ಟಿ20 ವಿಶ್ವಕಪ್ಗಾಗಿ ಭಾರತ ತಂಡ ಎಬಿಡಿಯನ್ನು ನೇಮಿಸಬೇಕಿತ್ತು: ಮಾಜಿ ಕ್ರಿಕೆಟಿಗ ಅತುಲ್ ವಾಸನ್

2022ರ ಐಸಿಸಿ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಭಾರತ ತಂಡದ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ಕಿಡಿಕಾರುತ್ತಿದ್ದಾರೆ. ಏಕೆಂದರೆ, ಆ ಪಂದ್ಯದಲ್ಲಿ ಭಾರತ ಹೋರಾಟ ನೀಡದೆ ಹೀನಾಯವಾಗಿ ಪಂದ್ಯವನ್ನು ಬಿಟ್ಟುಕೊಟ್ಟಿತು.
ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದ್ದ ಭಾರತದ ಅವಮಾನಕರ ಸೋಲು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯವಾಗಿ ಸೋತಿರುವುದು ನಂ.1 ಟಿ20 ತಂಡಕ್ಕೆ ತೀವ್ರ ಮುಜುಗರವನ್ನಂತು ತರಿಸಿದೆ.
ರೋಹಿತ್ ಶರ್ಮಾ ಆದಿಯಾಗಿ ಕೆಲವು ಬ್ಯಾಟ್ಸ್ಮನ್ಗಳ ವೈಫಲ್ಯ ಮತ್ತು ಕಳಪೆ ಬೌಲಿಂಗ್ ಪ್ರದರ್ಶನ ಭಾರತ ತಂಡವನ್ನು ಟೂರ್ನಿಯಿಂದ ಹೊರಹಾಕಬೇಕಾಯಿತು. 15 ವರ್ಷಗಳ ನಂತರ ಭಾರತದ ಟಿ20 ವಿಶ್ವಕಪ್ ಗೆಲ್ಲುವ ಕನಸಿಗೆ ಕೊಳ್ಳಿ ಇಟ್ಟಿತು.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್, ಭಾರತವು ಟಿ20 ವಿಶ್ವಕಪ್ಗಾಗಿ ಪರಿಣಿತರನ್ನು ನೇಮಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಟಿ20 ಕ್ರಿಕೆಟ್ನಲ್ಲಿ ಪರಿಣಿತ ಆಟಗಾರರನ್ನು ಕರೆತರಬೇಕಾಗಿದೆ
ಗುರುವಾರ, ನವೆಂಬರ್ 10ರಂದು ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಸೋಲಿನ ನಂತರ ಭಾರತ ತಂಡ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿತು. ಹೀಗಾಗಿ ಭಾರತವು ಟಿ20 ಕ್ರಿಕೆಟ್ನಲ್ಲಿ ಪರಿಣಿತ ಆಟಗಾರರನ್ನು ಕರೆತರಬೇಕಾಗಿದೆ ಎಂದು ಮಾಜಿ ಆಟಗಾರ ಅತುಲ್ ವಾಸನ್ ಹೇಳಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅತುಲ್ ವಾಸನ್, ಸ್ಲ್ಯಾಮ್-ಬ್ಯಾಂಗ್ ಮಾದರಿಯಲ್ಲಿ ಆಟಗಾರರಿಗೆ ಮಾರ್ಗದರ್ಶನ ನೀಡಲು ವಿಶೇಷ ಕೋಚಿಂಗ್ ಸಿಬ್ಬಂದಿಯ ಅಗತ್ಯವಿದೆ ಎಂದು ಸಲಹೆ ನೀಡಿದರು.

ಎಬಿಡಿ ಭಾರತ ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು
"ನಾವು ಟಿ20 ಮತ್ತು ಟೆಸ್ಟ್ ಕ್ರಿಕೆಟ್ಗೆ ಒಂದೇ ಕೋಚಿಂಗ್ ಸಿಬ್ಬಂದಿಯನ್ನು ಹೊಂದಲು ಸಾಧ್ಯವಿಲ್ಲ. ಟಿ20 ಮಾದರಿಗೆ ಪರಿಣಿತ ಆಟಗಾರರನ್ನು ನೇಮಿಸಿಕೊಳ್ಳಬೇಕಿದೆ. ನಾವು ಟಿ20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಅವರನ್ನು ಏಕೆ ಮೆಂಟರ್ ಆಗಿ ನೇಮಿಸಿಕೊಳ್ಳಲಿಲ್ಲ? ಎಂದು ಪ್ರಶ್ನಿಸಿದ್ದು, ಎಬಿ ಡಿವಿಲಿಯರ್ಸ್ ಭಾರತ ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು ಮತ್ತು ಶಾಟ್ಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಅವರು ಆಟಗಾರರಿಗೆ ಉಪಯುಕ್ತ ಮಾಹಿತಿ ಕೊಡುತ್ತಿದ್ದರು," ಎಂದು ಅತುಲ್ ವಾಸನ್ ತಿಳಿಸಿದರು.
"ಈ ಟಿ20 ಮಾದರಿಗೆ ಹೊಸ ರೀತಿಯ ಆಲೋಚನೆಯ ಅಗತ್ಯವಿದೆ ಎಂದು ಮತ್ತೆ ಮತ್ತೆ ಸಾಬೀತುಪಡಿಸಿದೆ. 2007ರಲ್ಲಿ ಭಾರತ ತಂಡದಲ್ಲಿ ಸ್ಟಾರ್ಗಳು ಇರಲಿಲ್ಲ ಮತ್ತು ತಂಡವು ಯುವ ಆಟಗಾರರನ್ನು ಒಳಗೊಂಡಿತ್ತು. ಅವರು ಮುಕ್ತವಾಗಿ ಆಡಿದರು, ಕೊನೆಗೆ ಚೊಚ್ಚಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದರು," ಎಂದು ಅತುಲ್ ವಾಸನ್ ವಿವರಿಸಿದರು.

ಐಪಿಎಲ್ ಯಶಸ್ಸಿನ ಆಧಾರದ ಮೇಲೆ ಆಟಗಾರರ ಆಯ್ಕೆಗೆ ಟೀಕೆ
ಐಪಿಎಲ್ನಲ್ಲಿನ ಯಶಸ್ಸಿನ ಆಧಾರದ ಮೇಲೆ ಆಟಗಾರರ ಆಯ್ಕೆಯನ್ನು ಅತುಲ್ ವಾಸನ್ ಟೀಕಿಸಿದ್ದು, ಒತ್ತಡದ ಸಂದರ್ಭಗಳಲ್ಲಿ ಈಗಿನ ಆಟಗಾರರು ನಿರುತ್ತರರಾಗಿದ್ದಾರೆ ಎಂದು ಹೇಳಿದರು.
"ಐಪಿಎಲ್ನ ಪರಿಣತಿಯು ವಿಶ್ವಕಪ್ ಯಶಸ್ಸಿಗೆ ಕಾರಣವಾಗುತ್ತದೆ ಎಂದು ನಾವು ತಪ್ಪಾಗಿ ಭಾವಿಸಿದ್ದೇವೆ. ಭಾರತವು ಇತ್ತೀಚೆಗೆ ಐಸಿಸಿ ವೇದಿಕೆಯ ಪಂದ್ಯಗಳನ್ನು ಸುಲಭವಾಗಿ ಕೈಚೆಲ್ಲುತ್ತಿದೆ," ಎಂದು ಅತುಲ್ ವಾಸನ್ ಅಭಿಪ್ರಾಯಪಟ್ಟರು.
"ಭಾರತ ತಂಡದಲ್ಲಿ ಎಂಟು ಆಟಗಾರರು ಟೆಸ್ಟ್ ಮಾದರಿಯಲ್ಲಿ ಆಡುತ್ತಿದ್ದಾರೆ, ಟಿ20 ಪಂದ್ಯಗಳಲ್ಲಿಯೂ ಅವರೇ ಭಾಗವಹಿಸುತ್ತಿದ್ದಾರೆ. ನಾವು ಟಿ20 ಪಂದ್ಯಗಳಿಗಾಗಿ ಬೇರೆ ಆಟಗಾರರನ್ನು ಹುಡುಕಲು ಸಾಧ್ಯವಿಲ್ಲವೇಕೆ? ಎಲ್ಲ ಮಾದರಿಗೂ ಅದೇ ಆಟಗಾರರನ್ನು ಆಡಿಸಲು ಸಾಧ್ಯವಿಲ್ಲ. ಕೆಲವು ದೊಡ್ಡ ಹೆಸರುಗಳು ಎಂಬ ಕಾರಣಕ್ಕಾಗಿ ಆಯ್ಕೆಗಾರರು ಅವರನ್ನು ಆಡಿಸುತ್ತಿದ್ದಾರೆ. ಭಾರತ ತಂಡದಲ್ಲಿ ಇದೀಗ ಬದಲಾವಣೆಯ ಸಮಯ ಬಂದಿದೆ, ತಂಡವನ್ನು ಮರುಹೊಂದಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ವಾಸನ್ ತಿಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಚೋಕರ್ಗಳಾಗಿದ್ದೇವೆ
"ನಾಯಕ ರೋಹಿತ್ ಶರ್ಮಾ ವಯಸ್ಸಿನ ಕಾರಣದಿಂದ ಅವರು ಜಡವಾಗಿ ಕಾಣುತ್ತಾರೆ. ಆದರೆ ಸ್ಟಾರ್ಡಮ್ ಕಾರಣದಿಂದ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ನಾವು ಈಗಿನಿಂದಲೇ ಮುಂದಿನ ವಿಶ್ವಕಪ್ಗೆ ಯೋಜನೆ ಮಾಡಬೇಕಾದ ಸಮಯ ಬಂದಿದೆ. ನಾವು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಚೋಕರ್ಗಳಾಗಿ ಮಾರ್ಪಟ್ಟಿದ್ದೇವೆ," ಎಂದು ಟೀಕಿಸಿದರು.
"ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಲು ತಂಡವು ತನ್ನ ಮನಸ್ಥಿತಿ ಮತ್ತು ವಿಧಾನವನ್ನು ಬದಲಾಯಿಸಬೇಕಾಗಿದೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications