ಎರಡನೇ ಇನ್ನಿಂಗ್ಸ್ನಲ್ಲೂ ಮುಗ್ಗರಿಸಿದ ಪುದುಚೆರಿ
ಕರ್ನಾಟಕ ಮತ್ತು ಪುದುಚೆರಿ ತಂಡಗಳ ನಡುವಿನ ಮೊದಲ ಇನ್ನಿಂಗ್ಸ್ನಲ್ಲಿ ಕಡಿಮೆ ಮೊತ್ತ ಕಲೆಹಾಕಿ 212 ರನ್ಗಳ ಹಿನ್ನಡೆಯನ್ನು ಅನುಭವಿಸಿ ಫಾಲೋಆನ್ ನಿಯಮಕ್ಕೆ ಒಳಗಾದ ಪುದುಚೆರಿ ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ ಆಲ್ಔಟ್ ಆಗಿದೆ. ಹೌದು, ಪಂದ್ಯದ ಕೊನೆಯ ದಿನದಲ್ಲಿ ( ಮಾರ್ಚ್ 6 ) ಇನ್ನೂ 156 ನಿಮಿಷಗಳು ಬಾಕಿ ಇರುವಾಗಲೇ ಪುದುಚೆರಿ ತಂಡವನ್ನು 192 ರನ್ಗಳಿಗೆ ಕಟ್ಟಿಹಾಕಿದ ಕರ್ನಾಟಕ ಇನ್ನಿಂಗ್ಸ್ ಸಹಿತ 20 ರನ್ಗಳ ಜಯ ಸಾಧಿಸಿದೆ.
ದೇವದತ್ ಪಡಿಕ್ಕಲ್ ಪಂದ್ಯಶ್ರೇಷ್ಠ
ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 309 ಎಸೆತಗಳನ್ನು ಎದುರಿಸಿ 178 ರನ್ ಗಳಿಸಿ ಕರ್ನಾಟಕ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದೇವದತ್ ಪಡಿಕ್ಕಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಪುದುಚೆರಿಯ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಪರ ಕೃಷ್ಣಪ್ಪ ಗೌತಮ್ 5 ವಿಕೆಟ್ ಗಳಿಸಿದರೆ, ಪ್ರಸಿದ್ಧ್ ಕೃಷ್ಣ ಮತ್ತು ವಿದ್ಯಾಧರ್ ಪಾಟೀಲ್ ತಲಾ ಎರಡು ವಿಕೆಟ್ ಪಡೆದರು ಹಾಗೂ ವಿ ಕಾವೇರಪ್ಪ ಒಂದು ವಿಕೆಟ್ ಪಡೆದರು. ಹಾಗೂ ಪುದುಚೆರಿ ತಂಡವನ್ನು ಎರಡನೇ ಇನ್ನಿಂಗ್ಸ್ನಲ್ಲಿ 192 ರನ್ಗಳಿಗೆ ಕಟ್ಟಿಹಾಕಿದ ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 3 ವಿಕೆಟ್ ಹಾಗೂ ವಿದ್ಯಾದರ್ ಪಾಟೀಲ್ ಮತ್ತು ಕೃಷ್ಣಪ್ಪ ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.
ಕ್ವಾರ್ಟರ್ ಫೈನಲ್ಗೆ ಕರ್ನಾಟಕ
ಹೀಗೆ ಈ ಬಾರಿಯ ರಣಜಿ ಟ್ರೋಫಿಯ ಲೀಗ್ ಹಂತದ ತನ್ನ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಕರ್ನಾಟಕ ಕ್ವಾರ್ಟರ್ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದು, ಈ ಪಂದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡ ನಂತರ ನಡೆಯಲಿದೆ.