ಬೆಂಗಳೂರು, ಆಗಸ್ಟ್ 20: ಕೇರಳದಲ್ಲಿ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರ ಪರವಾಗಿ ಅನೇಕ ದೇಶಗಳು ಮಿಡಿದಿವೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಸೇರಿದಂತೆ ವಿವಿಧ ಕ್ರಿಕೆಟಿಗರು ಸಂತ್ರಸ್ತರಿಗೆ ನೆರವಾಗುವಂತೆ ಕೋರಿದ್ದಾರೆ.
ಈಗ ಮಾನವೀಯತೆಯ ಬೆಳಕು ಹಾಯಿಸಿದ ಕ್ರೀಡಾಪಟುಗಳ ಸಾಲಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡ ಸೇರಿದ್ದಾರೆ.
ಕೇರಳದ ಪ್ರವಾಹ ಸಂತ್ರಸ್ತರಿಗೆ ಮಿಡಿದ ಎಬಿ ಡಿವಿಲಿಯರ್ಸ್
ಕೇರಳದ ಜನತೆಗಾಗಿ ಪ್ರಾರ್ಥಿಸಿರುವ ಶಾಹಿದ್ ಅಫ್ರಿದಿ, ತಮ್ಮ ಪ್ರತಿಷ್ಠಾನದ ವತಿಯಿಂದ ನೆರವಿನ ಹಸ್ತ ಚಾಚಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಕೇರಳದ ಸ್ಥಿತಿಯ ಬಗ್ಗೆ ಟ್ವಿಟ್ಟರ್ನಲ್ಲಿ ಅತೀವ ಖೇದ ವ್ಯಕ್ತಪಡಿಸಿದ್ದಾರೆ. ಅಫ್ರಿದಿ, ಪ್ರವಾಹವು ಇಡೀ ರಾಜ್ಯವನ್ನು ಹಾಳುಗೆಡವಿರುವುದು ನೋವುಂಟು ಮಾಡಿದೆ ಎಂದಿದ್ದಾರೆ.
ಎಸ್ಎ ಫೌಂಡೇಷನ್ ನಿಮ್ಮ ನೋವನ್ನು ಹಂಚಿಕೊಳ್ಳಲಿದೆ ಮತ್ತು ನಮ್ಮ ಸಹೋದರರು ಹಾಗೂ ಸಹೋದರಿಯರ ಅಗತ್ಯಗಳ ಜತೆಗೆ ಇರಲಿದೆ. ನಿಮ್ಮ ಸಂಕಷ್ಟಗಳನ್ನು ದೇವರು ಪರಿಹರಿಸಲಿ ಮತ್ತು ಬೇಗನೆ ನಿಮಗೆ ನೆಮ್ಮದಿ ಸಿಗಲಿ ಎಂದು ಅಫ್ರಿದಿ ಅಶಿಸಿದ್ದಾರೆ.
Deeply saddened by the devastating floods in #Kerala #India. The @SAFoundationN shares your pain & stands with our brothers and sister in need. May Allah ease your sufferings & you find quick relief. #KeralaFloods #SAF #HopeNotOut for Humanity.
— Shahid Afridi (@SAfridiOfficial) 20 August 2018
ಮಾನವೀಯತೆಗಾಗಿ ಕೇರಳ ಪ್ರವಾಹ, ಹೋಪ್ ನಾಟ್ಔಟ್ ಎಂಬ ಹ್ಯಾಷ್ ಟ್ಯಾಗ್ ಬಳಿಸಿದ್ದಾರೆ. ಈ ಟ್ವೀಟ್ಗೆ ಅನೇಕ ಪಾಕಿಸ್ತಾನಿಯರು ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಸಹೋದರರಿಗೆ ನೆರವಾಗಲು ಬಯಸಿರುವುದಾಗಿ ಮತ್ತು ಒಳಿತಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಅದೇ ರೀತಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕೇರಳ ಪ್ರವಾಹಕ್ಕೆ ನೆರವಾಗುವಂತೆ ಕೋರಿ ಫೇಸ್ಬುಕ್ನಲ್ಲಿ ಪ್ರಕಟಿಸಿರುವ ವಿಡಿಯೋಕ್ಕೆ ಅಭಿಮಾನಿಗಳು ಸ್ಪಂದಿಸಿದ್ದಾರೆ.
ಯುವರಾಜ್ ಅವರ ಪೋಸ್ಟ್ಗೆ ಕರಾಚಿಯ ಯುವಕನೊಬ್ಬ ಸ್ಪಂದಿಸಿದ್ದು, ಪಾಕಿಸ್ತಾನದಿಂದ ಹೇಗೆ ದೇಣಿಗೆ ರವಾನಿಸಬಹುದು ಎಂದು ಕೇಳಿದ್ದಾರೆ.