ಶಿವಮೊಗ್ಗ, ಅಕ್ಟೋಬರ್ 24: ಇಲ್ಲಿನ ಕೆಎಸ್ ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಬಿಗಿ ಬೌಲಿಂಗ್ ದಾಳಿಗೆ ಕರ್ನಾಟಕ ತಂಡ ತತ್ತರಿಸಿದೆ.
ಶಿವಮೊಗ್ಗದಲ್ಲಿ ರಣಜಿ ಪಂದ್ಯ: ಕರ್ನಾಟಕ vs ಹೈದರಾಬಾದ್
84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಮಂಗಳವಾರ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ಹೈದರಾಬಾದ್ ಬೌಲಿಂಗ್ ದಾಳಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 183 ರನ್ ಗಳಿಗೆ ಸರ್ವ ಪತನ ಕಂಡಿದೆ.
ಹೈದರಾಬಾದ್ ಬೌಲಿಂಗ್ ಗೆ ಕರ್ನಾಟಕ ಹುಡುಗರು ರನ್ ಗಳಿಸಲು ತಿಣುಕಾಡಿದರು. ಸ್ಟುವರ್ಟ್ ಬಿನ್ನಿ (61) ಅರ್ಧಶತಕ ಸಿಡಿಸಿರುವುದನ್ನು ಹೊರೆತು ಪಡಿಸಿ ಉಳಿದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಕರುಣ್ ನಾಯರ್ 23, ಮಿಥುನ್ ಹಾಗೂ ಸಮರ್ಥ್ ತಲಾ 19 ರನ್ ಗಳಿಸುವಷ್ಟರಲ್ಲಿಯೇ ಸುಸ್ತಾಗಿ ವಿಕೆಟ್ ಒಪ್ಪಿಸಿದರು. ಹೈದರಾಬಾದ್ ಪರ ಸಿರಾಜ್ ಅವರು ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು. ಇನ್ನು ರವಿ ಕಿರಣ್ (3) ಹಾಗೂ ಓಜಾ (2) ಕರ್ನಾಟಕ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಹಾದಿ ತೋರಿಸಿದರು.