ನವದೆಹಲಿ, ಫೆಬ್ರವರಿ 08: ಕ್ರಿಕೆಟ್ನಿಂದ ಸಚಿನ್ ನಿವೃತ್ತಿಯಾಗಿದ್ದರೂ, ಕ್ರಿಕೆಟ್ ಅವರಿಂದ ದೂರ ಹೋಗಿಲ್ಲ, ಅವರು ಎಲ್ಲಿದ್ದರೂ ಭಾರತದ ಕ್ರೀಡೆ ಮತ್ತು ವಿಶೇಷವಾಗಿ ಕ್ರಿಕೆಟ್ ಬಗ್ಗೆಯೇ ಅವರ ಚಿಂತನೆ ಇರುತ್ತದೆ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.
ಇತ್ತೀಚೆಗೆ ತಾನೆ ವಿಶ್ವಕಪ್ ಗೆದ್ದು ಸಾಧನೆ ಮಾಡಿದ ಭಾರತದ ಅಂಧರ ಕ್ರಿಕೆಟ್ ತಂಡದ ಪರ ವಕಾಲತ್ತು ವಹಿಸಿರುವ ಸಚಿನ್ ತೆಂಡೂಲ್ಕರ್ ಅವರು 'ಅಂಧರ ಕ್ರಿಕೆಟ್ಗೆ ಮಾನ್ಯತೆ ನೀಡಿ ಆ ಆಟಗಾರರನ್ನು ಪಿಂಚಣಿ ಯೋಜನೆಯಡಿ ಸೇರಿಸಬೇಕು' ಎಂದು ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಒತ್ತಾಯಿಸಿದ್ದಾರೆ.
ಈ ಕುರಿತು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಎಒ) ಅಧ್ಯಕ್ಷ ವಿನೋದ್ ರಾಯ್ಗೆ ಪತ್ರ ಬರೆದಿರುವ ಅವರು 'ಅಂಧ ಕ್ರಿಕೆಟಿಗರ ತಂಡದವರು ನಾಲ್ಕು ಬಾರಿ ವಿಶ್ವಕಪ್ ಗೆದ್ದಿದ್ದಾರೆ. ಆದರೂ ಅವರಿಗೆ ಮಾನ್ಯತೆ ನೀಡಲಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜನವರಿ 20ರಂದು ನಡೆದ ಅಂಧರ ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡದ ಪ್ರಶಸ್ತಿ ಗೆದ್ದಿತ್ತು. ಆಗ ಸಚಿನ್ ಅವರು ಅಂಧರ ತಂಡಕ್ಕೆ ಶುಭ ಹಾರೈಸಿದ್ದರು.
'ಅಂಧ ಆಟಗಾರರು ಕ್ರೀಡಾಂಗಣದಲ್ಲಿ ತೋರುವ ಸಾಮರ್ಥ್ಯ ಇತರರಿಗೆ ಮಾದರಿ ಎಂದಿರುವ ಸಚಿನ್, ಭಾರತ ತಂಡದವರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಆಟದ ಮೇಲೆ ಗಮನವಿಟ್ಟು ವಿಶ್ವಕಪ್ ಗೆದ್ದಿದ್ದಾರೆ. ಆ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ' ಎಂದು ಹೇಳಿದ್ದಾರೆ.
ಕ್ರಿಕೆಟ್ನಿಂದ ನಿವೃತ್ತ ಹೊಂದಿದ್ದರೂ ಸಹಿತ ಭಾರತದ ಎಲ್ಲ ಮಾದರಿಯ ಕ್ರಿಕೆಟ್ಪರ ಹಾಗೂ ಆಟಗಾರರ ಪರ ಸಚಿನ್ ಅವರು 'ಬ್ಯಾಟಿಂಗ್' ಮಾಡುತ್ತಲೇ ಬಂದಿದ್ದಾರೆ. ಸಚಿನ್ ಅವರ ಮನವಿಗೆ ಸ್ಪಂದಿಸಿ ಅಂಧರ ಕ್ರಿಕೆಟ್ಗೆ ಬಿಸಿಸಿಐ ಮಾನ್ಯತೆ ನೀಡಿ ಅಂಧ ಕ್ರಿಕೆಟ್ ಆಟಗಾರರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸುತ್ತದೆಯೊ ಕಾದು ನೋಡಬೇಕು.