ಹೈದರಾಬಾದ್, ಅ.19: ಮೋದಿ ಅವರ ಕರೆಗೆ ಓಗೊಟ್ಟು ಸಚಿನ್ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ
ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಸಚಿನ್ ರನ್ನು ಹಾಡಿ ಹೊಗಳಿದ್ದರು. ಇದಾದ ಬೆನ್ನಲ್ಲೇ ರಾಜ್ಯ ಸಭಾ ಸದಸ್ಯ ಸಚಿನ್ ಅವರು ಮೋದಿ ಅವರ ಮತ್ತೊಂದು ಕೋರಿಕೆಯನ್ನು ಈಡೇರಿಸಿದ್ದಾರೆ.
ಸ್ವಚ್ಛ ಭಾರತ್ ಅಭಿಯಾನದಲ್ಲಿ ಪಾಲ್ಗೊಂಡ ನಂತರ ಕ್ರಿಕೆಟ್ ದಿಗ್ಗಜ ಸಚಿನ್ ಅವರು ಪತ್ನಿ ಅಂಜಲಿ ಸಮೇತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ಕುರಿತಂತೆ ಪ್ರಧಾನಿ ಮೋದಿ ಅವರು ಸರಣಿ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದರು. ದೇಶದ ಸ್ವಚ್ಛತೆ ವಿಷಯದಲ್ಲಿ ಸಚಿನ್ ಅವರು ತೋರಿರುವ ಕಾಳಜಿಗೆ ಧನ್ಯವಾದಗಳು ಎಂದು ಮೋದಿ ಟ್ವೀಟ್ ಮಾಡಿದ್ದರು. ಇದರ ಜೊತೆಗೆ ಸಂಸದರ ಆದರ್ಶ್ ಗ್ರಾಮ ಯೋಜನೆ ಅಡಿಯಲ್ಲಿ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವಂತೆ ಸಂಸದ ಸಚಿನ್ ಅವರಿಗೆ ಮೋದಿ ಅವರು ಕೇಳಿಕೊಂಡಿದ್ದರು.[ಭೇಟಿ ವಿವರ ಇಲ್ಲಿದೆ]
ಮೋದಿ ಅವರ ಕೋರಿಕೆ ಮನ್ನಿಸಿದ ಸಚಿನ್ ತೆಂಡೂಲ್ಕರ್ ಅವರು ಸಂಸದ್ ಆದರ್ಶ್ ಗ್ರಾಮ ಅಡಿಯಲ್ಲಿ ಆಂಧ್ರಪ್ರದೇಶದ ಗುಡೂರು ಮಂಡಲದ ಪುಟ್ಟಂರಾಜು ಕಾಂಡ್ರಿಕಾ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಸಂಸದರ ನಿಧಿಯಿಂದ ಗ್ರಾಮದ ಅಭಿವೃದ್ಧಿಗಾಗಿ 4 ಕೋಟಿ ರು ನೀಡಲು ಸಚಿನ್ ಮುಂದಾಗಿದ್ದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.
ಜಿಲ್ಲಾಧಿಕಾರಿ ಎನ್ ಶ್ರೀಕಾಂತ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಸಚಿನ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಜಂಟಿ ಕಲೆಕ್ಟರ್ ಜಿ ರೇಖಾರಾಣಿ ಅವರು ಈ ಬಗ್ಗೆ ಪ್ರಸ್ತಾವನೆಯನ್ನು ಸಂಸದ ಸಚಿನ್ ಅವರಿಗೆ ಸಲ್ಲಿಸಿದ್ದಾರೆ. ಇದಕ್ಕೆ ಸಚಿನ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ನವೆಂಬರ್ 16 ರಂದು ಸಚಿನ್ ಅವರು ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಗ್ರಾಮಸ್ಥರೊಡನೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ರಸ್ತೆ, ಕುಡಿಯುವ ನೀರು, ಅರೋಗ್ಯ ಕೇಂದ್ರ, ವಿದ್ಯುತ್ ಪೂರೈಕೆ, ನೀರಾವರಿ, ಸಮುದಾಯ ಭವನ, ಹೈಸ್ಕೂಲ್ ಅಲ್ಲದೆ ವೈ ಫೈ ಸೌಲಭ್ಯ ನೀಡಲು ಸಚಿನ್ ಅವರು ಮುಂದಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀಕಾಂತ್ ಹೇಳಿದ್ದಾರೆ.