
ಮುಂಬೈ, ಜುಲೈ 21: ಕಳೆದ ಭಾನುವಾರ ಮುಕ್ತಾಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಬಲಿಷ್ಠ ಟೀಮ್ ಇಂಡಿಯಾಗೆ ಕಾಡಿದ ಏಕೈಕ ಸಮಸ್ಯೆ ಎದರೆ ನಾಲ್ಕನೇ ಕ್ರಮಾಂಕದಲ್ಲಿ ಯಾವ ಬ್ಯಾಟ್ಸ್ಮನ್ಗೆ ಆಡುವ ಅವಕಾಶ ನೀಡಬೇಕೆಂಬುದು.
ಇದೀಗ ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿರುವ ಎಂ.ಎಸ್.ಕೆ ಪ್ರಸಾದ್ ಸಾರಥ್ಯದ 5 ಮಂದಿ ಸದಸ್ಯರ ಟೀಮ್ ಇಂಡಿಯಾ ಆಯ್ಕೆ ಸಮಿತಿಯು ಮುಂಬೈಕರ್ ಶ್ರೇಯಸ್ ಅಯ್ಯರ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲು ಮುಂದಾಗಿದ್ದು, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರನ್ನು ಸೀಮಿತ ಓವರ್ಗಳ ಸರಣಿಗೆ ಆಯ್ಕೆ ಮಾಡಿದೆ.
ಆಧುನಿಕ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಬಲಿಷ್ಠ ತಂಡವಾಗಿ ಕಂಗೊಳಿಸಿರುವ ಟೀಮ್ ಇಂಡಿಯಾಗೆ ಒಂದೇ ವೀಕ್ನೆಸ್ ಎಂಬಂತೆ 4ನೇ ಕ್ರಮಾಂಕದ ಬ್ಯಾಟ್ಸ್ಮನ್ನ ಕೊರತೆ ಕಾಡುತ್ತಿದೆ. ಇದೀಗ 2023ರ ವಿಶ್ವಕಪ್ ಹೊತ್ತಿಗೆ ಈ ಸಮಸ್ಯೆ ಬಗೆ ಹರಿಸಿಕೊಳ್ಳುವ ಕಡೆಗೆ ಟೀಮ್ ಇಮಡಿಯಾದ ಆಯ್ಕೆ ಸಮಿತಿ ಮೊದಲ ಆದ್ಯತೆ ನೀಡಿದ್ದು, ಪ್ರಯೋಗಗಳನ್ನು ಆರಂಭಿಸಿದೆ.
ವಿಶ್ವಕಪ್ಗೆ ಪ್ರಕಟಿಸಲಾಗ ತಂಡದಲ್ಲಿ ಶ್ರೇಯಸ್ ಅಯ್ಯರ್ಗೆ ಅವಕಾಶ ನೀಡಲಾಗಲಿಲ್ಲ. ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡಲಾಗಿದ್ದು, ನಂ.4 ಸ್ಥಾನ ಪಡೆದುಕೊಳ್ಳಲು ಶ್ರೇಯಸ್ ಪ್ರಯತ್ನಿಸಲಿದ್ದಾರೆ ಆದರೆ, ಅವರಿಗೆ ಶುಭಮನ್ ಗಿಲ್ ಪ್ರತಿಸ್ಪರ್ಧಿಯಾಗಿದ್ದಾರೆ. ಈ ಇಬ್ಬರೂ ಬ್ಯಾಟ್ಸ್ಮನ್ಗಳು ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇರುವ ಭಾರತ 'ಎ' ತಂಡದ ಪರ ರನ್ ಹೊಳೆಯನ್ನೇ ಹರಿಸಿದ್ದಾರೆ. ಆದರೆ, ಗಿಲ್ಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಲಾದ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.
ಇನ್ನು ಇದೇ ಸರಣಿಯಲ್ಲಿ ಶತಕ ಬಾರಿಸಿರುವ ಭಾರತ 'ಎ' ತಂಡದ ನಾಯಕ ಮನೀಶ್ ಪಾಂಡೆ ಕೂಡ ಆಯ್ಕೆ ದಾರರ ಗಮನ ಸೆಳೆದಿದ್ದಾರೆ. ಆದರೆ, ಮನೀಶ್ಗೆ 4ನೇ ಕ್ರಮಾಂಕದ ಬದಲಾಗಿ 5ನೇ ಮತ್ತು 6ನೇ ಕ್ರಮಾಂಕ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ.
"ಕೆ.ಎಲ್ ರಾಹುಲ್ಗೆ ಗಾಯದ ಸಮಸ್ಯೆ ಎದುರಾಗಿದ್ದ ಸಂದರ್ಭದಲ್ಲಿ ಗಿಲ್ಗೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೊಂದು ಅವಕಾಶಕ್ಕಾಗಿ ಅವರು ಕಾಯಬೇಕಿದೆ,'' ಎಂದು ಎಂ.ಎಸ್.ಕೆ ಪ್ರಸಾದ್ ಹೇಳಿದ್ದಾರೆ.