ಪುನೀತ್ ಸಾವಿಗೆ ಕ್ರಿಕೆಟಿಗರ ಸಂತಾಪ: ಅಕ್ಟೋಬರ್ 29ರ ಕ್ರಿಕೆಟ್ ಜಗತ್ತಿನ ಸುದ್ದಿ

ಅಕ್ಟೋಬರ್ 29ರ ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ಜರುಗಿದ್ದು ಒಂದೆಡೆ ಕನ್ನಡ ಚಲನಚಿತ್ರರಂಗದ ಪ್ರಮುಖ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಲವಾರು ಖ್ಯಾತ ಕ್ರಿಕೆಟಿಗರು ಸಂತಾಪ ಸೂಚಿಸಿದ್ದು, ಮತ್ತೊಂದೆಡೆ ಟಿ 20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿದೆ. ಹೀಗೆ ಅಕ್ಟೋಬರ್ 29ರ ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಕೆಲ ಪ್ರಮುಖ ಘಟನೆಗಳ ಕಿರುನೋಟ ಈ ಕೆಳಕಂಡಂತಿದೆ.
* ಗಾಯದ ಸಮಸ್ಯೆಗೆ ಒಳಗಾಗಿ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಾ, ಬೌಲಿಂಗ್ ಕೂಡ ಮಾಡಲಾಗದೇ ಇದ್ದ ಹಾರ್ದಿಕ್ ಪಾಂಡ್ಯ ಕಳೆದ ಬುಧವಾರದಂದು ಅಭ್ಯಾಸದ ವೇಳೆ 15 ನಿಮಿಷಗಳ ಕಾಲ ಬೌಲಿಂಗ್ ಅಭ್ಯಾಸವನ್ನು ನಡೆಸಿದ್ದರು. ಹೀಗೆ ಮುಂಬರುವ ಭಾನುವಾರದಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲು ಹಾರ್ದಿಕ್ ಪಾಂಡ್ಯ ಬೌಲಿಂಗ್ ಅಭ್ಯಾಸ ನಡೆಸಿದ್ದು ಇದೀಗ ಅದಕ್ಕೂ ಮುನ್ನ ಫಿಟ್ನೆಸ್ ಪರೀಕ್ಷೆಯೊಂದನ್ನು ಹಾರ್ದಿಕ್ ಪಾಂಡ್ಯ ಎದುರಿಸಲಿದ್ದಾರೆ. ಹೌದು, ಇಂದು ( ಅಕ್ಟೋಬರ್ 29 ) ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಯನ್ನು ಎದುರಿಸಲಿದ್ದು ಇದರಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೆಎಲ್ ರಾಹುಲ್ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹಬ್ಬಿತ್ತು. ಆದರೆ ಇದೀಗ ಕೆಎಲ್ ರಾಹುಲ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಖಾತೆಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ಐಪಿಎಲ್ ಫ್ರಾಂಚೈಸಿ ಖಾತೆಯನ್ನೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನುಸರಿಸುತ್ತಿಲ್ಲ. ಆದರೆ ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖಾತೆಯನ್ನು ಕೆಎಲ್ ರಾಹುಲ್ ಅನುಸರಿಸಲು ಆರಂಭಿಸಿರುವುದು ಮುಂದಿನ ಆವೃತ್ತಿಯಲ್ಲಿ ಕೆ ಎಲ್ ರಾಹುಲ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲಿದ್ದಾರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
* ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 23ನೇ ಪಂದ್ಯದಲ್ಲಿ ಇಂದು ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಡಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅತ್ತ ಟಾಸ್ ಸೋತ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಹೀಗೆ ಬಾಂಗ್ಲಾದೇಶದ ಉತ್ತಮ ಬೌಲಿಂಗ್ ದಾಳಿ ಎದುರು ವೆಸ್ಟ್ ಇಂಡೀಸ್ 143 ರನ್ಗಳ ಸಾಧಾರಣ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ಬಾಂಗ್ಲಾದೇಶ ವಿಫಲವಾಗಿದ್ದು ಅಂತಿಮವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಈ ಮೂಲಕ ವೆಸ್ಟ್ ಇಂಡೀಸ್ ಬಾಂಗ್ಲಾದೇಶದ ವಿರುದ್ಧ 3 ರನ್ಗಳ ರೋಚಕ ಗೆಲುವನ್ನು ದಾಖಲಿಸಿದೆ. ಇದು ವೆಸ್ಟ್ ಇಂಡೀಸ್ ತಂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ದಾಖಲಿಸಿರುವ ಚೊಚ್ಚಲ ಗೆಲುವಾಗಿದೆ. ಅತ್ತ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿರುವ ಬಾಂಗ್ಲಾದೇಶ ಸೆಮಿಫೈನಲ್ಸ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ.
* ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರತಿಭಾನ್ವಿತ ನಟನ ಅಗಲಿಕೆ ಕನ್ನಡ ಚಿತ್ರ ಪ್ರೇಮಿಗಳಿಗೆ ಮಾತ್ರವಲ್ಲ ಇಡೀ ದೇಶದ ಸಿನಿ ಪ್ರೇಮಿಗಳಿಗೂ ಆಘಾತ ಮೂಡಿಸಿದೆ. ಭಾರತೀಯ ಕ್ರೀಡಾಲೋಕದ ತಾರೆಯರು ಪುನೀತ್ ರಾಜ್ಕುಮಾರ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. "ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ಆಘಾತ ಹಾಗೂ ತೀವ್ರ ದುಃಖವನ್ನುಂಟು ಮಾಡಿದೆ. ಪುನೀತ್ ರಾಜ್ಕುಮಾರ್ ಅವರ ಅಗಲಿಕೆಯೊಂದಿಗೆ ಕನ್ನಡ ಚಿತ್ರರಂಗ ಅಪೂರ್ವ ರತ್ನವೊಂದನ್ನು ಕಳೆದುಕೊಂಡಿದೆ. ನಾನು ಭೆಟಿ ಮಾಡಿದ ಮಾನವೀಯ ವ್ಯಕ್ತಿತ್ವಗಳಲ್ಲಿ ರಾಜ್ಕುಮಾರ್ ಕೂಡ ಒಬ್ಬರು. ತುಂಬಾ ಬೇಗನೆ ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ, ಗೆಳೆಯರಿಗೆ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಸಂತಾಪಗಳು" ಎಂದು ಅನಿಲ್ ಕುಂಬ್ಳೆ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications