ಮ್ಯಾಂಚೆಸ್ಟರ್, ಜುಲೈ 10: ಮಳೆ ಆಟದ ನಡುವೆ ಬುಧವಾರಕ್ಕೆ ಮುಂದೂಡಲ್ಪಟ್ಟಿದ್ದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 240 ರನ್ಗಳ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ಪ್ರಶಸ್ತಿ ಫೇವರಿಟ್ ಟೀಮ್ ಇಂಡಿಯಾ ಅಂತಿಮವಾಗಿ 18 ರನ್ಗಳ ಸೋಲುಂಡಿತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯಕ್ಕೂ ಮುನ್ನ ಚೂರು ಪಾರು ಆಟಗಾರ ಎಂದೆಲ್ಲಾ ಅವಮಾನಕ್ಕೊಳಗಾಗಿದ್ದ ರವೀಂದ್ರ ಜಡೇಜಾ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ 59 ಎಸೆತಗಳಲ್ಲಿ 77 ರನ್ಗಳನ್ನು ಸಿಡಿಸಿದರಾದರೂ ಭಾರತ ತಂಡ 49.3 ಓವರ್ಗಳಲ್ಲಿ 221 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿತು. ಇದು ಏಕದಿನ ಕ್ರಿಕೆಟ್ನಲ್ಲಿ ಜಡೇಜಾ 5 ವರ್ಷಗಳ ನಂತರ ಗಳಿಸಿದ ಮೊದಲ ಅರ್ಧಶತಕವಾಗಿದೆ.
ಇದರೊಂದಿಗೆ ವಿಶ್ವಕಪ್ ಅಂಗಣದಲ್ಲಿ ಸತತ ಎರಡನೇ ಬಾರಿ ಭಾರತ ತಂಡ ಸೆಮಿಫೈನಲ್ಸ್ ಹಂತದಲ್ಲಿ ನಿರ್ಗಮಿಸಿದೆ. 2015ರ ಸೆಮಿಫೈನಲ್ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲುಂಡಿತ್ತು. ಇದೀಗ ನ್ಯೂಜಿಲೆಂಡ್ ಎದುರು ಮುಗ್ಗರಿಸಿದೆ.
ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆ ಬರೆದ ವಿಲಿಯಮ್ಸನ್
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ (1), ವಿರಾಟ್ ಕೊಹ್ಲಿ (1) ಮತ್ತು ಕೆ.ಎಲ್ ರಾಹುಲ್ (1) ಅವರ ವೈಫ್ಯಲ್ಯದ ಪರಿಣಾಮ ಭಾರತ ತಂಡದ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ಮೇಲೆ ಒತ್ತಡ ಹೆಚ್ಚಾಯಿತು. ರಿಷಭ್ ಪಂತ್ (32) ಮತ್ತು ಹಾರ್ದಿಕ್ ಪಾಂಡ್ಯ (32) ಆರಂಭ ಪಡೆದರಾದರೂ ತಾಳ್ಮೆಯಿಂದ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿ ಅನಗತ್ಯ ಹೊಡೆತಗಳಿಗೆ ಮುಂದಾಗಿ ವಿಕೆಟ್ ಒಪ್ಪಿಸಿಬಿಟ್ಟರು.
ಆದರೂ, 200ರ ಗಡಿಯೊಳಗೆ ಆಲ್ಔಟ್ ಆಗಬೇಕಿದ್ದ ತಂಡವನ್ನು ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎಂ.ಎಸ್ ಧೋನಿ (50) ಮತ್ತು ಜಡೇಜಾ 7ನೇ ವಿಕೆಟ್ 116 ರನ್ಗಳ ಜೊತೆಯಾಟ ನಡೆಸಿ ಗೆಲುವಿನ ಆಸೆಯನ್ನು ಹಿಡಿದಿಟ್ಟಿದ್ದರು.
ವಿಶ್ವಕಪ್ ಸೆಮಿಫೈನಲ್ಗೆ ಶಮಿ, ಕುಲ್ದೀಪ್ ಅವರನ್ನು ಹೊರಗಿಟ್ಟಿದ್ದೇಕೆ?
ಸತತ ಮೂರು ವಿಶ್ವಕಪ್ ಸೆಮಿಫೈನಲ್ಗಳಲ್ಲಿ ಕೊಹ್ಲಿ ವೈಫಲ್ಯ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದು ಮೂರನೇ ವಿಶ್ವಕಪ್ ಹಾಗೆಯೇ ಮೂರನೇ ವಿಶ್ವಕಪ್ ಸೆಮಿಫೈನಲ್ಸ್ ಕೂಡ. ಒಡಿಐ ಕ್ರಿಕೆಟ್ನ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಕೊಹ್ಲಿ, ಮೂರು ವಿಶ್ವಕಪ್ ಸೆಮಿಫೈನಲ್ಸ್ಗಳಲ್ಲಿ ಗಳಿಸಿರುವ ಒಟ್ಟು ರನ್ 11. 2011ರ ಸೆಮಿಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 9 ರನ್ಗಳಿಸಿ ಔಟ್ ಆಗಿದ್ದರು. 2015ರಲ್ಲಿ 1 ರನ್ ಮಾತ್ರವೇ ಗಳಿಸಿದ್ದರು. ಇದೀಗ ಈ ಬಾರಿಯೂ 1 ರನ್ ಸಂಪಾದಿಸಿ ನಿರ್ಗಮಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಯಿತು. ಇನ್ನು ವಿಶೇಷ ಎಂಬಂತೆ ಮೂರೂ ಸೆಮಿಫೈನಲ್ಸ್ನಲ್ಲಿ ಕೊಹ್ಲಿ ಔಟ್ ಆಗಿರುವುದು ಎಡಗೈ ವೇಗದ ಬೌಲರ್ಗಳಿಗೆ. 2011ರಲ್ಲಿ ವಹಾಬ್ ರಿಯಾಝ್ಗೆ ವಿಕೆಟ್ ಒಪ್ಪಿಸಿದ ಕೊಹ್ಲಿ ಅವರನ್ನು 2015ರಲ್ಲಿ ಮಿಚೆಲ್ ಜಾನ್ಸನ್ ಬಲಿ ಪಡೆದಿದ್ದರು. ಇದೀಗ ಟ್ರೆಂಟ್ ಬೌಲ್ಟ್ ಟೀಮ್ ಇಂಡಿಯಾ ನಾಯಕನ್ನು ಎಲ್ಬಿಡಬ್ಲ್ಯು ಖೆಡ್ಡಕ್ಕೆ ಕೆಡವುದರಲ್ಲಿ ಯಶಸ್ವಿಯಾದರು.
ರಾಯುಡು ಮುಂದಿರಿಸಿ ಧೋನಿಗೆ ಜರಿದ ಯುವರಾಜ್ ಸಿಂಗ್ ತಂದೆ
"ಪಂದ್ಯದ ಮೊದಲ ಅವಧಿಯಲ್ಲಿ ನಾವು ಉತ್ತಮವಾಗಿ ಆಡಿದೆವು. ಈ ಹಂತದ ಹೊತ್ತಿಗೆ ನಾವು ಏನು ಮಾಡಬೇಕೆಂದಿದ್ದವೋ ಅದನ್ನು ಮಾಡಿ ಆಗಿತ್ತು. ಗುರಿ ಬೆನ್ನತ್ತಬಹುದಾದ ಮೊತ್ತಕ್ಕೆ ನ್ಯೂಜಿಲೆಂಡ್ ತಂಡವನ್ನು ಕಟ್ಟಿ ಹಾಕಿದ್ದೆವು. ಆದರೆ, ಅವರ ಬೌಲಿಂಗ್ ಪ್ರದರ್ಶನ ಎಲ್ಲವನ್ನು ಬದಲಾಯಿಸಿಬಿಟ್ಟಿತು. ನಮ್ಮ ಮೇಲೆ ಒತ್ತಡ ಹಿಡಿದಿಟ್ಟ ನ್ಯೂಜಿಲೆಂಡ್ ಗೆಲುವಿಗೆ ಅರ್ಹ ತಂಡ. ನಮ್ಮ ಬ್ಯಾಟ್ಸ್ಮನ್ಗಳು ಕೆಟ್ಟ ಹೊಡೆತಗಳನ್ನಾಡಿ ಔಟಾದರು. ಇದು ಇನ್ನಷ್ಟು ಉತ್ತಮವಾಗಿರಬಹುದಿತ್ತು. ಆದರೆ, ಟೂರ್ನಿಯುದ್ದಕ್ಕೂ ನಮ್ಮ ತಂಡ ನೀಡಿರುವ ಪ್ರದರ್ಶನದ ಕುರಿತಾಗಿ ತೃಪ್ತಿ ಇದೆ," ಎಂದು ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದೇ ವೇಳೆ ರವೀಂದ್ರ ಜೇಜಾ ಕುರಿತಾಗಿ ಮಾತನಾಡಿದ ಕ್ಯಾಪ್ಟನ್ ಕೊಹ್ಲಿ, "ಜಡೇಜಾ ಕೇವಲ ಎರಡು ಪಂದ್ಯಗಳನ್ನು ಮಾತ್ರವೇ ಆಡಿದ್ದರು. ಆದರೂ ಅವರ ಆಟ ನಿಜಕ್ಕೂ ಅದ್ಭುತವಾಗಿತ್ತು. ಇದು ನಮ್ಮ ಪಾಲಿಗೆ ಒಳ್ಳೆಯ ಸಂಗತಿ,'' ಎಂದಿದ್ದಾರೆ.