ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಮಹಾರಾಷ್ಟ್ರ ಮತ್ತು ಅಸ್ಸಾಂ ನಡುವಿ ರಣಜಿ ಟ್ರೋಫಿ ಪಂದ್ಯದಲ್ಲಿ ಮಾಜಿ ಎಸ್ಆರ್ಹೆಚ್ ಆಟಗಾರ ಕೇದಾರ್ ಜಾಧವ್ ಅಬ್ಬರಿಸಿದ್ದಾರೆ.
ಮೂರು ವರ್ಷಗಳ ನಂತರ ದೇಶೀಯ ಕ್ರಿಕೆಟ್ಗೆ ಮರಳಿರುವ ಜಾಧವ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. 283 ಎಸೆತಗಳಲ್ಲಿ 283 ರನ್ ಗಳಿಸುವ ಮೂಲಕ ತಾನು ಸಮರ್ಥ ಬ್ಯಾಟರ್ ಎನ್ನುವುದನ್ನು ಸಾಬೀತುಮಾಡಿದ್ದಾರೆ. 17 ರನ್ ಅಂತರದಲ್ಲಿ ಅವರು ತ್ರಿಶತಕವನ್ನು ತಪ್ಪಿಸಿಕೊಂಡರು.
ಜಾಧವ್ ಅವರ ಭರ್ಜರಿ ಇನ್ನಿಂಗ್ಸ್ನಲ್ಲಿ 21 ಬೌಂಡರಿ ಮತ್ತು 12 ಭರ್ಜರಿ ಸಿಕ್ಸರ್ ಇದ್ದವು. ಅಸ್ಸಾಂ ಮೊದಲ ಇನ್ನಿಂಗ್ಸ್ನಲ್ಲಿ 274 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಮಹಾರಷ್ಟ್ರ ಜಾಧವ್ರ ದ್ವಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು 594 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 320 ರನ್ಗಳ ಮುನ್ನಡೆ ಸಾಧಿಸುವ ಮೂಲಕ ಇನ್ನಿಂಗ್ಸ್ ಜಯ ಸಾಧಿಸುವ ಉದ್ದೇಶ ಹೊಂದಿತ್ತು.
Ind vs SL 2nd T20I : ನಾಯಕ ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ಆ ನಿರ್ಧಾರದ ಬಗ್ಗೆ ವಾಸಿಂ ಜಾಫರ್ ಅಚ್ಚರಿ
ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಎಚ್ಚರಿಕೆಯ ಆಟವಾಡಿದ ಅಸ್ಸಾಂ 4 ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 309 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡರು.
ರುತುರಾಜ್ ಬದಲಿಗೆ ಸ್ಥಾನ ಪಡೆದ ಜಾಧವ್
ರುತುರಾಜ್ ಗಾಯಕ್ವಾಡ್ ಮತ್ತು ರಾಹುಲ್ ತ್ರಿಪಾಠಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾದ ನಂತರ, ಮಹಾರಾಷ್ಟ್ರ ರಣಜಿ ತಂಡದಲ್ಲಿ ಕೇದಾರ್ ಜಾಧವ್ ಸ್ಥಾನ ಪಡೆದರು. ಮಹಾರಾಷ್ಟ್ರ 95 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ಗೆ ಆಗಮಿಸಿದ ಜಾಧವ್, ಎರಡನೇ ದಿನದಾಟದ ಅಂತ್ಯಕ್ಕೆ 144 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದರು. ಮೂರನೇ ದಿನದಲ್ಲಿ ಅವರು ತಮ್ಮ ದ್ವಿಶತಕವನ್ನು ಪೂರೈಸಿದ್ದಲ್ಲದೆ, ತ್ರಿಶತಕದಿಂದ ವಂಚಿತರಾದರು.
2018ರ ಬಳಿಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಜಾಧವ್ ಗಳಿಸಿದ ಮೊದಲ ಶತಕವಾಗಿದೆ. 2013-14ರ ರಣಜಿ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ಬಳಿಕ ಈಗ ಅವರ ಬ್ಯಾಟ್ನಿಂದ ಮತ್ತೊಂದು ದ್ವಿಶತಕ ದಾಖಲಾಗಿದೆ. 2012-13ರ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ವಿರುದ್ಧ 327 ರನ್ ಗಳಿಸಿದ್ದು, ಅವರ ಈವರೆಗಿನ ಗರಿಷ್ಠ ವೈಯಕ್ತಿಕ ರನ್ ಆಗಿದೆ.
ಐಪಿಎಲ್ನಲ್ಲಿ ಹರಾಜಾಗದೆ ಉಳಿದ ಜಾಧವ್
ಕೇದಾರ್ ಜಾಧವ್ 2023ರ ಮಿನಿ ಹರಾಜಿನಲ್ಲಿ 1 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದರೂ ಹರಾಜಾಗದೆ ಉಳಿದರು. ಅವರು ಕೊನೆಯದಾಗಿ 2021ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಿದ್ದರು. 2018 ರಿಂದ 2020ರ ವರೆಗೆ ಅವರು ಸಿಎಸ್ಕೆ ತಂಡದ ಭಾಗವಾಗಿದ್ದರು. 2010 ಮತ್ತು 2013 ರಿಂದ 2015ರ ವರೆಗೆ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡಕ್ಕಾಗಿ ಆಡಿದ್ದಾರೆ. 2011ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡಕ್ಕಾಗಿ ಆಡಿದ್ದರು.