
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ಎರಡು ತಂಡಗಳು ಕೂಡ ದಂಡಕ್ಕೆ ಗುರಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬುಧವಾರ ದಂಡದ ಪ್ರಮಾಣವನ್ನು ಘೋಷಿಸಿದ್ದು ಪಂದ್ಯದ ಸಂಭಾವನೆಯ 40 ಶೇಕಡಾ ದಂಡವನ್ನು ಎರಡು ತಂಡಗಳ ಆಟಗಾರರು ಕೂಡ ಪಾವತಿಸಬೇಕಿದೆ.
ಐಸಿಸಿ ಮ್ಯಾಚ್ ರೆಫ್ರೀ ಕ್ರಿಸ್ ಬ್ರಾಡ್ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ನಿಗದಿತ ಅವಧಿಯಲ್ಲಿ ಎರಡು ಓವರ್ಗಳ ಕಡಿಮೆ ಬೌಲಿಂಗ್ ನಡೆಸಿದ್ದವು. ಹೀಗಾಗಿ ದಂಡವನ್ನು ವಿಧಿಸಿದ್ದಾರೆ. ಕ್ರಿಸ್ ಬ್ರಾಡ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್ ಆಗಿದ್ದು ಸದ್ಯ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಸ್ಟುವರ್ಟ್ ಬ್ರಾಡ್ ಅವರ ತಂದೆ.
ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಸರಣಿಯ ಆರಂಭದ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಐದನೇ ದಿನದಾಟದ ಆರಂಭಕ್ಕೂ ಅವಕಾಶ ನೀಡದೆ ಮಳೆ ಸುರಿದ ಪರಿಣಾಮವಾಗಿ ಪಂದ್ಯವನ್ನು ಅನಿವಾರ್ಯವಾಗಿ ಡ್ರಾ ಎಂದು ಘೋಷಿಸಲಾಗಿತ್ತು. ಈ ಎರಣಿಯ ಎರಡನೇ ಪಂದ್ಯ ಗುರುವಾರ ಲಾರ್ಡ್ಸ್ ಅಂಗಳದಲ್ಲಿ ಆರಂಭವಾಗಲಿದೆ.
ಐಸಿಸಿ ನಿಯಮದ ಪ್ರಕಾರ ನಿಗದಿತ ಅವಧಿಯಲ್ಲಿ ನಿಗದಿ ಪಡಿಸಿದಷ್ಟು ಓವರ್ಗಳ ಬೌಲಿಂಗ್ ಮಾಡುವಲ್ಲಿ ತಂಡಗಳು ವಿಫಲವಾದರೆ ಪ್ರತಿ ಓವರ್ಗೆ ಪಂದ್ಯದ ಸಂಭಾವನೆಯ 20 ಶೇಕಡಾದಷ್ಟು ದಂಡವನ್ನು ವಿಧಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಒಂದು ಚಾಂಪಿಯನ್ಶಿಪ್ ಅಂಕವನ್ನು ಕೂಡ ಕಡಿತಗೊಳಿಸಲಾಗುತ್ತದೆ. ಹೀಗಾಗಿ 40 ಶೇಕಡಾ ದಂಡದ ಜೊತೆಗೆ ಭಾರತ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಕೂಡ ತಲಾ 2 ಅಂಕಗಳನ್ನು ಕಳೆದುಕೊಂಡಿವೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ತಪ್ಪನ್ನು ಒಪ್ಪಿಕೊಂಡಿರುವುದರಿಂದಾಗಿ ವಿಚಾರಣೆಯ ಅಗತ್ಯಗಳು ಇಲ್ಲವಾಗಿದೆ. ಹೀಗಾಗಿ ದಂಡವನ್ನು ಬುಧವಾರ ವಿಧಿಸಲಾಗಿದೆ.
ನಾಟಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ ಕೇವಲ 157 ರನ್ಗಳ ಅವಶ್ಯಕತೆಯಿತ್ತು. 9 ವಿಕೆಟ್ಗಳನ್ನು ಉಳಿಸಿಕೊಂಡಿದ್ದ ಭಾರತ ಪಂದ್ಯದಲ್ಲಿ ಗೆಲುವು ಸಾಧಿಸುವತ್ತ ದಾಪುಗಾಲಿಟ್ಟಿತ್ತು. ಆದರೆ ಅಂತಿಮ ದಿನ ಮಳೆ ಪಂದ್ಯಕ್ಕೆ ಸ್ಲಲ್ಪವೂ ಅವಕಾಶವನ್ನು ಮಾಡಿಕೊಡಲಿಲ್ಲ. ಹೀಗಾಗಿ ಅಂತಿಮ ದಿನ ಒಂದು ಎಸೆತ ಕಾಣದೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿತ್ತು.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸರ್ವಾಂಗೀಣ ಪ್ರದರ್ಶನ ನೀಡಲು ಯಶಸ್ವಿಯಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನು 183 ರನ್ಗಳಿಗೆ ಮುನ್ನವೇ ಆಲೌಟ್ ಮಾಡಲು ಭಾರತ ಯಶಸ್ವಿಯಾಗಿತ್ತು. ಭಾರತ ಎರಡನೇ ಇನ್ನಿಂಗ್ಸ್ನಲ್ಲಿಯೂ ಬೌಲಿಂಗ್ ದಾಳಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಕಠಿಣ ಸವಾಲೊಡ್ಡಿತ್ತು. ನಾಯಕ ಜೋ ರೂಟ್ ಹೊರತು ಪಡಿಸಿದರೆ ಉಳಿದ ಎಲ್ಲಾ ಆಟಗಾರರು ಕೂಡ ಭಾರತೀಯ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ಶರಣಾಗಿದ್ದರು.
ಇನ್ನು ಈ ಸೆಣೆಸಾಟದಲ್ಲಿ ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ತಮ್ಮ ಹಳೆಯ ಮೊನಚನ್ನು ಕಂಡುಕೊಳ್ಳಲು ಸಾಧ್ಯವಾಗಿರುವುದು ಭಾರತದ ಪಾಲಿಗೆ ಖುಷಿಯ ಸಂಗತಿಯಾಗಿದೆ. ಟೀಮ್ ಇಂಡಿಯಾದ ವೇಗಿ ಬೂಮ್ರಾ ಇಂಗ್ಲೆಂಡ್ ವಿರುದ್ಧದ ಎರಡು ಇನ್ನಿಂಗ್ಸ್ಗಳಲ್ಲಿ ಒಟ್ಟು 9 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿದ್ದ ಬೂಮ್ರಾ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಶಮಿ, ಸಿರಾಜ್ ಠಾಕೂರ್ ಕೂಡ ಬೌಲಿಂಗ್ನಲ್ಲಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಸರಣಿಯ ಎರಡನೇ ಟೆಸ್ಟ್ ಪಂದ್ಯ ನಡೆಯುವ ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಾರ್ಡ್ಸ್ ಅಂಗಳದಲ್ಲಿ ಈವರೆಗೆ 140 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 50 ಪಂದ್ಯಗಳಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ತಂಡಗಳು ಗೆದ್ದುಕೊಂಡಿದೆ. ಎರಡನೇ ಬ್ಯಾಟಿಂಗ್ ನಡೆಸಿದ ತಂಡಗಳು ಕೂಡ ಉತ್ತಮ ಪ್ರಮಾಣದಲ್ಲಿ ಗೆಲುವು ಸಾಧಿಸಿದರೂ ಮೊದಲು ಬ್ಯಾಟಿಂಗ್ಗೆ ಗೆಲುವು ಸಾಧಿಸಿದ ಪ್ರಮಾಣಕ್ಕೆ ಹೋಲಿಸಿದರೆ ಇದರ ಅಂಕಿಅಂಶ ಕಡಿಮೆಯಿದೆ. ಅಂದರೆ 39 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ನಡೆಸಿದ ತಂಡ ಗೆದ್ದಿದೆ.