ವೀರೂ ಆಲೋಚನೆಯ ಧಾಟಿ ಬೇರೆ
ಸೆಹ್ವಾಗ್ ಪ್ರಕಾರ, ಧೋನಿ ಅವರು 2019ರ ಹೊತ್ತಿಗೆ ಫಿಟ್ನೆಸ್ ಹಾಗೂ ಆಟದಲ್ಲಿ ಮೊನಚು - ಎರಡನ್ನೂ ಕಳೆದುಕೊಳ್ಳಲಿದ್ದಾರೆ. ಈಗ ಯಾವುದೇ ಟೂರ್ನಿಯಲ್ಲಿ ಧೋನಿ ರನ್ ಗಳಿಸುತ್ತಾರೋ, ಇಲ್ಲವೋ ಅದು ಮುಖ್ಯವಲ್ಲ. ವಿಶ್ವಕಪ್ ತಂಡಕ್ಕೆ ಅವರು ಆಯ್ಕೆಗೊಂಡರೆ ಅವರು ಉತ್ತಮವಾಗಿ ಆಡಬಲ್ಲರೇ ಎಂಬುದನ್ನು ಪ್ರಮುಖವಾಗಿ ಆಲೋಚಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಧೋನಿ ಆಟ ಮಂಕಾದರೆ ಏನು ಗತಿ?
ಮಧ್ಯಮ ಕ್ರಮಾಂಕದಲ್ಲಿ ಧೋನಿ ಅವರು ತಂಡಕ್ಕೆ ಆಧಾರ ಸ್ತಂಭವಾಗಿರುವುದಂತೂ ನಿಜ. ಯಾವುದೇ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಒಂದಿಷ್ಟು ಭರವಸೆಯ ಬ್ಯಾಟ್ಸ್ ಮನ್ ಗಳು ಇರಲೇಬೇಕು. ಆರಂಭಿಕರು ಕೈಕೊಟ್ಟರೆ ಇನಿಂಗ್ಸ್ ಮೇಲೆತ್ತುವ ಜವಾಬ್ದಾರಿ ಮಧ್ಯಮ ಕ್ರಮಾಂಕದ ಮೇಲೇ ಇರುತ್ತದೆ. ಸದ್ಯಕ್ಕೆ ಮಧ್ಯಮ ಕ್ರಮಾಂಕದಲ್ಲಿ ಧೋನಿ ಇರುವುದರಿಂದ ಯಾವುದೇ ಭಯವಿಲ್ಲ. ಆದರೆ, ಅವರು ತಮ್ಮ ಆಟದಲ್ಲಿನ ಮೊನಚು ಕಳೆದುಕೊಂಡರೆ ಏನು ಗತಿ ? ಎಂದು ಪ್ರಶ್ನಿಸುತ್ತಾರೆ ಸೆಹ್ವಾಗ್.
ಅವರಿಗೊಬ್ಬರು ಪರ್ಯಾಯ ಬೇಕು
ತಮ್ಮ ಮಾತನ್ನು ಮತ್ತಷ್ಟು ವಿಸ್ತರಿಸಿ ಹೇಳುವ ಅವರು, ಸದ್ಯಕ್ಕೆ ಧೋನಿ ಮಧ್ಯಮ ಕ್ರಮಾಂಕದ ಪ್ರಮುಖ ಹಾಗೂ ಭರವಸೆಯ ಬ್ಯಾಟ್ಸ್ ಮನ್ ಎಂದೆನಿಸಿದ್ದಾರೆ. ಆದರೆ, 2019ರ ಹೊತ್ತಿಗೆ ಅವರಿಗೆ ಪರ್ಯಾಯವಾಗಿ ಅಂಥದ್ದೇ ಬ್ಯಾಟ್ಸ್ ಮನ್ ಒಬ್ಬನನ್ನು ಸೃಷ್ಟಿಸುವ ಅಗತ್ಯವಿದೆ ಎನ್ನುತ್ತಾರೆ. ಆಗ, ಧೋನಿ ತಂಡಕ್ಕೆ ಆಯ್ಕೆಯಾಗಲಿ, ಬಿಡಲಿ ತಂಡಕ್ಕೆ ಧೋನಿಯಷ್ಟೇ ಬಲಿಷ್ಠ ಆಟಗಾರನೊಬ್ಬ ತಂಡಕ್ಕೆ ಸಿಕ್ಕಂತಾಗುತ್ತದೆ ಎಂಬ ನಿಲುವು ಅವರದ್ದು.
ಸೆಹ್ವಾಗ್ ಸೂಚಿಸಿದ ಹೆಸರು ಪಂತ್!
ಅದೇನೋ ಸರಿ, ಧೋನಿಗೆ ಪರ್ಯಾಯವಾಗಿ ನಿಲ್ಲುವಂಥ ಬ್ಯಾಟ್ಸ್ ಮನ್ ಒಬ್ಬರನ್ನು ಸೂಚಿಸಿ ಎಂದರೆ ಸೆಹ್ವಾಗ್ ನೀಡುವ ಉತ್ತರ ರಿಷಬ್ ಪಂತ್. ಈ ಯುವ ಆಟಗಾರ ಈಗ ಧೋನಿಯಷ್ಟು ಪರಿಣಾಮಕಾರಿ ಆಟಗಾರನಲ್ಲ. ಆದರೆ, ಆತನಿಗೆ ಧೋನಿಯ ಸ್ಥಾನ ತುಂಬುವಷ್ಟು ಟ್ಯಾಲೆಂಟ್ ಇದೆ. ಹಾಗಾಗಿ, ಈಗಿನಿಂದಲೇ ಆತನನ್ನು ಧೋನಿಗೆ ಪರ್ಯಾಯ ಎಂಬ ದೃಷ್ಟಿಕೋನವನ್ನಿಟ್ಟುಕೊಂಡು ಬೆಳೆಸಿದರೆ, ಆತ ಮುಂದೆ ಧೋನಿ ಸ್ಥಾನ ತುಂಬುತ್ತಾನೆ. ಆದರೆ, ಅದಕ್ಕೆ ಸಾಕಷ್ಟು ಕಾಲಾವಕಾಶ ಬೇಕು. ಹಾಗಾಗಿ, ಆತನಿಗೆ ವಿಶೇಷ ಗಮನ, ತರಬೇತಿ ನೀಡುವ ಕೆಲಸ ಈಗಿನಿಂದಲೇ ಶುರುವಾಗಬೇಕು ಎನ್ನುತ್ತಾರೆ ಸೆಹ್ವಾಗ್.