ರಣಜಿ ಟ್ರೋಫಿ: ಕರ್ನಾಟಕದ ಪರ ಅಬ್ಬರಿಸಿ, ಶತಕ ಸಿಡಿಸಿ ಫಾರ್ಮ್ಗೆ ಮರಳಿದ ದೇವದತ್ ಪಡಿಕ್ಕಲ್

ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳಲ್ಲಿ ನಡೆಯದೇ ಇದ್ದ ಜನಪ್ರಿಯ ದೇಸಿ ಕ್ರಿಕೆಟ್ ಟೂರ್ನಮೆಂಟ್ ರಣಜಿ ಟ್ರೋಫಿ ಇದೀಗ ಮರಳಿ ಬಂದಿದೆ. ಭಾರತದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಇದಾಗಿದ್ದು, ಟೀಮ್ ಇಂಡಿಯಾದಲ್ಲಿ ಕಳಪೆ ಪ್ರದರ್ಶನ ನೀಡಿ ಹೊರಬಿದ್ದಿರುವ ಹಿರಿಯ ಕ್ರಿಕೆಟಿಗರಿಗೂ ಕೂಡ ರಣಜಿ ಟ್ರೋಫಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಹೀಗೆ ಸಾಕಷ್ಟು ಮಹತ್ವವನ್ನು ಹೊಂದಿರುವ ರಣಜಿ ಟ್ರೋಫಿ 2022ನೇ ಸಾಲಿನ ಟೂರ್ನಿ ಫೆಬ್ರವರಿ 17ರಿಂದ ಆರಂಭವಾಗಿದೆ.
ಇನ್ನು ಫೆಬ್ರವರಿ 17ರಂದು ಆರಂಭವಾಗಿದ್ದ ಕರ್ನಾಟಕ ಮತ್ತು ರೈಲ್ವೇಸ್ ತಂಡಗಳ ನಡುವಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟಕ ಟೂರ್ನಿಯಲ್ಲಿನ ತನ್ನ ದ್ವಿತೀಯ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ 117 ರನ್ಗಳ ಬೃಹತ್ ಗೆಲುವನ್ನು ದಾಖಲಿಸುವುದರ ಮೂಲಕ ಗೆಲುವಿನ ಖಾತೆ ತೆರೆದಿತ್ತು. ಹೀಗೆ ಟೂರ್ನಿಯಲ್ಲಿನ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಡ್ರಾ ಮತ್ತು ಗೆಲುವನ್ನು ಕಂಡಿರುವ ಕರ್ನಾಟಕ ತನ್ನ ತೃತೀಯ ಪಂದ್ಯದಲ್ಲಿ ಪಾಂಡಿಚೇರಿ ತಂಡವನ್ನು ಎದುರಿಸುತ್ತಿದೆ. ಹೌದು, ರಣಜಿ ಟ್ರೋಫಿಯ ಮೂರನೇ ಪಂದ್ಯಗಳು ಇಂದಿನಿಂದ ( ಮಾರ್ಚ್ 3 ) ಆರಂಭವಾಗಿದ್ದು, ಕರ್ನಾಟಕ ಮತ್ತು ಪಾಂಡಿಚೇರಿ ತಂಡಗಳ ನಡುವಿನ ಪಂದ್ಯ ಚೆನ್ನೈನ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ನಾಡಾರ್ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಂಡಿಚೆರಿ ಬೌಲಿಂಗ್ ಆಯ್ದುಕೊಂಡಿದ್ದು, ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡದ ಪರ ಆರಂಭಿಕ ಆಟಗಾರರಾಗಿ ರವಿಕುಮಾರ್ ಸಮರ್ಥ್ ಮತ್ತು ದೇವದತ್ ಪಡಿಕ್ಕಲ್ ಕಣಕ್ಕಿಳಿದರು.
ಹೀಗೆ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಆಕರ್ಷಕ ಶತಕವನ್ನು ಸಿಡಿಸಿದ್ದು, ಕರ್ನಾಟಕ ಸಂಜೆಯ ಚಹಾ ವಿರಾಮದ ವೇಳೆಗೆ 61 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿದೆ. ಇನ್ನು ಕಳೆದೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡದೇ ಇದ್ದ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಉತ್ತಮ ಆಟವನ್ನಾಡಿದ್ದು ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಮರಳಿ ಫಾರ್ಮ್ ಕಂಡುಕೊಂಡ ದೇವದತ್ ಪಡಿಕ್ಕಲ್
ಕಳೆದ ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮಿಂಚಿದ್ದ ದೇವದತ್ ಪಡಿಕ್ಕಲ್ ಇತ್ತೀಚೆಗಷ್ಟೇ ನಡೆದ ಕೆಲ ದೇಶೀ ಕ್ರಿಕೆಟ್ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಹೀಗೆ ಕೆಲ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ದೇವದತ್ ಪಡಿಕ್ಕಲ್ ಸದ್ಯ ಪಾಂಡಿಚೇರಿ ವಿರುದ್ಧದ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 165 ಎಸೆತಗಳಲ್ಲಿ 100* ರನ್ ಬಾರಿಸಿದ್ದಾರೆ. ದೇವದತ್ ಪಡಿಕ್ಕಲ್ ಸಿಡಿಸಿರುವ ಈ ಶತಕದಲ್ಲಿ 15 ಬೌಂಡರಿಗಳೂ ಸಹ ಸೇರಿದ್ದು, ಕ್ರಿಕೆಟ್ ಪಂಡಿತರು ದೇವದತ್ ಪಡಿಕ್ಕಲ್ ಈಸ್ ಬ್ಯಾಕ್ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದ ಕರುಣ್ ನಾಯರ್
ಪಾಂಡಿಚೇರಿ ವಿರುದ್ಧದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರ್ನಾಟಕದ ಕರುಣ್ ನಾಯರ್ 13 ಎಸೆತಗಳಲ್ಲಿ 6 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಹೀಗೆ ಈ ಪಂದ್ಯದಲ್ಲಿ ಅಬ್ಬರಿಸದ ಕರುಣ್ ನಾಯರ್ ಈ ಹಿಂದಿನ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 175 ರನ್ ಮತ್ತು ದ್ವಿತೀಯ ಇನ್ನಿಂಗ್ಸ್ನಲ್ಲಿ ಅಜೇಯ 71 ರನ್ ಸಿಡಿಸಿದ್ದರು. ಹೀಗೆ ಕಳೆದ ಪಂದ್ಯದಲ್ಲಿ ಅಬ್ಬರಿಸಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಕರುಣ್ ನಾಯರ್ ಈ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ನಿರಾಸೆ ಮೂಡಿಸಿದ್ದಾರೆ.

ಪ್ಲೇಯಿಂಗ್ ಇಲೆವೆನ್ಸ್
ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ವಿಧ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ
ಪಾಂಡಿಚೇರಿ ಪ್ಲೇಯಿಂಗ್ ಇಲೆವೆನ್: ಪಾರಸ್ ಡೋಗ್ರಾ, ದಾಮೋದರನ್ ರೋಹಿತ್ (ನಾಯಕ), ಸುಬೋತ್ ಭಾಟಿ, ಪವನ್ ದೇಶಪಾಂಡೆ, ಎಸ್ ಕಾರ್ತಿಕ್ (ವಿಕೆಟ್ ಕೀಪರ್), ಅರವಿಂದ್ ಕೋತಂಡಪಾಣಿ, ನೆಯಾನ್ ಶ್ಯಾಮ್ ಕಂಗಾಯನ್, ಸಾಗರ್ ತ್ರಿವೇದಿ, ಸಾಗರ್ ಉದೇಶಿ, ಗೊನ್ನಾಬತ್ತುಲ ಚಿರಂಜೀವಿ, ಆಶಿತ್ ರಾಜೀವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications