ಮತ್ತೆ ವಿಂಡೀಸ್ ಪಾಲಿಗೆ ಟಿ20 ವಿಶ್ವಕಪ್
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಈ ಬಾರಿಯ ಟಿ20 ವಿಶ್ವಕಪ್ ಟ್ರೋಫಿಯನ್ನು ಕೂಡ ವೆಸ್ಟ್ ಇಂಡೀಸ್ ತಂಡವೇ ಗೆಲ್ಲಲಿದೆ. ಈ ಮೂಲಕ ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಡ್ಯಾರನ್ ಸಮಿ ಹೇಳಿದ್ದಾರೆ. ಇದರಲ್ಲಿ ನನಗೆ ಹೆಚ್ಚು ಯೋಚಿಸುವ ಅಗತ್ಯವೇ ಇಲ್ಲ ಎಂದು ಡ್ಯಾರನ್ ಸಮಿ ವಿವರಿಸಿದ್ದಾರೆ. ಇದಕ್ಕೆ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕಾರಣವನ್ನೂ ಕೂಡ ನೀಡಿದ್ದಾರೆ.
ತಂಡದ ಪ್ರದರ್ಶನ ನೋಡಿ ಅಭಿಪ್ರಾಯ
ಇನ್ನು ತನ್ನ ಈ ಅಭಿಪ್ರಾಯಕ್ಕೆ ಡ್ಯಾರೆನ್ ಸಮಿ ಕಾರಣವನ್ನು ನೀಡಿದ್ದಾರೆ. "ನಾನು ಈ ಮಾತು ನಿಮಗೆ ಪಕ್ಷಪಾತದಿಂದ ಕೂಡಿದ ಮಾತಿನಂತೆ ಅನಿಸಬಹುದು. ಆದರೆ ನೀವು ತಂಡದ ಪ್ರದರ್ಶನವನ್ನು ನೋಡಿ. ಕಳೆದ ಮೂರ್ನಾಲ್ಕು ಟೂರ್ನಮೆಂಟ್ಗಳಲ್ಲಿ ನಾವು ಫೈನಲ್ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅದರಲ್ಲಿ ಎರಡನ್ನು ನಾವು ಗೆದ್ದುಕೊಂಡಿದ್ದೇವೆ" ಎಂದಿದ್ದಾರೆ. ಐಸಿಸಿ ಡಿಜಿಟಲ್ ಶೋಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ಡ್ಯಾರೆನ್ ಸಮಿ ವ್ಯಕ್ತಪಡಿಸಿದರು.
ಬಲಿಷ್ಠ ಆಟಗಾರರ ತಂಡ ವೆಸ್ಟ್ ಇಂಡೀಸ್
"ನಮ್ಮ ತಂಡದ ಆಟಗಾರರು, ಅವರಲ್ಲಿರುವ ಸಾಮರ್ಥ್ಯ ಅಗಾಧವಾಗಿದೆ. ನಾಯಕ ಪೊಲಾರ್ಡ್ ತಂಡಕ್ಕೆ ಮರಳಿದ್ದಾರೆ. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಫಾಬಿಯನ್ ಅಲೆನ್, ಎವಿನ್ ಲಿವೀಸ್ ಹೀಗೆ ಎದುರಾಳಿಗಳ ಮೇಲೆ ಮುಗಿಬೀಳಬಲ್ಲ ಪ್ರತಿಭಾವಂತ ಆಟಗಾರರ ಪಟ್ಟಿಯೇ ಬೆಳೆಯುತ್ತಾ ಸಾಗುತ್ತದೆ ಎಂದಿದ್ದಾರೆ 37ರ ಹರೆಯದ ಡ್ಯಾರೆನ್ ಸಮಿ. ಇನ್ನು ಇದೇ ಸಂದರ್ಭದಲ್ಲಿ ಅವರು ಹಾರ್ಡ್ ಹಿಟ್ಟರ್ ಆಂಡ್ರೆ ರಸೆಲ್ ಈ ಬಾರಿಯ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರನಾಗಬಲ್ಲರು ಎಂದು ಊಹಿಸಿದ್ದಾರೆ.
ರನ್ಗಳಿಸಿದವರು ಟೂರ್ನಿ ಗೆಲ್ಲಿಸಲಾರರು
ಬ್ಯಾಟಿಂಗ್ನಲ್ಲಿ ಅಗ್ರ ಮೂರು ಕ್ರಮಾಂಕದಲ್ಲಿ ಇಳಿಯುವ ಆಟಗಾರರು ಹೆಚ್ಚಿನ ರನ್ಗಳಿಸುತ್ತಾರೆ. ವಿರಾಟ್ ಕೊಹ್ಲಿಯಂತಾ ಆಟಗಾರರನ್ನು ನೀವು ಪರಿಗಣಿಸಬಹುದು. ಆದರೆ ಅತಿ ಹೆಚ್ಚು ರನ್ಗಳಿಸುವ ಆಟಗಾರರ ತಂಡ ಟೂರ್ನಿಯನ್ನು ಗೆಲ್ಲಲಿದೆ ಎಂದು ಹೇಳಲು ಸಾಧ್ಯವಿಲ್ಲ. ನನಗೆ ಯಾರು ಸರಣಿ ಶ್ರೇಷ್ಠ ಆಟಗಾರನಾಗುತ್ತಾನೆ ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಮಾಡಬಲ್ಲ ಆಂಡ್ರೆ ರಸೆಲ್ ಅವರಂತಾ ಆಟಗಾರರು ಈ ಪ್ರಶಸ್ತಿಯನ್ನು ಗೆಲ್ಲಲಿದ್ದಾರೆ" ಎಂದು ಡ್ಯಾರೆನ್ ಸಮಿ ಭವಿಷ್ಯ ನುಡಿದಿದ್ದಾರೆ.