ್ತ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ 220 ರನ್ಗಳಿಗೆ ಆಲ್ ಔಟ್ ಆಗುವುದರ ಮೂಲಕ 324 ರನ್ಗಳ ಹಿನ್ನಡೆಯೊಂದಿಗೆ ಫಾಲೋಆನ್ ನಿಯಮಕ್ಕೆ ಒಳಗಾಗಿದೆ. ಹೀಗೆ ಹೀನಾಯ ಪ್ರದರ್ಶನ ನೀಡಿರುವ ಸೌರಾಷ್ಟ್ರ ತಂಡದ ಪರ ಚೇತೇಶ್ವರ್ ಪೂಜಾರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಡಕ್ ಔಟ್ ಆಗುವುದರ ಮೂಲಕ ಮುಖಭಂಗಕ್ಕೆ ಒಳಗಾಗಿದ್ದಾರೆ. ಹೌದು, 4 ಎಸೆತಗಳನ್ನು ಎದುರಿಸಿದ ಚೇತೇಶ್ವರ್ ಪೂಜಾರ ಮೋಹಿತ್ ಅವಸ್ತಿ ಎಸೆತಕ್ಕೆ ಎಲ್ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಪಂದ್ಯದಲ್ಲಿನ ತನ್ನ ಕಳಪೆ ಪ್ರದರ್ಶನವನ್ನು ಚೇತೇಶ್ವರ್ ಪೂಜಾರ ರಣಜಿ ಟ್ರೋಫಿಯಲ್ಲಿಯೂ ಮುಂದುವರಿಸಿದ್ದಾರೆ. ಇದೇ ಪಂದ್ಯದಲ್ಲಿ ತನ್ನ ಎದುರಾಳಿ ತಂಡದ ಅಜಿಂಕ್ಯ ರಹಾನೆ ಶತಕ ಬಾರಿಸಿ ಕಮ್ ಬ್ಯಾಕ್ ಮಾಡಿದರೆ ಚೇತೇಶ್ವರ್ ಪೂಜಾರ ಮಾತ್ರ ಮತ್ತೆ ಶೂನ್ಯ ಸುತ್ತುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಹೀಗೆ ಆದರೆ ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶ ಕಷ್ಟ
ಈಗಾಗಲೇ ಟೀಮ್ ಇಂಡಿಯಾದಿಂದ ಹೊರಬಿದ್ದು ರಣಜಿ ಟ್ರೋಫಿಯಲ್ಲಿ ಭಾಗವಹಿಸುತ್ತಿರುವ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನಗಳನ್ನು ನೀಡುವುದರ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕಿದೆ. ಈ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಮತ್ತೆ ಅಂತರ ರಾಷ್ಟ್ರೀಯ ತಂಡದ ಬಾಗಿಲು ತೆರೆಯಲಿದೆ ಎಂಬ ವಿಷಯ ತಿಳಿದಿದ್ದರೂ ಕೂಡ ಚೇತೇಶ್ವರ್ ಪೂಜಾರ ಈ ರೀತಿ ಕಳಪೆ ಆಟವಾಡುತ್ತಿರುವುದು ಮುಂದೆ ಕಂಟಕವಾಗಿ ಪರಿಣಮಿಸಲಿದೆ. ಅತ್ತ ಇದೇ ದಿನದಂದು ಮುಂಬರಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ 18 ಆಟಗಾರರ ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಯನ್ನು ಕೈಬಿಟ್ಟಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಕೊನೆಗೂ ನಾಯಕನ ಘೋಷಣೆ, ಪ್ರಮುಖರು ಔಟ್!
ಶ್ರೀಲಂಕಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಬ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್ (ಫಿಟ್ನೆಸ್ ಆಧಾರದ ಮೇಲೆ), ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್, ಜೆ ಬುಮ್ರಾ, ಎಂ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್