ಧೋನಿ ಮೆಂಟರ್ ಆದರೆ ನಿಮ್ಮ ಬೆಂಬಲವಿರುತ್ತಾ?; ಕೊಹ್ಲಿ, ರೋಹಿತ್ ಕೊಟ್ಟ ನೇರ ಉತ್ತರಗಳಿವು!

ಸದ್ಯ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿದ್ದು, ಸರಣಿಯಲ್ಲಿ ನಡೆದಿರುವ 4 ಪಂದ್ಯಗಳ ಪೈಕಿ ಈಗಾಗಲೇ 2 ಪಂದ್ಯಗಳಲ್ಲಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 2-1 ಅಂತರದ ಮುನ್ನಡೆಯನ್ನು ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಸರಣಿ ಕೊನೆಯ ಹಂತವನ್ನು ತಲುಪಿ ಕುತೂಹಲವನ್ನು ಹೆಚ್ಚಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆಯೇ ಇದೀಗ ಬುಧವಾರದಂದು ( ಸೆಪ್ಟೆಂಬರ್ 8 ) ಬಿಸಿಸಿಐ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟ ಮಾಡಿದ್ದು ಕ್ರೀಡಾ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ 2021ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಯಾವ ಆಟಗಾರರು ಆಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎಂಬ ಕಾತರತೆ ಎಲ್ಲರಲ್ಲಿಯೂ ಇತ್ತು. ಈ ಕಾತರತೆ ಮತ್ತು ಕುತೂಹಲಗಳಿಗೆಲ್ಲಾ ಬಿಸಿಸಿಐ ಬುಧವಾರದಂದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ಮೂಲಕ ಉತ್ತರವನ್ನು ನೀಡಿದೆ.
ಬಿಸಿಸಿಐ ಕೇವಲ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ್ದು ಮಾತ್ರವಲ್ಲದೇ, ಅದರ ಜೊತೆಗೆ ಎಂಎಸ್ ಧೋನಿಯವರನ್ನು ಟೀಮ್ ಇಂಡಿಯಾಗೆ ಮಾರ್ಗದರ್ಶಕನಾಗಿ ನೇಮಕ ಮಾಡುವುದರ ಮೂಲಕ ಇಡೀ ಕ್ರಿಕೆಟ್ ಜಗತ್ತಿಗೆ ದೊಡ್ಡ ಆಶ್ಚರ್ಯಕರ ಸುದ್ದಿಯನ್ನು ನೀಡಿತು. ಹೌದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ತಂಡವನ್ನು ಮಾರ್ಗದರ್ಶಕರಾಗಿ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿತು.
ಧೋನಿಯನ್ನು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಮಾರ್ಗದರ್ಶಕನನ್ನಾಗಿ ಆಯ್ಕೆ ಮಾಡಲು ಬೇಕಾದ ಎಲ್ಲ ಕಸರತ್ತುಗಳನ್ನು ಮಾಡಿ ಯಶಸ್ವಿಯಾಗಿರುವುದು ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ. ಇನ್ನು ಎಂಎಸ್ ಧೋನಿಯನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಮಾರ್ಗದರ್ಶಕರಾಗಿ ಆಯ್ಕೆಮಾಡಲು ಜಯ್ ಶಾ ತಂಡದ ಪ್ರಮುಖ ವ್ಯಕ್ತಿಗಳ ಬಳಿ ಹೋಗಿ ಅಭಿಪ್ರಾಯಗಳನ್ನು ಕೇಳಿದಾಗ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಿದರು ಎಂಬ ಮಾಹಿತಿ ಈ ಕೆಳಕಂಡಂತಿದೆ ನೋಡಿ.

ನಾಯಕ ಮತ್ತು ಉಪನಾಯಕನ ಬಳಿ ಚರ್ಚೆ ನಡೆಸಿದ್ದ ಜಯ್ ಶಾ
ಎಂ ಎಸ್ ಧೋನಿಯನ್ನು ದುಬೈನಲ್ಲಿ ಭೇಟಿಯಾದ ಜಯ್ ಶಾ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಲು ಇಚ್ಛಿಸುತ್ತೀರಾ ಎಂದು ಕೇಳಿದಾಗ ಧೋನಿ ಜೈ ಶಾ ಮನವಿಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಇದಾದ ಕೂಡಲೇ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಬಳಿ ಚರ್ಚೆಯನ್ನು ನಡೆಸಿದ ಜಯ್ ಶಾ ಎಂಎಸ್ ಧೋನಿಯವರನ್ನು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶಕನನ್ನಾಗಿ ನೇಮಿಸುವ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ ಕೂಡಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಎರಡನೇ ಯೋಚನೆಯನ್ನೇ ಮಾಡದೇ ಒಪ್ಪಿಗೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಬಳಿಯೂ ಜಯ್ ಶಾ ಚರ್ಚೆ
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಜತೆ ಎಂ ಎಸ್ ಧೋನಿಯನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಮಾರ್ಗದರ್ಶಕನನ್ನಾಗಿ ನೇಮಿಸುವ ಕುರಿತು ಚರ್ಚಿಸಿ ಒಪ್ಪಿಗೆಯನ್ನು ಪಡೆದ ಜಯ್ ಶಾ ನಂತರ ಭಾರತದ ಹೆಡ್ ಕೋಚ್ ರವಿಶಾಸ್ತ್ರಿ ಬಳಿ ಕೂಡ ಈ ವಿಷಯದ ಕುರಿತಾಗಿ ಚರ್ಚೆಯನ್ನು ನಡೆಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ರೀತಿಯೇ ರವಿಶಾಸ್ತ್ರಿ ಕೂಡ ಜಯ್ ಶಾ ಅಭಿಪ್ರಾಯವನ್ನು ಕೇಳಿದ ಕೂಡಲೇ ಒಪ್ಪಿಗೆ ಸೂಚಿಸಿದ್ದಾರೆ.
ಹೀಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಹೆಡ್ ಕೋಚ್ ರವಿ ಶಾಸ್ತ್ರಿ ಬಳಿ ಎಂಎಸ್ ಧೋನಿಯನ್ನು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಮೆಂಟರ್ ಆಗಿ ನೇಮಿಸುವುದರ ಕುರಿತು ಸಕಾರಾತ್ಮಕ ಉತ್ತರಗಳನ್ನು ಪಡೆದ ಜಯ್ ಶಾ ಕೂಡಲೇ ಹೊರಜಗತ್ತಿಗೆ ಆ ವಿಷಯವನ್ನು ತಿಳಿಸಿದ್ದಾರೆ. ನಂತರ ಯಾರೂ ಕೂಡ ಊಹಿಸಲಾಗದಂತಹ ಸುದ್ದಿಯನ್ನು ತಿಳಿದ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಎಂಎಸ್ ಧೋನಿಯನ್ನು ಟೀಮ್ ಇಂಡಿಯಾ ಪಡೆಯಲ್ಲಿ ನೋಡಲು ಉತ್ಸುಕರಾಗಿದ್ದಾರೆ.

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾ ತಂಡ
ಬಿಸಿಸಿಐ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications