
ಬೆಂಗಳೂರು, ಏಪ್ರಿಲ್ 11: ಕಾವೇರಿ ನಿರ್ವಹಣಾ ಮಂಡಳಿ ರಚನೆಯ ವಿವಾದ ಐಪಿಎಲ್ ಪಂದ್ಯಗಳ ಮೇಲೆ ಪರಿಣಾಮ ಬೀರಲಿದೆಯೇ?
ಮಂಗಳವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕೆಕೆರ್ ಮತ್ತು ಸಿಎಸ್ಕೆ ಪಂದ್ಯದ ವೇಳೆ ನಡೆದ ಶೂ ಎಸೆತ ಘಟನೆ, ಕ್ರಿಕೆಟ್ ಪ್ರಿಯರಲ್ಲಿ ಇಂತದ್ದೊಂದು ಕಳವಳ ಮೂಡಿಸಿದೆ.
ಮುಖ್ಯವಾಗಿ ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯಗಳಿಗೆ ಕಾರ್ಯಕರ್ತರು ಅಡ್ಡಿಪಡಿಸುವ ಭೀತಿ ಎದುರಾಗಿದೆ. ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ಮತ್ತು ಮೇ 5 ರಂದು ಚೆನ್ನೈನಲ್ಲಿ ಉಭಯ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ.
ಐಪಿಎಲ್ ವಿಶೇಷ ಪುಟ | ಚೆನ್ನೈ ವೇಳಾಪಟ್ಟಿ
ಕಾವೇರಿ ವಿವಾದ ಈ ವೇಳೆಗೆ ಮತ್ತಷ್ಟು ತೀವ್ರಗೊಂಡರೆ ಎರಡೂ ಕಡೆ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಈಗಾಗಲೇ ತಮಿಳು ಕಾರ್ಯಕರ್ತರು ಟೂರ್ನಿಗೆ ಅಡ್ಡಿಪಡಿಸುವ ಮತ್ತು ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿದ್ದಾರೆ.

ಆದರೆ, ಈ ಎರಡೂ ಪಂದ್ಯಗಳು ನಡೆಯುವುದಕ್ಕೆ ಸಮಯವಿರುವುದರಿಂದ ಅಷ್ಟರೊಳಗೆ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಭರವಸೆಯೂ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ತ್ವರಿತವಾಗಿ ಪರಿಹಾರಕ್ಕೆ ಮುಂದಾದರೆ, ವಿವಾದ ತಣ್ಣಗಾಗಬಹುದು. ಇಲ್ಲದಿದ್ದರೆ ಎಲ್ಲ ಪಂದ್ಯಗಳಿಗೂ ಇದೇ ರೀತಿಯ ಅಡ್ಡಿ ಎದುರಾಗಬಹುದು ಎಂಬುದು ಕ್ರಿಕೆಟ್ ಪ್ರಿಯರ ಆತಂಕವಾಗಿದೆ.
ಹರಾಜಾಯಿತು ಮಾನ
ಚೆನ್ನೈ ತಂಡ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಎಂಟನೆಯ ಓವರ್ನಲ್ಲಿ ಲಾಂಗ್ಆನ್ನಲ್ಲಿ ನಿಂತಿದ್ದ ರವೀಂದ್ರ ಜಡೇಜಾ ಅವರತ್ತ ಶೂ ಎಸೆಯಲಾಯಿತು. ಬಳಿಕ ಬೌಂಡರಿ ಗೆರೆ ಬಳಿ ನಿಂತಿದ್ದ ಫಾಫ್ ಡು ಪ್ಲೆಸಿಸ್ ಅವರ ಬಳಿಯೂ ಶೂ ಎಸೆಯಲಾಯಿತು.
ತಮಿಳರ್ ಎಂಬ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ತಮಿಳು ಸಂಘಟನೆಗಳ ಕಾರ್ಯಕರ್ತರು ಕ್ರೀಡಾಂಗಣದ ಸುತ್ತಲೂ ರಸ್ತೆ ತಡೆ ನಡೆಸಿದ್ದರಿಂದ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಘಟನೆಗಳಿಗೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇದು ನಾಚಿಕೆಗೇಡಿನ ಕೃತ್ಯ. ಇಡೀ ದೇಶದ ಮಾನವನ್ನು ಹರಾಜು ಹಾಕಲಾಗುತ್ತಿದೆ. ವಿದೇಶಿಯರ ಮುಂದೆ ಬೆತ್ತಲಾಗುತ್ತಿದ್ದೇವೆ. ಕ್ರೀಡೆಯೊಂದಿಗೆ ರಾಜಕೀಯ ಬೆರೆಸಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕಾವೇರಿ ನೀರಿಗೂ, ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ಗೂ ಎಲ್ಲಿಂದೆಲ್ಲಿಯ ಸಂಬಂಧ? ಇದರಿಂದ ಕಾವೇರಿ ವಿವಾದ ಬಗೆ ಹರಿಯುತ್ತದೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ?
ಆಫ್ರಿಕಾ ಆಟಗಾರನೊಬ್ಬನ ಮೇಲೆ ಶೂ ಎಸೆಯುವುದರಿಂದ ಎಲ್ಲವೂ ಸರಿಯಾಗುತ್ತದೆ ಮತ್ತು ತಮಿಳುನಾಡಿನ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತದೆ ಎಂದು ಟ್ವಿಟ್ಟಿಗರು ವ್ಯಂಗ್ಯವಾಡಿದ್ದಾರೆ.
ಆಫ್ರಿಕಾದಿಂದ ನದಿ ಹರಿಯುತ್ತದೆಯೇ?
ನಮಗೆ ಕಾವೇರಿ ಬೇಕು ಎಂದು ಕೂಗುತ್ತಾ ಫಾಫ್ ಡು ಪ್ಲೆಸಿಸ್ ಅವರತ್ತ ಶೂ ಎಸೆಯುತ್ತಾರೆ. ನದಿಯು ದಕ್ಷಿಣ ಆಫ್ರಿಕಾದ ಪ್ರಿಟೊರಿಯಾದ ಮೂಲಕ ಹರಿಬರುತ್ತದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅವಕಾಶ ಕಳೆದುಕೊಂಡ
ಮೈದಾನದತ್ತ ಶೂ ಎಸೆದ ವ್ಯಕ್ತಿ ತನ್ನನ್ನು ತಾನೇ ಒದ್ದುಕೊಳ್ಳುತ್ತಿರಬೇಕು. ಆತ ಒಂದು ಶೂ ಕಳೆದುಕೊಂಡ ಮತ್ತು ಒಂದು ಒಳ್ಳೆಯ ಪಂದ್ಯವನ್ನು ಕುಳಿತು ನೋಡುವ ಅವಕಾಶವನ್ನೂ ಕಳೆದುಕೊಂಡ ಎಂದು ದಾನಿಶ್ ಸೇಠ್ ಟ್ವೀಟ್ ಮಾಡಿದ್ದಾರೆ.