
ಕೋಲ್ಕತಾ, ಜನವರಿ 22: ಕರ್ನಾಟಕ ಹಾಗೂ ಪಂಜಾಬ್ ನಡುವಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯ ರೋಚಕ ಅಂತ್ಯ ಕಂಡಿದೆ. ಪಂದ್ಯ ಟೈ ಆಗಿ ನಂತರ ಸೂಪರ್ ಓವರ್ ನಲ್ಲಿ ಪಂಜಾಬ್ ಸೂಪರ್ ಗೆಲುವು ಸಾಧಿಸಿತು. ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರು ಪಂಜಾಬ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಭಾನುವಾರ (ಜನವರಿ 21) ದಂದು ನಡೆದ ಪಂದ್ಯ ಉಭಯ ತಂಡಗಳು 159ರನ್ ಗಳಿಸಿ ಪಂದ್ಯ ಟೈ ಆಯಿತು. ಕರ್ನಾಟಕ ಪರ ಕೆ ಗೌತಮ್ ಎಸೆದ ಸೂಪರ್ ಓವರ್ ನಲ್ಲಿ ಯುವರಾಜ್ ಸಿಂಗ್ ಬೌಂಡರಿ, ಮನ್ದೀಪ್ ಸಿಂಗ್ ಸಿಕ್ಸರ್ ಸೇರಿದಂತೆ ಪಂಜಾಬ್ 15ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕರ್ನಾಟಕ 11ರನ್ ಮಾತ್ರ ಗಳಿಸಿತು. ಸಿದ್ದಾರ್ಥ್ ಕೌಲ್ ಸೂಪರ್ ಓವರ್ ನಲ್ಲಿ ರನ್ ನಿಯಂತ್ರಿಸಿದರು.
ಇದಕ್ಕೂ ಮುನ್ನ ಯುವರಾಜ್ ಸಿಂಗ್ ಅವರು ಉತ್ತಮ ಫೀಲ್ಡಿಂಗ್ ಮೂಲಕ ಸ್ಟುವರ್ಟ್ ಬಿನ್ನಿ (2) ಹಾಗೂ ಸಿಎಂ ಗೌತಮ್ (36) ವಿಕೆಟ್ ಒಂದೇ ಓವರ್ ನಲ್ಲಿ ಬೀಳುವಂತೆ ಮಾಡಿದರು. ಆದರೆ, ಬೌಲಿಂಗ್ ನಲ್ಲಿ ಯುವಿ 17ರನ್ ತೆತ್ತರು, ಗೌತಮ್ 2 ಸಿಕ್ಸ್ ಹಾಗೂ ಒಂದು ಬೌಂಡರಿ ಬಾರಿಸಿದರು. ಅಂತಿಮವಾಗಿ ಗೌತಮ್ 36 ರನ್ (31 ಎಸೆತಗಳು) ಗಳಿಸಿದರು.
10ಓವರ್ ಗಳಲ್ಲಿ 62/3 ಗಳಿಸಿದ್ದ ಕರ್ನಾಟಕ 20 ಓವರ್ ಗಳಲ್ಲಿ 158/7 ಸ್ಕೋರ್ ಮಾಡಿತು. ಅನಿರುದ್ಧ್ ಜೋಶಿ 40ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಪಂಜಾಬ್ ಪರ ಬಲ್ತೇಜ್ ಸಿಂಗ್ 3/21, ಮನ್ ಪ್ರೀತ್ ಸಿಂಗ್ ಗೋನಿ 2/8 ಉತ್ತಮ ಪ್ರದರ್ಶನ ನೀಡಿದರು.
ನಂತರ ರನ್ ಚೇಸ್ ನಲ್ಲಿ ಮನ್ದೀಪ್ ಸಿಂಗ್ 45, ಮೂರನೇ ಕ್ರಮಾಂಕದಲ್ಲಿ ಬಂದ ಹರ್ಭಜನ್ ಸಿಂಗ್ 33 ರನ್ (19 ಎಸೆತಗಳು, 5 ಬೌಂಡರಿ, 1 ಸಿಕ್ಸರ್), ಯುವರಾಜ್ ಸಿಂಗ್ 29 ರನ್ (25 ಎಸೆತಗಳು), ಶ್ರೀನಾಥ್ ಅರವಿಂದ್ 4/32) 20 ಓವರ್ ಗಳಲ್ಲಿ 158/9 ಸ್ಕೋರ್ ಮಾಡಿತು.