ರಣಜಿ ಟ್ರೋಫಿ: ಮಿಂಚಿದ ಪಡಿಕ್ಕಲ್, ಪುದುಚೆರಿಗೆ ಸೋಲುಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ

ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ನಡೆಯದೇ ಇದ್ದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಈ ವರ್ಷ ಮರಳಿ ಬಂದಿದ್ದು ಫೆಬ್ರವರಿ 17ರಿಂದ ಆರಂಭವಾಗಿದೆ. ಸದ್ಯ ಟೂರ್ನಿಯ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದ್ದು, ಎಲ್ಲಾ ತಂಡಗಳ ಮೊದಲ ೩ ಪಂದ್ಯಗಳು ಮುಕ್ತಾಯಗೊಂಡಿದ್ದು, ಕರ್ನಾಟಕ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಲೀಗ್ ಹಂತದ ತನ್ನ ಮೊದಲನೇ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಡ್ರಾ ಮಾಡಿಕೊಂಡಿತ್ತು ಹಾಗೂ ನಂತರ ನಡೆದ ದ್ವಿತೀಯ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಜಯವನ್ನು ಸಾಧಿಸಿತ್ತು. ಹೀಗೆ ತನ್ನ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಡ್ರಾ ಮತ್ತು ಜಯವನ್ನು ಸಾಧಿಸಿದ ಕರ್ನಾಟಕ ತಂಡ ಮಾರ್ಚ್ 3ರಂದು ಆರಂಭವಾದ ಪಂದ್ಯದಲ್ಲಿ ಪುದುಚೆರಿ ವಿರುದ್ಧ ಸೆಣಸಾಟವನ್ನು ನಡೆಸಿ ೨೦ ರನ್ಗಳ ಜಯ ಸಾಧಿಸಿದೆ. ಕರ್ನಾಟಕ ಮತ್ತು ಪುದುಚೇರಿ ತಂಡಗಳ ನಡುವಿನ ಪಂದ್ಯ ಚೆನ್ನೈನ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ನಾಡಾರ್ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು, ಈ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೆರಿ ಬೌಲಿಂಗ್ ಆಯ್ಕೆ ಮಾಡಿಕೊಂಡು ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶವನ್ನು ನೀಡಿತ್ತು. ಅದರಂತೆ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 453 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಇನ್ನು ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪುದುಚೆರಿ ೨೪೧ ರನ್ಗಳಿಗೆ ಆಲ್ಔಟ್ ಆಯಿತು. ಈ ಇನ್ನಿಂಗ್ಸ್ನಲ್ಲಿ ಪುದುಚೆರಿ ತಂಡದ ನಾಯಕ ದಾಮೋದರನ್ ರೋಹಿತ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ಆಟವನ್ನಾಡಲಿಲ್ಲ. ದಾಮೋದರನ್ ರೋಹಿತ್ ಶತಕ ಸಿಡಿಸಿ ಅಜೇಯರಾಗಿ ಉಳಿದರೆ ಕಡಿಮೆ ಮೊತ್ತಕ್ಕೆ ಆಲ್ಔಟ್ ಆದ ಪುದುಚೆರಿ ಫಾಲೋಆನ್ ನಿಯಮಕ್ಕೆ ಒಳಗಾಯಿತು.

ಎರಡನೇ ಇನ್ನಿಂಗ್ಸ್ನಲ್ಲೂ ಮುಗ್ಗರಿಸಿದ ಪುದುಚೆರಿ
ಕರ್ನಾಟಕ ಮತ್ತು ಪುದುಚೆರಿ ತಂಡಗಳ ನಡುವಿನ ಮೊದಲ ಇನ್ನಿಂಗ್ಸ್ನಲ್ಲಿ ಕಡಿಮೆ ಮೊತ್ತ ಕಲೆಹಾಕಿ 212 ರನ್ಗಳ ಹಿನ್ನಡೆಯನ್ನು ಅನುಭವಿಸಿ ಫಾಲೋಆನ್ ನಿಯಮಕ್ಕೆ ಒಳಗಾದ ಪುದುಚೆರಿ ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ ಆಲ್ಔಟ್ ಆಗಿದೆ. ಹೌದು, ಪಂದ್ಯದ ಕೊನೆಯ ದಿನದಲ್ಲಿ ( ಮಾರ್ಚ್ 6 ) ಇನ್ನೂ 156 ನಿಮಿಷಗಳು ಬಾಕಿ ಇರುವಾಗಲೇ ಪುದುಚೆರಿ ತಂಡವನ್ನು 192 ರನ್ಗಳಿಗೆ ಕಟ್ಟಿಹಾಕಿದ ಕರ್ನಾಟಕ ಇನ್ನಿಂಗ್ಸ್ ಸಹಿತ 20 ರನ್ಗಳ ಜಯ ಸಾಧಿಸಿದೆ.

ದೇವದತ್ ಪಡಿಕ್ಕಲ್ ಪಂದ್ಯಶ್ರೇಷ್ಠ
ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 309 ಎಸೆತಗಳನ್ನು ಎದುರಿಸಿ 178 ರನ್ ಗಳಿಸಿ ಕರ್ನಾಟಕ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದೇವದತ್ ಪಡಿಕ್ಕಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಪುದುಚೆರಿಯ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಪರ ಕೃಷ್ಣಪ್ಪ ಗೌತಮ್ 5 ವಿಕೆಟ್ ಗಳಿಸಿದರೆ, ಪ್ರಸಿದ್ಧ್ ಕೃಷ್ಣ ಮತ್ತು ವಿದ್ಯಾಧರ್ ಪಾಟೀಲ್ ತಲಾ ಎರಡು ವಿಕೆಟ್ ಪಡೆದರು ಹಾಗೂ ವಿ ಕಾವೇರಪ್ಪ ಒಂದು ವಿಕೆಟ್ ಪಡೆದರು. ಹಾಗೂ ಪುದುಚೆರಿ ತಂಡವನ್ನು ಎರಡನೇ ಇನ್ನಿಂಗ್ಸ್ನಲ್ಲಿ 192 ರನ್ಗಳಿಗೆ ಕಟ್ಟಿಹಾಕಿದ ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 3 ವಿಕೆಟ್ ಹಾಗೂ ವಿದ್ಯಾದರ್ ಪಾಟೀಲ್ ಮತ್ತು ಕೃಷ್ಣಪ್ಪ ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.

ಕ್ವಾರ್ಟರ್ ಫೈನಲ್ಗೆ ಕರ್ನಾಟಕ
ಹೀಗೆ ಈ ಬಾರಿಯ ರಣಜಿ ಟ್ರೋಫಿಯ ಲೀಗ್ ಹಂತದ ತನ್ನ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಕರ್ನಾಟಕ ಕ್ವಾರ್ಟರ್ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದು, ಈ ಪಂದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡ ನಂತರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications