
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಂ ತಾನು ಯಾಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಲು ಸದ್ಯಕ್ಕೆ ಬಯಸುವುದಿಲ್ಲ ಎಂಬುದನ್ನು ವಿವರಿಸಿದ್ದಾರೆ. ಇದಕ್ಕೆ ಮಾಜಿ ಕ್ರಿಕೆಟಿಗ ನೀಡಿರುವ ಕಾರಣವೂ ಕುತೂಹಲಕಾರಿಯಾಗಿದೆ. ತಂಡದ ವೈಫಲ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬರುವ ನಿಂದನೆಗಳನ್ನು ಸಹಿಸಲು ತನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ ವಾಸಿಮ್ ಅಕ್ರಂ.
"ಯಾರಿಂದಾದರೂ ಅನುಚಿತ ವರ್ತನೆ ಕಂಡು ಬಂದರೆ ಅದನ್ನು ಸಹಿಸುವುದು ನನ್ನಿಂದ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಎಷ್ಟು ಕೆಟ್ಟದಾಗಿ ವರ್ತಿಸುತ್ತಾರೆ, ತಂಡ ಉತ್ತಮ ಪ್ರದರ್ಶನ ನೀಡದಿದ್ದಾಗ ಎಷ್ಟು ಕೆಟ್ಟದಾಗಿ ಕೋಚ್ ಹಾಗೂ ಹಿರಿಯ ಆಟಗಾರರನ್ನು ನಿಂದಿಸುತ್ತಾರೆ ಎಂಬುದನ್ನು ನಾನು ಕಂಡಿದ್ದೇನೆ. ಹೀಗಾಗಿ ನಾನು ಮೂರ್ಖನಲ್ಲ. ನನಗೆ ಅಷ್ಟು ತಾಳ್ಮೆಯಿದೆ ಎನಿಸುತ್ತಿಲ್ಲ" ಎಮದು ಮಾಜಿ ಪಾಕಿಸ್ತಾನ ತಮಡದ ನಾಯಕ ವಾಸಿಮ್ ಅಕ್ರಂ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಮೇಲೆ ಹೊಂದಿರುವ ಪ್ರೀತಿ ಹಾಗೂ ಬದ್ಧತೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಕೆಟ್ಟ ಭಾಷೆ, ನಿಂದನೆಗಳು ಮಾತ್ರ ಅರ್ಥವಾಗುತ್ತಿಲ್ಲ" ಎಂದಿದ್ದಾರೆ. ವಾಸಿಮ್ ಅಕ್ರಂ ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಎಡಗೈ ವೇಗದ ಬೌಲರ್ ವಾಸಿಮ್ ಅಕ್ರಂ ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ವರ್ತನೆಯ ಬಗ್ಗೆ ಮತ್ತಷ್ಟು ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಗಳು ಆಟಗಾರರಿಗೆ ಮಾರ್ಗದರ್ಶನ ನೀಡಬಹುದು, ಅವರಿಗೆ ಯೋಜನೆಗಳ ಬಗ್ಗೆ ವಿವರಿಸಬಹುದು. ಆದರೆ ಅಂತಿಮವಾಗಿ ಆಟಗಾರರೇ ಮೈದಾನದಲ್ಲಿ ಪ್ರದರ್ಶನವನ್ನು ನೀಡಬೇಕಾಗುತ್ತದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ವಾಸಿಮ್ ಅಕ್ರಂ.
"ಕೆಲ ಸಂದರ್ಭಗಳಲ್ಲಿ ನೀಡು ಉತ್ತಮವಾಗಿ ಆಡಬಹುದು. ಕೆಲ ಸಂದರ್ಭಗಳಲ್ಲಿ ಸೋಲಬಹುದು. ಆದರೆ ಬೇರೆ ಯಾವುದೇ ದೇಶದಲ್ಲಾದರೂ ಈ ರೀತಿಯ ವಿಪರೀತ ಪ್ರತಿಕ್ರಿಯೆ ಅಥವಾ ಕೆಟ್ಟ ನಡವಳಿಕೆಯನ್ನು ನಾವು ಕಾಣುತ್ತೇವಾ? ರವಿ ಶಾಸ್ತ್ರಿ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಕೆಟ್ಟದಾಗಿ ಬಿಂಬಿತವಾಗಿರುವುದನ್ನು ನೀವು ನೋಡಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ಜನರ ವರ್ತನೆ ನೋಡಿ ನನಗೆ ನಿಜಕ್ಕೂ ಭಯವಾಗುತ್ತಿದೆ" ಎಂದಿದ್ದಾರೆ ವಾಸಿಮ್ ಅಕ್ರಂ.
ಹಾಗಂತ ತಾನು ಪಾಕಿಸ್ತಾನದ ಆಟಗಾರರಿಂದ ಸಂಪೂರ್ಣವಾಗಿ ಅಂತರವನ್ನು ಕಾಯ್ದುಕೊಳ್ಳುವುದಿಲ್ಲ ಎಂದು ಕೂಡ ಅಕ್ರಂ ಹೇಳಿದ್ದಾರೆ. "ನಾನು ಹೋಗೆ ಹೇಳುತ್ತಿದ್ದೇನೆಂದರೆ ನಾನು ಆಟಗಾರರಿಂದ ಸಂಒಪೂರ್ಣವಾಗಿ ಅಂತರವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಅರ್ಥವಲ್ಲ. ಅವರಿಗೆ ಯಾವಾಗ ನನ್ನ ಸಹಾಯದ ಅವಶ್ಯಕತೆಯಿದೆಯೋ ನನ್ನನ್ನು ಸಂಪರ್ಕಿಸಬಹುದು. ನನ್ನಿಂದ ಸಹಾಯವನ್ನು ಪಡೆಯಬಹುದು. ಪಾಕಿಸ್ತಾನ ಕ್ರಿಕೆಟ್ಗೆ ಕೊಡುಗೆ ನೀಡಲು ನಾನು ಯಾವಾಗಲೂ ಇಷ್ಟಪಡುತ್ತೇನೆ" ಎಂದಿದ್ದಾರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಭಾರತ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು ತಮ್ಮ ಮೊದಲ ಪಂದ್ಯದಲ್ಲಿಯೇ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಈ ಪಂದ್ಯವನ್ನು ನೋಡಲು ಕಾತರಿಸುತ್ತಿದ್ದಾರೆ.