ನ್ಯಾಟಿಂಗ್ ಹ್ಯಾಮ್, ಜೂನ್ 11: ಟೀಂ ಇಂಡಿಯಾದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ವಿಶ್ವಕಪ್ 2019ರ ಸಂದರ್ಭದಲ್ಲೇ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಎಡಗೈ ಸ್ಟೈಲಿಶ್ ಬ್ಯಾಟ್ಸ್ ಮನ್, ಬೌಲರ್, ಫೀಲ್ಡರ್ ಆಗಿ ಮಿಂಚಿದ್ದ ಯುವಿ ಬಗ್ಗೆ ಗೆಳೆಯ, ಆರಂಭಿಕ ಆಟಗಾರ ರೋಹಿತ್ ಶರ್ಮ ಮಾತನಾಡಿದ್ದಾರೆ. ಯುವಿ ಅವರಿಗೆ ವಿದಾಯ ಪಂದ್ಯ ನೀಡಬೇಕಿತ್ತು. ಒಳ್ಳೆ ಫೇರ್ ವೆಲ್ ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ಗೆ ಬಿಸಿಸಿಐನಿಂದಲೇ ಮೋಸ!
17 ವರ್ಷಗಳ ಕಾಲ ಸಾಕಷ್ಟು ಏಳುಬೀಳು, ಆರೋಗ್ಯ ಸಮಸ್ಯೆ, ವೈಯಕ್ತಿಕ ಬದುಕಿನಲ್ಲಿ ತೊಂದರೆ ಅನುಭವಿಸಿದರೂ ಮೈದಾನದಲ್ಲಿ 100% ಆಟ ನೀಡುತ್ತಿದ್ದ ಯುವರಾಜ್ ಎಲ್ಲರಿಗೂ ಮಾದರಿ ಎಂದಿರುವ ರೋಹಿತ್, ಕಳೆದುಕೊಂಡಾಗಲೇ ಆ ವಸ್ತುವಿನ ಬೆಲೆ ಗೊತ್ತಾಗುತ್ತದೆ. ಸೋದರ ಸಮಾನ ಯುವಿಗೆ ಉತ್ತಮ ವಿದಾಯ ನೀಡಬೇಕಿತ್ತು ಎಂದು ಭಾರತದ ಉಪ ನಾಯಕ ಟ್ವೀಟ್ ಮಾಡಿದ್ದಾರೆ.
40 ಟೆಸ್ಟ್ ಪಂದ್ಯ, 304 ಒಡಿಐ, 58 ಟಿ20ಐ ಆಡಿರುವ ಯುವರಾಜ್ ಅವರು ಕ್ರಮವಾಗಿ 1900 ರನ್ ಹಾಗೂ 8701 ರನ್ ಗಳಿಸಿದ್ದಾರೆ. ಅತ್ಯಧಿಕ ರನ್ ಗಳಿಕೆ ಪಟ್ಟಿಯ ಭಾರತೀಯರಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ವೀರೆಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಹಾಗೂ ಗೌತಮ್ ಗಂಭೀರ್ ಅವರಂತೆ ಯುವರಾಜ್ ಸಿಂಗ್ ಗೂ ವಿದಾಯ ಪಂದ್ಯ ಸಿಕ್ಕಿಲ್ಲ.
ಆದರೆ, ವಿದಾಯ ಪಂದ್ಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ಹಿಂದೆ ಪ್ರಸ್ತಾಪಿಸಿತ್ತು. ಯೋ ಯೋ ಟೆಸ್ಟ್ ನಲ್ಲಿ ಫೇಲಾದರೆ ಮಾತ್ರ ವಿದಾಯ ಪಂದ್ಯ ನೀಡುವ ಭರವಸೆ ಸಿಕ್ಕಿತ್ತು. ಆದ್ರೆ, ಯುವರಾಜ್ ಸಿಂಗ್ ಯೋ ಯೋ ಟೆಸ್ಟ್ ಪಾಸಾಗಿ ಫಿಟ್ನೆಸ್ ಸಾಬೀತುಪಡಿಸಿದ್ದರೂ ತಂಡಕ್ಕೂ ಆಯ್ಕೆಯಾಗಲಿಲ್ಲ, ವಿದಾಯ ಪಂದ್ಯದ ಭರವಸೆಯೂ ಪೂರ್ಣಗೊಳ್ಳಲಿಲ್ಲ.
37 ವರ್ಷ ವಯಸ್ಸಿನ ಯುವರಾಜ್ ಸಿಂಗ್ ಕೊನೆಯ ಬಾರಿಗೆ ಭಾರತದ ಪರ ಜೂನ್ 2017ರಂದು ಆಡಿದ್ದರು.